ರಮೇಶ್ 'ರಸಗುಲ್ಲ'ವೀಗ ಮಂಗನ ಕೈಯಲ್ಲಿ ಮಾಣಿಕ್ಯ!
ಕನ್ನಡ ನಟ ರಮೇಶ್ ಅರವಿಂದ್ ಇತ್ತೀಚಿಗೆ ಹಾಸ್ಯ ಪಾತ್ರಗಳಿಗೇ ಮೀಸಲಾಗಿದ್ದಾರೆ. ಹಿಂದೊಂದು ಕಾಲದಲ್ಲಿ 'ತ್ಯಾಗರಾಜ' ಎಂದೇ ಬಿರುದು ಪಡೆದಿದ್ದ ರಮೇಶ್, ನಂತರ ಸಂಪೂರ್ಣವಾಗಿ ಹಾಸ್ಯ ಚಿತ್ರಗಳಿಗೇ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ. ಇದೀಗ ವಿಚಿತ್ರ ಶೀರ್ಷಿಕೆಯ ಚಿತ್ರವೊಂದರಲ್ಲಿ ರಮೇಶ್ ನಟಿಸುತ್ತಿದ್ದಾರೆ. ಈ ಚಿತ್ರದ ನಿರ್ದೇಶಕರು ರಾಜೇಂದ್ರ ಕಾರಂತ್.
ರಮೇಶ್ ಅರವಿಂದ್ ಜೊತೆ ನಾಯಕಿಯಾಗಿ ಹರ್ಷಿಕಾ ಪೂಣಚ್ಚ ಕಾಣಿಸಿಕೊಳ್ಳಲಿರುವ ಈ ಚಿತ್ರಕ್ಕೆ ನಿರ್ದೇಶಕ ರಾಜೇಂದ್ರ ಕಾರಂತ್ 'ಮಂಗನ ಕೈಯಲ್ಲಿ ಮಾಣಿಕ್ಯ' ಎಂಬ ವಿಶಿಷ್ಠ, ವಿಚಿತ್ರ ಟೈಟಲ್ ಇಟ್ಟಿದ್ದಾರೆ. ಚಿತ್ರ ಪ್ರಾರಂಭವಾದಾಗ ಇದಕ್ಕೆ 'ರಸಗುಲ್ಲ' ಎಂದು ಹೆಸರಿಡಲಾಗಿತ್ತು. ಆದರೆ ಈಗ ಹೆಸರು ಬದಲಾಯಿಸಿ 'ಮಂಗನ ಕೈಯಲ್ಲಿ ಮಾಣಿಕ್ಯ' ಎಂದು ಪುನರ್ ನಾಮಕರಣ ಮಾಡಲಾಗಿದೆ. ಕಥೆ, ಚಿತ್ರಕಥೆ ಎಲ್ಲವೂ ರಾಜೇಂದ್ರ ಕಾರಂತರದ್ದು.
ಸಂದೇಶ್ ನಾಗರಾಜ್ ನಿರ್ಮಾಣದಲ್ಲಿ ಈ 'ಮಂಗನ ಕೈಯಲ್ಲಿ ಮಾಣಿಕ್ಯ' ಚಿತ್ರದ ಚಿತ್ರೀಕರಣ ಪ್ರಾರಂಭವಾಗಿದೆ. ನಾಯಕ ರಮೇಶ್ ಹಾಗೂ ರಸಗುಲ್ಲದಂತ ನಾಯಕಿ ಹರ್ಷಿಕಾ ಪೂಣಚ್ಚ ನಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಚಿತ್ರದಲ್ಲಿನ ತಮ್ಮ ಪಾತ್ರದ ಬಗ್ಗೆ ರಮೇಶ್ "ಚಿತ್ರದ ನಾಯಕ ಯಾವತ್ತೂ ಪ್ರತಿಯೊಂದಕ್ಕೂ ಚಿಂತೆ ಮಾಡುತ್ತಲೇ ಇರುತ್ತಾನೆ. ಅದಕ್ಕಾಗಿಯೇ ಹುಟ್ಟಿಬಂದಂತೆ ಆತ ಆಡುತ್ತಾನೆ. ತುಂಬಾ ಸವಾಲಿನ ಪಾತ್ರವದು. ಕ್ಷಣಕ್ಷಣಕ್ಕೂ ಪಾತ್ರದ ಸ್ವರೂಪ ಬದಲಾಗುತ್ತಾ ಇರುತ್ತದೆ" ಎಂದಿದ್ದಾರೆ.
ಇತ್ತೀಚಿಗಷ್ಟೇ 'ತುಂತುರು' ಚಿತ್ರದ ಚಿತ್ರೀಕರಣ ಮುಗಿಸಿರುವ ರಮೇಶ್ ಅರವಿಂದ್, ಈ ಚಿತ್ರದಲ್ಲೀಗ ಬಿಜಿಯಾಗಿದ್ದಾರೆ. ಈ ಚಿತ್ರ ಮುಗಿಸಿ ನಂತರ ಸೂಪರ್ ಸ್ಟಾರ್ ಉಪೇಂದ್ರರ ನಟನೆಯ 'ಸೂಪರ್ ಕಿಕ್' ಚಿತ್ರವನ್ನು ನಿರ್ದೇಶಿಸಲಿದ್ದಾರಂತೆ. "ನಮ್ಮಿಬ್ಬರ ನಿರ್ದೇಶನದ ರೀತಿ, ನಟನೆ ಎಲ್ಲವೂ ಭಿನ್ನ. ಉಪ್ಪಿಯನ್ನು ನಿರ್ದೇಶಿಸುವುದೇ ಒಮದು ಮಜಾ ಎಂದಿದ್ದಾರೆ ರಮೇಶ್. (ಒನ್ ಇಂಡಿಯಾ ಕನ್ನಡ)


Click it and Unblock the Notifications











