70 ಅಂಧ ಮಕ್ಕಳನ್ನು ರಕ್ಷಿಸಿ ಆಶ್ರಯ ನೀಡಿದ ಯಶ್ 'ಯಶೋಮಾರ್ಗ'
ಉತ್ತರ ಕರ್ನಾಟಕದಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿಗೆ ಅಲ್ಲಿನ ಜನ ಜೀವನ ಅಸ್ತವ್ಯಸ್ತವಾಗಿದೆ. ವರುಣನ ರೌದ್ರ ನರ್ತನಕ್ಕೆ ಉತ್ತರ ಕರ್ನಾಟಕ, ಮಲೆನಾಡು, ಕರಾವಳಿ ಸೇರಿದಂತೆ ಕರ್ನಾಟಕದ ಬಹುತೇಕ ಭಾಗ ಜಲಾವೃತವಾಗಿದೆ.
ನೆರೆಹಾವಳಿಯಿಂದ ಜನರು ಬದುಕೇ ಪ್ರವಾಹದಲ್ಲಿ ಕೊಚ್ಚಿಹೋಗಿದೆ. ಉತ್ತರ ಕರ್ನಾಟಕದಲ್ಲಿ ಒಂದೊತ್ತಿನ ಊಟಕ್ಕು ಪರದಾಡುವಂತಾಗಿದೆ. ನೆರೆ ಸಂತ್ರಸ್ತರ ಕಷ್ಟಕ್ಕೆ ಇಡೀ ಕರ್ನಾಟಕ ಜನ ನಿಂತಿದೆ. ಅಲ್ಲಿಗೆ ಬೇಕಾದಂತಹ ಅಗತ್ಯ ವಸ್ತುಗಳನ್ನು ಪೂರೈಸಲಾಗುತ್ತಿದೆ.
ಸಂತ್ರಸ್ತ ಜನರ ನೆರವಿಗೆ ಕನ್ನಡ ಚಿತ್ರರಂಗ ಕೂಡ ನಿಂತಿದೆ. ಬಹುತೇಕ ಕಲಾವಿದರು ಉತ್ತರ ಕರ್ನಾಟಕ ಜನರ ನೆರವಿಗೆ ಧಾವಿಸಿದ್ದಾರೆ. ನಟ ರಾಕಿಂಗ್ ಸ್ಟಾರ್ ಯಶ್ ತಮ್ಮ ಯಶೋಮಾರ್ಗ ಸಂಸ್ಥೆ ಮೂಲಕ ಉತ್ತರ ಕರ್ನಾಟಕ ಜನರ ಸಹಾಯ ಮಾಡುತ್ತಿದ್ದಾರೆ.

ಅಂಧ ಮಕ್ಕಳನ್ನು ರಕ್ಷಿಸಿದ ಯಶೋಮಾರ್ಗ
ಜಲಪ್ರಳಯದಿಂದ ಜೀವ ಉಳಿಸಿಕೊಳ್ಳಲು ಪರದಾಡುತ್ತಿರುವ ಜನರನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗುತ್ತಿದೆ. ಇದ್ರ ನಡುವೆ 70 ಜನ ಅಂಧ ಮಕ್ಕಳು ಇದ್ದ ವಸತಿ ಶಾಲೆ ನೀರಿನಲ್ಲಿ ಮುಳುಗುವ ಸ್ಥಿತಿಯಲ್ಲಿತ್ತು. ದನ್ನು ಗಮನಿಸಿದ ಯಶೋಮಾರ್ಗ ಅವರನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಿದ್ದಾರೆ.

ಧಾರವಾಡದ ಚೈತನ್ಯ ಕಲಾ ಮಂಟಪದಲ್ಲಿ ಆಶ್ರಯ
ಪ್ರವಾಹ ಬಂದು ಇಡೀ ಊರಿಗೆ ಊರೆ ಕೊಚ್ಚಿಕೊಂಡು ಹೊಗುತ್ತಿದೆ. ಆದ್ರೆ ಅಂಧ ಮಕ್ಕಳಿಗೆ ಮಾತ್ರ ಸುತ್ತ ಏನಾಗುತ್ತಿದೆ ಎಂದು ಗೊತ್ತಾಗುತ್ತಿಲ್ಲ. ಗದಗ ಜಿಲ್ಲೆಯ ಹೊಲೆ ಆಲೂರಿನ ಜ್ಞಾನಸಿಂಧು ಅಂಧ ಮಕ್ಕಳ ವಸತಿ ಶಾಲೆ ಮಳೆಯ ರಭಸಕ್ಕೆ ಮುಳುಗಿ ಹೋಗಿದೆ. ಅಲ್ಲಿದ್ದ ಮಕ್ಕಳನ್ನು ತಕ್ಷಣಕ್ಕೆ ಧಾರವಾಡದ ಚೈತನ್ಯ ಕಲಾ ಮಂಟಪದಲ್ಲಿ ಆಶ್ರಯ ನೀಡಲಾಗಿದೆ.

ಮಕ್ಕಳಿಗೆ ಅಗತ್ಯ ವಸ್ತುಗಳ ಪೂರೈಕೆ
ಸುಮಾರು 70 ಮಕ್ಕಳನ್ನು ರಕ್ಷಿಸಿ ಆಶ್ರಯ ನೀಡಿರುವ ಯಶ್ ಸಂಸ್ಥೆ ಮಕ್ಕಳಿಗೆ ಬೇಕಾದ ಅಗತ್ಯ ವಸ್ತುಗಳನ್ನು ನೀಡಿದ್ದಾರೆ. ಜಾಕೆಟ್, ಊಟ, ತಿಂಡಿ ವ್ಯವಸ್ಥೆಯನ್ನು ನೀಟಾಗಿ ಮಾಡಿಕೊಟ್ಟಿದ್ದಾರೆ. ಜೊತೆಗೆ ಸಾಕಷ್ಟು ಜನರಿಗೂ ಆಶ್ರಯ ಕಲ್ಪಿಸಿಕೊಟ್ಟಿದೆ ಯಶೋಮಾರ್ಗ.

ಯಶೋಮಾರ್ಗ ಮೂಲಕ ಸಹಾಯ
ಯಶೋಮಾರ್ಗ ಮೂಲಕ ರಾಕಿಂಗ್ ಸ್ಟಾರ್ ಯಶ್ ಉತ್ತರ ಕರ್ನಾಟಕ ಜನರ ನೆರವಿಗೆ ನಿಂತಿದ್ದಾರೆ. ಸಾಕಷ್ಟು ಉತ್ತಮ ಕೆಲಸಗಳನ್ನು ಮಾಡಿಕೊಂಡು ಬರುತ್ತಿದೆ ಯಶೋಮಾರ್ಗ. ಬರ ಪರಿಸ್ಥಿತಿ ಸಂದರ್ಭದಲ್ಲೂ ಹಳ್ಳಿ ಹಳ್ಳಿಗೆ ಹೋಗಿ ನೀರು ಸರಬರಾಜು ಮಾಡಿದೆ. ಈಗ ನೆರೆ ಹಾವಳಿಯ ಸಂದರ್ಭದಲ್ಲಿ ಯಶೋಮಾರ್ಗ ಜನರಿಗೆ ಅಗತ್ಯ ವಸ್ತುಗಳನ್ನು ಪೂರೈಸುತ್ತಿದೆ.


Click it and Unblock the Notifications











