ಪುನೀತ್ ರಾಜ್ಕುಮಾರ್ ಚಿತ್ರ ಹಿಡಿದ ರಾಹುಲ್ ಗಾಂಧಿ!
ಭಾರತ್ ಜೋಡೋ ಯಾತ್ರೆ ಕರ್ನಾಟಕ ಪ್ರವೇಶಿಸಿ ಕೆಲವು ದಿನಗಳಾಗಿದ್ದು, ಕರ್ನಾಟಕದಲ್ಲಿ ರಾಹುಲ್ ಗಾಂಧಿಯ ಕಾಲ್ನಡಿಗೆ ಯಾತ್ರೆ ಅಬ್ಬರದಿಂದ ಸಾಗಿದೆ.
ಪ್ರತಿದಿನ 30-40 ಕಿ.ಮೀ ನಡೆಯುತ್ತಿರುವ ರಾಹುಲ್ ಗಾಂಧಿ, ದಾರಿಯಲ್ಲಿ ಹಲವರನ್ನು ಬೆರೆಯುತ್ತಿದ್ದಾರೆ. ಜನರೊಟ್ಟಿಗೆ ಬೆರೆಯುತ್ತಿದ್ದಾರೆ. ಯುವಕರನ್ನು, ಸ್ಥಳೀಯ ನಾಯಕರನ್ನು ಭೇಟಿಯಾಗುತ್ತಿದ್ದಾರೆ.
ಇಂದು ರಾಹುಲ್ ಗಾಂಧಿಯ ಭಾರತ್ ಜೋಡೋ ಯಾತ್ರೆ ಚಿತ್ರದುರ್ಗ ಜಿಲ್ಲೆ ಹಾದು ಹೊರಟಿದ್ದು, ಇಂದು ರಾಹುಲ್ ಗಾಂಧಿಯವರು ಕೆಲವು ಯುವಕರೊಟ್ಟಿಗೆ ಬೆರೆತಿದ್ದಾರೆ. ಈ ಸಂದರ್ಭದಲ್ಲಿ ಪುನೀತ್ ರಾಜ್ಕುಮಾರ್ ಅವರ ಚಿತ್ರವನ್ನು ಹಿಡಿದುಕೊಂಡು ಫೋಟೊಕ್ಕೆ ಯುವಕರೊಟ್ಟಿಗೆ ಫೋಸು ನೀಡಿದ್ದಾರೆ ರಾಹುಲ್ ಗಾಂಧಿ.

ಭಾರತ ಐಕ್ಯತಾ ಯಾತ್ರೆಯಲ್ಲಿ ರಾಹುಲ್ ಗಾಂಧಿ ಅವರೊಟ್ಟಿಗೆ ಹೆಜ್ಜೆ ಹಾಕುತ್ತಿರುವ ಯುವಕರಲ್ಲಿ ಕೆಲವರು ಪುನೀತ್ ರಾಜ್ಕುಮಾರ್ ಅವರಿಂದ ಪ್ರೇರಿತರಾಗಿ ಮೈಸೂರಿನ ಜೆಎಸ್ಎಸ್ ಆಸ್ಪತ್ರೆಯಲ್ಲಿ ನೇತ್ರದಾನ ಮಾಡಲು ನೊಂದಣಿ ಮಾಡಿಕೊಂಡಿದ್ದರು. ಅವರಿಗೆ ಇಂದು ದಾಖಲಾತಿಗಳು ತಲುಪಿದ್ದು, ಅವರೆಲ್ಲರೂ ದಾಖಲೆಗಳನ್ನು ಹಿಡಿದುಕೊಂಡು ರಾಹುಲ್ ಗಾಂಧಿ ಅವರೊಟ್ಟಿಗೆ ಕುಳಿತು ಫೋಟೊಕ್ಕೆ ಫೋಸು ನೀಡಿದರು.
ಪುನೀತ್ ರಾಜ್ಕುಮಾರ್ ಸ್ಪೂರ್ತಿಯಿಂದ ನೇತ್ರದಾನ ಮಾಡಿರುವ ಕಾರಣ ರಾಹುಲ್ ಗಾಂಧಿ ಅವರು ಪುನೀತ್ ರಾಜ್ಕುಮಾರ್ ಅವರ ಚಿತ್ರವನ್ನು ಕೈಯಲ್ಲಿ ಹಿಡಿದು, ನೇತ್ರದಾನ ಮಾಡಿದ 33 ಮಂದಿ ನೇತ್ರದಾನಿಗಳ ಜೊತೆ ಕುಳಿತು ಫೋಟೊಕ್ಕೆ ಫೋಸು ನೀಡಿದ್ದಾರೆ. ಈ ಚಿತ್ರವನ್ನು ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ದೊಡ್ಮನೆ ರಾಹುಲ್ ಗಾಂಧಿಗೆ ಹೊಸದೇನೂ ಅಲ್ಲ. ಕಳೆದ ಕರ್ನಾಟಕ ವಿಧಾನಸಭಾ ಚುನಾವಣೆ ಪ್ರಚಾರ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರು ರಾಜ್ಕುಮಾರ್ ಕುಟುಂಬದವರನ್ನು ಭೇಟಿಯಾಗಿದ್ದರು.
ಕರ್ನಾಟಕದಲ್ಲಿ ನೇತ್ರದಾನದ ಬೃಹತ್ ಜಾಗೃತಿಗೆ ದೊಡ್ಮನೆ ಕುಟುಂಬದವರು ಕಾರಣರಾಗಿದ್ದಾರೆ. ಡಾ ರಾಜ್ಕುಮಾರ್ ಅವರು ನೇತ್ರದಾನ ಮಾಡಿದ್ದರು. ಅದನ್ನೇ ಸ್ಪೂರ್ತಿಯಾಗಿ ಪಡೆದು ಲಕ್ಷಾಂತರ ಮಂದಿ ನೇತ್ರದಾನಕ್ಕೆ ನೊಂದಾಯಿಸಿಕೊಂಡಿದ್ದರು. ಪುನೀತ್ ರಾಜ್ಕುಮಾರ್ ಅವರೂ ಸಹ ನೇತ್ರದಾನಕ್ಕೆ ನೊಂದಾಯಿಸಿಕೊಂಡಿದ್ದರು. ಅವರು ಅಗಲಿದ ಬಳಿಕ ಪುನೀತ್ ಕಣ್ಣುಗಳನ್ನು ಸಂರಕ್ಷಿಸಿ, ನಾಲ್ವರು ಅಂಧರಿಗೆ ದೃಷ್ಟಿ ಬರುವಂತೆ ನಾರಾಯಣ ನೇತ್ರಾಲಯ ವೈದ್ಯರು ಮಾಡಿದ್ದಾರೆ. ಇದೀಗ ಪುನೀತ್ ಅವರನ್ನು ಆದರ್ಶವಾಗಿಟ್ಟುಕೊಂಡು ಕೋಟ್ಯಂತರ ಮಂದಿ ನೇತ್ರದಾನ ಮಾಡುತ್ತಿದ್ದಾರೆ.


Click it and Unblock the Notifications











