ಮಹೇಶ್ ಬಾಬು ಬಳಿಕ ರಶ್ಮಿಕಾ ಚಿತ್ರವನ್ನು ಹೊಗಳಿದ ರಾಮ್ ಚರಣ್
ಕನ್ನಡದ ನಟಿ ರಶ್ಮಿಕಾ ಮಂದಣ್ಣ ತೆಲುಗಿನಲ್ಲಿ ದಿನೇ ದಿನೇ ತಮ್ಮ ಜನಪ್ರಿಯತೆ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಟಾಲಿವುಡ್ ಚಿತ್ರರಂಗದ ದೊಡ್ಡ ದೊಡ್ಡ ನಟರು ಕೂಡ ರಶ್ಮಿಕಾ ನಟನೆಯನ್ನು ಹೊಗಳುತ್ತಿದ್ದಾರೆ.
ಇತ್ತೀಚಿಗಷ್ಟೆ ಬಿಡುಗಡೆಯಾಗಿರುವ 'ಗೀತಾ ಗೋವಿಂದಂ' ಸಿನಿಮಾಗೆ ದೊಡ್ಡ ಪ್ರತಿಕ್ರಿಯೆ ಸಿಕ್ಕಿದೆ. ತೆಲುಗು ಚಿತ್ರರಂಗದ ಬಿಗ್ ಸ್ಟಾರ್ ಗಳು ಈ ಸಿನಿಮಾ ಬಗ್ಗೆ ಮಾತನಾಡುತ್ತಿದ್ದಾರೆ. ಸದ್ಯ, ರಾಮ್ ಚರಣ್ ಈ ಚಿತ್ರದ ಬಗ್ಗೆ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಮೆಚ್ಚುಗೆ ಸೂಚಿಸಿದ್ದಾರೆ.
''ಅರ್ಜುನ್ ರೆಡ್ಡಿ' ಸಿನಿಮಾದ ನಂತರ ಸೂಕ್ತ ಪಾತ್ರವನ್ನು ವಿಜಯ್ ದೇವರಕೊಂಡ ಆಯ್ಕೆ ಮಾಡಿಕೊಂಡಿದ್ದಾರೆ. ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಅವರನ್ನು ನೋಡುವುದು ತುಂಬ ಖುಷಿ ಆಗುತ್ತದೆ. ಇಬ್ಬರೂ ಸಹಜವಾಗಿ ನಟಿಸಿದ್ದಾರೆ. ಅವರ ಅಭಿನಯ ಚಿತ್ರದ ಸುಂದರ ಕಥೆಯನ್ನು ಪೂರ್ಣಗೊಳಿಸಿದೆ. ಸಿನಿಮಾದ ಸಂಗೀತ ಚೆನ್ನಾಗಿದೆ. ಒಳ್ಳೆಯ ಕಥೆಯನ್ನು ಚೆನ್ನಾಗಿ ತೆರೆ ಮೇಲೆ ತಂದಿದ್ದಾರೆ.'' ಎಂದು ರಾಮ್ ಚರಣ್ ಬರೆದುಕೊಂಡಿದ್ದಾರೆ.
ರಾಮ್ ಚರಣ್ ಅವರ ಬರಹಕ್ಕೆ ಪ್ರತಿಕ್ರಿಯೆ ನೀಡಿರುವ ರಶ್ಮಿಕಾ ''ಸರ್, ನೀವು ಸಿನಿಮಾ ನೋಡಿ ಇಷ್ಟ ಪಟ್ಟಿದ್ದೀರಿ ಎಂಬುದು ತುಂಬ ಖುಷಿ ನೀಡಿದೆ. ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದ'' ಎಂದಿದ್ದಾರೆ.

ಅಂದಹಾಗೆ, ಕೆಲ ದಿನಗಳ ಹಿಂದೆ ನಟ ಮಹೇಶ್ ಬಾಬು 'ಗೀತಾ ಗೋವಿಂದಂ' ಸಿನಿಮಾವನ್ನು ಹೊಗಳಿದ್ದರು. ಈಗ ರಾಮ್ ಚರಣ್ ಕೂಡ ಸಿನಿಮಾವನ್ನು ಇಷ್ಟಪಟ್ಟಿದ್ದಾರೆ.


Click it and Unblock the Notifications











