ಚಿತ್ರರಂಗದ ಒಡೆದ ಮನಸ್ಸುಗಳನ್ನು ಒಂದು ಮಾಡುವೆ
ಕನ್ನಡ ಚಿತ್ರರಂಗ ಇಬ್ಬಾಗವಾಗಿದೆ, ಪ್ರಮುಖ ನಟರುಗಳು ಗುಂಪು ಗುಂಪಾಗಿ ಬೇರೆ ಬೇರೆ ದಾರಿ ಹಿಡಿದಿದ್ದಾರೆ ಎನ್ನುವ ಮಾತು ಸತ್ಯಕ್ಕೆ ದೂರವಾದುದು. ಕೆಲವು ಕಾರಣಗಳಿಂದ ಗೊಂದಲಗಳಿರಬಹುದು, ಇರುವುದೂ ನಿಜ ಎಂದು ಕನ್ನಡ ಚಲನಚಿತ್ರ ಅಕಾಡೆಮಿಯ ನೂತನ ಅಧ್ಯಕ್ಷ ಎಸ್ ವಿ ರಾಜೇಂದ್ರ ಸಿಂಗ್ ಬಾಬು ಹೇಳಿದ್ದಾರೆ.
ಮಾತುಕತೆಯ ಮೂಲಕ ಎಲ್ಲದಕ್ಕೂ ಪರಿಹಾರ ಸಾಧ್ಯ, ಕನ್ನಡ ಚಿತ್ರರಂಗದ ಒಡೆದ ಮನಸ್ಸುಗಳನ್ನು ಒಂದು ಮಾಡೇ ಮಾಡುತ್ತೇನೆ. ನಾನು ಪ್ರಾಮಾಣಿಕವಾಗಿ ಈ ಕೆಲಸಕ್ಕೆ ಮುಂದಾಗಲಿದ್ದೇನೆ ಎಂದು ಅಕಾಡೆಮಿಯ ನೂತನ ಅಧ್ಯಕ್ಷ ಬಾಬು ಸ್ಪಷ್ಟ ಪಡಿಸಿದ್ದಾರೆ. (ಚಲನಚಿತ್ರ ಅಕಾಡೆಮಿಗೆ ರಾಜೇಂದ್ರಸಿಂಗ್ ಬಾಬು ಸಾರಥ್ಯ)
ಈಟಿವಿ ಕನ್ನಡ ನ್ಯೂಸಿನ 'ಸ್ಟ್ರೇಟ್ ಹಿಟ್' ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಬಾಬು, ಶಿವಣ್ಣ ಮತ್ತು ಸುದೀಪ್ ಹೆಸರು ಪ್ರಸ್ತಾಪಿಸದೇ ಮಾತುಕತೆಯ ಮೂಲಕ ಎಲ್ಲದಕ್ಕೂ ಪರಿಹಾರ ಕಾಣಬಹುದು. ಇಬ್ಬರಿಗೂ ಅಸಂಖ್ಯಾತ ಅಭಿಮಾನಿಗಳು ಇದ್ದಾರೆ ಎಂದು ಹೇಳಿದ್ದಾರೆ.

ಚಿತ್ರೋದ್ಯಮದಲ್ಲಿರುವ ಗೊಂದಲಕ್ಕೆ ತೆರೆ ಎಳೆಯಲು ಸಂಬಂಧಪಟ್ಟವರನ್ನು ಮಾತುಕತೆಗೆ ಆಹ್ವಾನಿಸದರೆ ಖಂಡಿತಾ ಬಂದೇ ಬರುತ್ತಾರೆ. ಎಲ್ಲದಕ್ಕೂ ಪರಿಹಾರ ಇದ್ದೇ ಇರುತ್ತೆ. ನಾನು ಆ ಕೆಲಸಕ್ಕೆ ಮುಂದಾಗಲಿದ್ದೇನೆಂದು ಬಾಬು ಆತ್ಮ ವಿಶ್ವಾಸದ ಮಾತನ್ನಾಡಿದ್ದಾರೆ.
ಅಕಾಡೆಮಿಗೆ ಹಣದ ಕೊರತೆಯಿದೆ ಎನ್ನುವುದು ಸತ್ಯವಲ್ಲ, ವಸ್ತುಸ್ಥಿತಿಯ ಅವಲೋಕನೆ ಮಾಡಿ ಈ ಮಾತನ್ನಾಡುತ್ತಿದ್ದೇನೆ. ನಮ್ಮ ಅಕಾಡೆಮಿಗೆ ಸರಕಾರ ಸ್ನೇಹಸೇತುವಾಗಿ ನಿಲ್ಲುವ ಭರವಸೆಯನ್ನು ಮುಖ್ಯಮಂತ್ರಿಗಳು ನೀಡಿದ್ದಾರೆ ಎಂದು ಬಾಬು ಹೇಳಿದ್ದಾರೆ.
ಎಸ್ ವಿ ರಾಜೇಂದ್ರ ಸಿಂಗ್ ಬಾಬು ಕನ್ನಡ ಚಿತ್ರರಂಗದ ಹಿರಿಯ ಮತ್ತು ಹೆಸರಾಂತ ನಿರ್ದೇಶಕರು. ಕಳೆದ ನಾಲ್ಕು ದಶಕಗಳಿಂದ ಚಿತ್ರ ನಿರ್ಮಾಣ, ನಿರ್ದೇಶನದಲ್ಲಿ ಸಕ್ರಿಯವಾಗಿರುವ ಬಾಬು, ಅಕಾಡೆಮಿಯ ಅಧ್ಯಕ್ಷರಾಗಿರುವುದು ಸಂಸ್ಥೆಗೆ ಹೊಸ ಚೇತನ ನೀಡುವ ನಿರೀಕ್ಷೆಯಿದೆ.
ಬಾಬು ನಿರ್ದೇಶಿಸಿದ ಕೆಲವು ಕನ್ನಡ ಸಿನಿಮಾಗಳ ಶೀರ್ಷಿಕೆಗಳು ನಿಮಗಾಗಿ, ನಾಗರಹೊಳೆ, ಕಿಲಾಡಿ ಜೋಡಿ, ಅಂತ, ಬಂಧನ, ಮುತ್ತಿನಹಾರ, ಕುರಿಗಳು ಸಾರ್ ಕುರಿಗಳು.


Click it and Unblock the Notifications











