ರಜನಿ ಭೇಟಿಯಾಗಿ ಆಶೀರ್ವಾದ ಪಡೆದ ರಿಷಬ್; 'ಕಾಡುಬೆಟ್ಟು ಶಿವ'ನಿಗೆ ತಲೈವಾ ಸನ್ಮಾನ
ವಿಶ್ವದಾದ್ಯಂತ ಕಾಂತಾರ ಅಬ್ಬರ ಜೋರಾಗಿದೆ. ಬಿಡುಗಡೆಯಾಗಿ ಮೂವತ್ತು ದಿನ ಪೂರೈಸಿರುವ ಕಾಂತಾರ ಈಗಾಗಲೇ ಇನ್ನೂರು ಕೋಟಿ ಕ್ಲಬ್ ಸೇರಿ ಅಬ್ಬರಿಸುತ್ತಿದೆ.
ಕೇವಲ ಕನ್ನಡ ಮಾತ್ರವಲ್ಲದೆ ತೆಲುಗು, ಹಿಂದಿ, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿಯೂ ಹಿಟ್ ಲಿಸ್ಟ್ ಸೇರಿರುವ ಕಾಂತಾರ ಚಿತ್ರವನ್ನು ತೆಲುಗು ಮತ್ತು ಮಲಯಾಳಂ ಚಿತ್ರರಂಗದ ಹಲವಾರು ಸ್ಟಾರ್ ನಟನಟಿಯರು ಮೆಚ್ಚಿಕೊಂಡು ಕೊಂಡಾಡಿದ್ದರು. ಇನ್ನು ಬಾಲಿವುಡ್ ಸಿನಿ ಮಂದಿಯಂತೂ ಕಾಂತಾರ ಚಿತ್ರಕ್ಕೆ ದೊಡ್ಡ ಮಟ್ಟದಲ್ಲಿ ಮನಸೋತಿದ್ದರು.
ತಮಿಳಿನ ಹಲವಾರು ಸ್ಟಾರ್ ಕಲಾವಿದರು ಚಿತ್ರವನ್ನು ವೀಕ್ಷಿಸಿ ಮೆಚ್ಚಿಕೊಂಡಿದ್ದರು. ಮೊದಲಿಗೆ ಧನುಷ್ ಚಿತ್ರ ವೀಕ್ಷಿಸಿ ಕಾಂತಾರ ಚಿತ್ರತಂಡವನ್ನು ಹಾಡಿ ಹೊಗಳಿದ್ದರು. ಬೆನ್ನಲ್ಲೇ ತಮಿಳು ನಟ ಕಾರ್ತಿ ಕೂಡಾ ಚಿತ್ರ ವೀಕ್ಷಿಸಿ ಖುದ್ದಾಗಿ ರಿಷಬ್ ಶೆಟ್ಟಿ ಅವರನ್ನು ಭೇಟಿಯಾಗಿ ಅಭಿನಂದಿಸಿದ್ದರು. ನಂತರ ರಜನೀಕಾಂತ್ ಕೂಡ ಚಿತ್ರ ವೀಕ್ಷಿಸಿ ಟ್ವೀಟ್ ಮಾಡುವ ಮೂಲಕ ಕಾಂತಾರ ಚಿತ್ರವನ್ನು ಹೊಗಳಿದ್ದರು. ಅಷ್ಟು ಮಾತ್ರವಲ್ಲದೇ ಇದೀಗ ರಿಷಬ್ ಶೆಟ್ಟಿ ಹಾಗೂ ರಜನಿಕಾಂತ್ ವೈಯಕ್ತಿಕವಾಗಿ ಭೇಟಿಯಾಗಿದ್ದಾರೆ. ಈ ಭೇಟಿಯ ಚಿತ್ರಗಳನ್ನು ಹೊಂಬಾಳೆ ಫಿಲ್ಮ್ಸ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.

ಗುರು ಜೊತೆ ಶಿಷ್ಯ ಎಂದು ಬರೆದುಕೊಂಡ ಹೊಂಬಾಳೆ ಫಿಲ್ಮ್ಸ್
ರಜನಿಕಾಂತ್ ಮತ್ತು ರಿಷಬ್ ಶೆಟ್ಟಿ ಪರಸ್ಪರ ಭೇಟಿಯಾಗಿರುವ ಚಿತ್ರಗಳನ್ನು ಹಂಚಿಕೊಂಡಿರುವ ಹೊಂಬಾಳೆ ಫಿಲ್ಮ್ಸ್ ಗುರು ಮತ್ತು ಶಿಷ್ಯ ಇಬ್ಬರೂ ಸಹ ಚರ್ಚೆಯಲ್ಲಿ ಮಗ್ನರಾಗಿದ್ದಾರೆ, ಒನ್ & ಓನ್ಲಿ ರಜಿನಿಕಾಂತ್ ನಮ್ಮ ಶಿವ ರಿಷಬ್ ಶೆಟ್ಟಿ ಜತೆಗೆ ಎಂದು ಬರೆದುಕೊಂಡಿದೆ.

ಕಾಂತಾರ ವೀಕ್ಷಿಸಿ ಕೊಂಡಾಡಿದ್ದ ರಜನಿಕಾಂತ್
ಇದಕ್ಕೂ ಮುನ್ನ ಕಾಂತಾರ ಚಿತ್ರವನ್ನು ವೀಕ್ಷಿಸಿದ್ದ ರಜನಿಕಾಂತ್ ಗೊತ್ತಿರುವುದಕ್ಕಿಂತ ಗೊತ್ತಿಲ್ಲದಿರುವುದೇ ಹೆಚ್ಚು ಎಂಬುದನ್ನು ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಕಾಂತಾರ ಚಿತ್ರಕ್ಕಿಂತ ಬೇರೆ ಯಾರೂ ಸಹ ಸಿನಿಮಾ ಮೂಲಕ ಅಚ್ಚುಕಟ್ಟಾಗಿ ತೋರಿಸಲು ಸಾಧ್ಯವಿಲ್ಲ ಎಂದು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದರು. ಅಷ್ಟೇ ಅಲ್ಲದೆ ರಿಷಬ್ ಶೆಟ್ಟಿ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದ ರಜನಿಕಾಂತ್ ಕಾಂತಾರ ಚಿತ್ರ ಭಾರತೀಯ ಚಿತ್ರರಂಗದ ಮಾಸ್ಟರ್ ಪೀಸ್ ಎಂದಿದ್ದರು.

ರಾಜ್ಯೋತ್ಸವದಂದು ಬೆಂಗಳೂರಿಗೆ ರಜನಿಕಾಂತ್
ಈ ವರ್ಷದ ಕನ್ನಡ ರಾಜ್ಯೋತ್ಸವ ಕನ್ನಡ ಸಿನಿ ರಸಿಕರಿಗೆ ಹಾಗೂ ಅಪ್ಪು ಅಭಿಮಾನಿಗಳಿಗೆ ಬಹಳ ವಿಶೇಷವಾದದ್ದು. ಏಕೆಂದರೆ ಈ ದಿನದಂದು ನಟ ಪುನೀತ್ ರಾಜ್ ಕುಮಾರ್ ಅವರಿಗೆ ಗೌರವ ಕರ್ನಾಟಕ ರತ್ನ ಪ್ರಶಸ್ತಿಯನ್ನು ಕರ್ನಾಟಕ ಸರ್ಕಾರ ನೀಡಲಿದೆ. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ರಜನಿಕಾಂತ್ ಅವರು ಆಗಮಿಸಲಿದ್ದಾರೆ ಎಂಬ ಸುದ್ದಿ ಇತ್ತು. ಈ ಕುರಿತಾಗಿ ಸ್ವತಃ ಸಿಎಂ ಬಸವರಾಜ ಬೊಮ್ಮಾಯಿ ಅವರೇ ಮಾತನಾಡಿದ್ದು ಮುಖ್ಯ ಅತಿಥಿಯನ್ನಾಗಿ ರಜನಿಕಾಂತ್ ಅವರನ್ನು ಆಹ್ವಾನಿಸಲಾಗಿದೆ ಹಾಗೂ ಕನ್ನಡ ಮಾತನಾಡಬಲ್ಲ ಜ್ಯೂನಿಯರ್ ಎನ್ ಟಿ ಆರ್ ಅವರು ಸಹ ಈ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ ಎಂದಿದ್ದಾರೆ.


Click it and Unblock the Notifications











