ಮತ್ತೆ ನಟನೆಯತ್ತ ಮುಖ ಮಾಡಿದ ಖ್ಯಾತ ನಟ ರಾಮ್ ಕುಮಾರ್
ಒಂದು ಕಾಲದ ಸೂಪರ್ ಹೀರೋ, ಉತ್ತಮ ಸಿನಿಮಾಗಳ ಮೂಲಕ ಕನ್ನಡ ಚಿತ್ರಪ್ರೇಕ್ಷಕರನ್ನು ರಂಜಿಸಿದ್ದ ರಾಮ್ ಕುಮಾರ್ ತೆರೆಮೇಲೆ ಕಾಣಿಸಿಕೊಳ್ಳದೆ ಅನೇಕ ವರ್ಷಗಳಾಗಿದೆ. ಇದೀಗ ರಾಮ್ ಕುಮಾರ್ ಮಕ್ಕಳು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ರಾಮ್ ಕುಮಾರ್ ಇಬ್ಬರು ಮಕ್ಕಳು ಸಹ ಬಣ್ಣದ ಲೋಕದಲ್ಲಿ ಮಿಂಚಲು ಸಜ್ಜಾಗಿದ್ದು, ಮೊದಲ ಸಿನಿಮಾದ ಬಿಡುಗಡೆಗೆ ಕಾಯುತ್ತಿದ್ದಾರೆ. ಮಕ್ಕಳನ್ನು ತೆರೆಮೇಲೆ ನೋಡಿ ಕಣ್ತುಂಬಿಕೊಳ್ಳುವ ಕಾತುರದ ಜೊತೆಗೆ ರಾಮ್ ಕುಮಾರ್ ಕೂಡ ಮತ್ತೆ ಬಣ್ಣ ಹಚ್ಚಲು ಸಜ್ಜಾಗಿದ್ದಾರೆ.
ಶ್ರೀಘ್ರ ಮೇವ ಕಲ್ಯಾಣ ಪ್ರಾಪ್ತಿ ರಸ್ತು ಸಿನಿಮಾ ಮೂಲಕ ರಾಮ್ ಕುಮಾರ್ ಮತ್ತೆ ಬೆಳ್ಳಿ ಪರದೆ ಮೇಲೆ ಮಿಂಚುತ್ತಿದ್ದಾರೆ. ದಿಯಾ ಖ್ಯಾತಿಯ ದೀಕ್ಷಿತ್ ಶೆಟ್ಟಿ ನಟನೆಯ ನಾಯಕನಾಗಿ ನಟಿಸುತ್ತಿರುವ ಚಿತ್ರ ಇದಾಗಿದ್ದು, ಚಿತ್ರಕ್ಕೆ ಪ್ರವೀಣ್ ಚೆೆನ್ನಪ್ಪ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಇತ್ತೀಚಿಗಷ್ಟೆ ಸೆಟ್ಟೇರಿರುವ ಈ ಸಿನಿಮಾ ಶೀರ್ಷಿಕೆ ವಿಚಾರವಾಗಿ ಸದ್ದು ಮಾಡಿತ್ತು. ಈಗಾಗಲೇ ಈ ಶೀರ್ಷಿಕೆ ನೋಂದಣಿ ಆಗಿದೆ ಎನ್ನುವ ವಿವಾದ ಎದ್ದಿದ್ದು. ಇದೀಗ ಟೈಟಲ್ ವಿವಾದ ಬಗೆಹರಿದಿದ್ದು, ಚಿತ್ರೀಕರಣ ನಡೆಯುತ್ತಿದೆ.
ಅಂದಹಾಗೆ ಚಿತ್ರದಲ್ಲಿ ರಾಮ್ ಕುಮಾರ್ ಕೃಷ್ಣಮೂರ್ತಿ ಎನ್ನುವ ಪ್ರಾಧ್ಯಾಪಕರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಚಿತ್ರೀಕರಣದಲ್ಲಿ ಭಾಗಿಯಾಗಿದ್ದು, ಮೊದಲ ಹಂತದ ಚಿತ್ರೀಕರಣ ಮಾಡಿ ಮುಗಿಸಿದ್ದಾರೆ. ಇದೀಗ ಎರಡನೇ ಹಂತದ ಚಿತ್ರೀಕರಣಕ್ಕೆ ಮತ್ತೆ ಸಿದ್ಧರಾಗಿದ್ದಾರೆ.
ಅನೇಕ ವರ್ಷಗಳ ಬಳಿಕ ಮತ್ತೆ ನಟನೆಯತ್ತ ಮುಖಮಾಡಿರುವ ರಾಮ್ ಕುಮಾರ್ರನ್ನು ತೆರೆಮೇಲೆ ನೋಡಲು ಕನ್ನಡ ಸಿನಿಮಾಭಿಮಾನಿಗಳು ಸಹ ಕಾತರರಾಗಿದ್ದಾರೆ. ಪ್ರಾಧ್ಯಾಪಕರಾಗಿ ಮತ್ತೆ ಕನ್ನಡ ಪ್ರೇಕ್ಷಕರ ಹೃದಯ ಗೆಲ್ಲುತ್ತಾರಾ ಎಂದು ಕಾದುನೋಡಬೇಕು.


Click it and Unblock the Notifications











