ರಜನಿ 'ಲಿಂಗಾ' ಬಗ್ಗೆ ಸುದ್ದಿ ಪ್ರಸಾರಕ್ಕೆ ತಡೆ
ಸೂಪರ್ ಸ್ಟಾರ್ ರಜನಿಕಾಂತ್ ಅವರ ಬಹುನಿರೀಕ್ಷಿತ ಚಿತ್ರ 'ಲಿಂಗಾ' ಶೂಟಿಂಗ್ ಮೈಸೂರಿನ ಸುತ್ತಮುತ್ತ ನಿರಂತರವಾಗಿ ನಡೆದಿದೆ. ಈ ನಡುವೆ ಚಿತ್ರದ ಕಥೆ ಸೋರಿಕೆಯಾಗಿ ದೊಡ್ಡ ಸುದ್ದಿಯಾಗಿದ್ದು ಎಲ್ಲರಿಗೂ ಗೊತ್ತೇ ಇದೆ. ಇದರಿಂದ ಚಿಂತಿತರಾದ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರು 'ಲಿಂಗಾ' ಚಿತ್ರದ ಕಥೆ ಬಗ್ಗೆ ಸುದ್ದಿ ಪ್ರಸಾರ ಮಾಡದಂತೆ ಮಾಧ್ಯಮಗಳ ವಿರುದ್ಧ ತಡೆಯಾಜ್ಞೆ ಆದೇಶ ಪಡೆದುಕೊಂಡಿದ್ದಾರೆ.
ಮೈಸೂರಿನ ಸ್ಥಳೀಯ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ದಿನಪತ್ರಿಕೆ, ಟಿವಿ ಮಾಧ್ಯಮ, ಎಲೆಕ್ಟ್ರಾನಿಕ್ ಮಾಧ್ಯಮ ಸೇರಿದಂತೆ ಯಾವುದೇ ರೀತಿಯಲ್ಲಿ ಲಿಂಗಾ ಚಿತ್ರದ ಕಥೆ ಹಾಗೂ ಚಿತ್ರೀಕರಣದ ಸುದ್ದಿ ವಿವರಗಳನ್ನು ಪ್ರಸಾರ ಮಾಡದಂತೆ ಸುಮಾರು 80 ಮಾಧ್ಯಮ ಸಂಸ್ಥೆಗಳ ವಿರುದ್ಧ ತಡೆಯಾಜ್ಞೆ ಆದೇಶ ಪಡೆದುಕೊಂಡಿದ್ದಾರೆ.
ಇತ್ತೀಚೆಗೆ ಲಿಂಗಾ ಚಿತ್ರದ ಕಥೆ ಲೀಕ್ ಆಗಿತ್ತು. ಕಥೆ ಬಗ್ಗೆ ಚಿತ್ರದ ನಾಯಕಿ ಸೋನಾಕ್ಷಿ ಸಿನ್ಹಾ ಅವರೇ ಹೇಳಿಕೊಂಡಿದ್ದರು ಎಂಬ ಸುದ್ದಿಯೂ ಹಬ್ಬಿತ್ತು. ಈ ಚಿತ್ರದಲ್ಲಿ ಮುಳ್ಳಪೆರಿಯಾರ್ ಅಣೆಕಟ್ಟಿನ ಪ್ರಸ್ತಾವನೆ ಇರುತ್ತದೆ ಎಂಬ ಅನುಮಾನಗಳೂ ವ್ಯಕ್ತವಾಗುತ್ತಿವೆ. ಸುಮಾರು 400 ವರ್ಷಗಳ ಹಿಂದೆ ಬ್ರಿಟೀಷರು ನಿರ್ಮಿಸಿದ ಈ ಅಣೆಕಟ್ಟು ವಿಚಾರದಲ್ಲಿ ತಮಿಳುನಾಡು, ಕೇರಳ ರಾಜ್ಯಗಳ ನಡುವೆ ವಿವಾದ ಇನ್ನೂ ಜೀವಂತವಾಗಿದೆ. ಹಾಗಾಗಿ 'ಲಿಂಗಾ' ಚಿತ್ರ ಚರ್ಚೆಯ ವಸ್ತುವಾಗಿದೆ.['ಲಿಂಗಾ' ಸ್ಟೋರಿಲೈನ್ ಲೀಕ್]

'ಲಿಂಗಾ ಬಹುಭಾಷಾ ಚಿತ್ರವಾಗಿದೆ. ಒಂದು ಭಾಷೆಯಲ್ಲಿ ಚಿತ್ರವನ್ನು ರಿಲೀಸ್ ಮಾಡಿದ ಮೇಲೆ ಡಬ್ ಆದ ಚಿತ್ರವನ್ನು ಮತ್ತೊಂದು ಭಾಷೆಯಲ್ಲಿ ರಿಲೀಸ್ ಮಾಡಲಾಗುತ್ತದೆ. ಚಿತ್ರೀಕರಣಕ್ಕೂ ಮುನ್ನವೇ ಚಿತ್ರ ಕಥೆ ಬಗ್ಗೆ ಇರುವ ಕುತೂಹಲ ತಣಿದರೆ ಚಿತ್ರಕ್ಕೆ ಭಾರಿ ನಷ್ಟವುಂಟಾಗುತ್ತದೆ' ಎಂದು ರಾಕ್ ಲೈನ್ ವೆಂಕಟೇಶ್ ಅರ್ಜಿ ಸಲ್ಲಿಸಿದ್ದರು. ಚಿತ್ರದ ಬಗ್ಗೆ ಕಾಮೆಂಟ್ ಮಾಡುವಾಗಲೂ ಎಚ್ಚರದಿಂದಿದ್ದರೆ ಒಳ್ಳೆಯದು.
ರಜನಿ ಜತೆ ಪಡೆಯಪ್ಪ, ಮುತ್ತು ಚಿತ್ರಗಳಲ್ಲಿ ದುಡಿದ ಯಶಸ್ವಿ ನಿರ್ದೇಶಕ ಕೆ.ಎಸ್.ರವಿಕುಮಾರ್ ಆಕ್ಷನ್, ಕಟ್ ಹೇಳುತ್ತಿರುವ ಲಿಂಗಾ ಚಿತ್ರವನ್ನು ರಾಕ್ ಲೈನ್ ವೆಂಕಟೇಶ್ ಅವರು ಭಾರಿ ಬಜೆಟ್ ನಲ್ಲಿ ನಿರ್ಮಿಸುತ್ತಿದ್ದಾರೆ. ಸೋನಾಕ್ಷಿ ಸಿನ್ಹಾ, ಅನುಷ್ಕಾ ಶೆಟ್ಟಿ ನಾಯಕರಾಗಿದ್ದು, ಮೈಸೂರು ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲೇ ಹೆಚ್ಚಿನ ಭಾಗದ ಚಿತ್ರೀಕರಣ ನಡೆಯಲಿದೆ. ಎ.ಆರ್ ರೆಹಮಾನ್ ಸಂಗೀತವಿರುವ ಈ ಚಿತ್ರದ ಬಗ್ಗೆ ನಿರೀಕ್ಷೆಗಳು ಗರಿಗೆದರುತ್ತಲೇ ಇವೆ.


Click it and Unblock the Notifications











