ಜಟಾಪಟಿಗೆ ಮಂಗಳ ಹಾಡಿದ ರಮ್ಯಾ, ರೂಪಾ ಅಯ್ಯರ್
ಮುಹೂರ್ತ ಮುಗಿಸಿಕೊಂಡು ಇದೀಗ ಚಿತ್ರೀಕರಣದ ಹಂತದಲ್ಲಿರುವ 'ಚಂದ್ರ' ಚಿತ್ರದ ಹೆಸರಿನ ಜೊತೆ ಕನ್ನಡದ ಲಕ್ಕಿ ಸ್ಟಾರ್ ರಮ್ಯಾ ಹೆಸರು ಸೇರಿಕೊಂಡು ರಣರಾದ್ಧಾಂತವಾಗಿರುವುದು ಗೊತ್ತೇ ಇದೆ. ಈ ಮಧ್ಯೆ, ಚಿತ್ರದಿಂದ ಮುಹೂರ್ತಕ್ಕೂ ಮೊದಲೇ ರಮ್ಯಾ ಹೊರಬಂದು ಈಗ ಆ ಜಾಗಕ್ಕೆ ಶ್ರೀಯಾ ಸರನ್ ಬಂದಿರುವುದು ಗೊತ್ತಿರುವ ಸುದ್ದಿಯೇ.
ರಮ್ಯಾ ಯಾಕೆ ಹೊರಬಂದರು? ರೂಪಾ ಅಯ್ಯರ್ ಹಾಗೂ ರಮ್ಯಾ ಆತ್ಮೀಯ ಸ್ನೇಹಿತೆಯರಾದರೂ ವೃತ್ತಿಜೀವನಕ್ಕೆ ಸಂಬಂಧಿಸಿದಂತೆ ಅವರಿಬ್ಬರೂ ಯಾಕೆ ರಾಜಿಯಾಗಿಲ್ಲ? ಪ್ರೇಮ್ ಜೊತೆ ನಟಿಸಲು ರಮ್ಯಾಗೆ ಇಷ್ಟವಿರಲಿಲ್ಲವೇ? ಈ ಎಲ್ಲಾ ಪ್ರಶ್ನೆಗಳಿಗೆ ಸ್ವತಃ ರಮ್ಯಾ ಹಾಗೂ ರೂಪಾ ಉತ್ತರ ನೀಡಿದ್ದಾರೆ, ಓದಿ...
ಚಂದ್ರ ಚಿತ್ರತಂಡದಿಂದ ಹೊರಬಿದ್ದ ರಮ್ಯಾ ಯಾರಿಗೂ ಏನೂ ಈ ಬಗ್ಗೆ ಸ್ಪಷ್ಟೀಕರಣ ನೀಡಿರಲಿಲ್ಲ. ಅವರ ಪಾಡಿಗೆ ಅವರು ಇದ್ದುಬಿಟ್ಟಿದ್ದರು, ಇತ್ತ ಚಿತ್ರತಂಡವೂ ಅಷ್ಟೇ, ಆ ಜಾಗಕ್ಕೆ ಶ್ರೀಯಾ ಸರನ್ ಕರೆತಂದು ಮುಹೂರ್ತ ಮುಗಿಸಿ ಚಿತ್ರೀಕರಣ ಪ್ರಾರಂಭಿಸಿದ್ದರು. ಆದರೆ ಅವರು ಸುದ್ದಿಯನ್ನು ಬಿಟ್ಟರೂ ಸುದ್ದಿ ಅವರನ್ನು ಬಿಡಲಿಲ್ಲ.
ಈಗ ರಮ್ಯಾ ಮತ್ತು ರೂಪಾ ಅಯ್ಯರ್ ಇಬ್ಬರೂ ಮಾಧ್ಯಮದ ಮುಂದೆ ಮಾತನಾಡಿದ್ದಾರೆ. ಚಂದ್ರ ಚಿತ್ರದಿಂದ ರಮ್ಯಾ ಹೊರಬಂದುದಕ್ಕೆ ಕಾರಣ ಹಾಗೂ ಸ್ಪಷ್ಟೀಕರಣ ನೀಡಿ ಮತ್ತೆ ಸುಮ್ಮನಾಗಿದ್ದಾರೆ. ಏನೂ ಹೇಳದೇ ತಮ್ಮ ಕೆಲಸ ನೋಡಿಕೊಂಡು ಸುಮ್ಮನಿದ್ದಾರೆ ಚಂದ್ರ ಚಿತ್ರದ ನಾಯಕ ಲವ್ಲಿ ಸ್ಟಾರ್ ಪ್ರೇಮ್.
ಈ ಬಗ್ಗೆ ರಮ್ಯಾ "ಯಾವ ನಾಯಕನಟರ ಜೊತೆ ನಾನು ನಟಿಸಬೇಕು ಎಂದು ಹೇಳುವಷ್ಟು ಸ್ವಾತಂತ್ರ್ಯ ನನಗಿದೆ. ಅಷ್ಟೇ ಅಲ್ಲ, ಚಿತ್ರಕ್ಕೆ ತೊಂದರೆಯಾಗದಂತೆ ಅದರಿಂದ ಹೊರಬರುವುದಕ್ಕೂ ಸ್ವಾತಂತ್ರ್ಯವಿದೆ. ಮೊದಲು ಕನ್ನಡದಲ್ಲಿ ಮಾತ್ರ ಮಾಡುತ್ತೇನೆ ಎಂದಿದ್ದರು. ನಂತರ ತಮಿಳಿನಲ್ಲೂ ಮಾಡುವುದಾಗಿ ಹೇಳಿದರು.
ಕನ್ನಡದಲ್ಲಿ ಮಾತ್ರ ಮಾಡುವ ಮಾತಿಗೆ ನಾನು ಒಪ್ಪಿದ್ದೆ. ಒಪ್ಪಿದ ನಂತರ ಅದನ್ನು ತಮಿಳಿಗೆ ಮಾಡುವ ಮಾತನಾಡಿದರೆ ಅದಕ್ಕೂ ನಾನು 'ಹೂಂ' ಅನ್ನಬೇಕೇ? ಜೊತೆಗೆ ಚಿತ್ರಕ್ಕಾಗಿ ಸ್ಪೆಷಲ್ ಕಲೆ ಕಲಿಯುವಂತೆ ಬೇರೆ ಷರತ್ತು ಹಾಕಲಾಗಿತ್ತು. ಚಿತ್ರಕ್ಕೆ ನಾನು ಕೆಲವು ಬದಲಾವಣೆ ಸೂಚಿಸಿದೆ.
ಅದನ್ನು ಚಿತ್ರತಂಡ ಒಪ್ಪಿಲ್ಲ. ಹಾಗಾಗಿ ಚಂದ್ರದಲ್ಲಿ ನಟಿಸುವುದಿಲ್ಲ ಎಂದೆ" ಎಂದು ರಮ್ಯಾ ನೇರವಾಗಿ ಉತ್ತರಿಸಿದ್ದಾರೆ. ಅಷ್ಟೇ ಅಲ್ಲ, ನಾನು ಹೊರಬಂದಾಗಿದೆ, ಬೇರೊಬ್ಬರು ಬಂದಾಗಿದೆ. ಈಗ ನನ್ನ ಹೆಸರನ್ನು ಚಿತ್ರತಂಡ ಜಪಿಸುತ್ತಿರುವುದೇಕೆ? ತಮ್ಮ ಜನಪ್ರಿಯತೆಯನ್ನು ಚಿತ್ರದ ಪ್ರಚಾರಕ್ಕೆ ಹೀಗೆ ಬಳಸಿಕೊಳ್ಳುವುದು ಸರಿಯಲ್ಲ ಎಂಬ ಮಾತನ್ನೂ ಹೇಳಿದ್ದಾರೆ ರಮ್ಯಾ.
ಹಾಗೇ, ಚಂದ್ರ ಚಿತ್ರದ ನಿರ್ದೇಶಕಿ ರೂಪಾ ಅಯ್ಯರ್ ಕೂಡ ರಮ್ಯಾ ಹೊರಬಂದ ಬಗ್ಗೆ "ಮೊದಲು ಕನ್ನಡದಲ್ಲಿ ಮಾತ್ರ ಈ ಚಿತ್ರ ನಿರ್ಮಿಸುವ ಯೋಚನೆ ನಮಗಿತ್ತು. ನಂತರ ಅದನ್ನು ತಮಿಳಿನಲ್ಲೂ ನಿರ್ಮಿಸುವ ನಿರ್ಧಾರವಾಯ್ತು. ಹೀಗಾಗಿ ನಮಗೆ ರಮ್ಯಾಗಿಂತ ಜನಪ್ರಿಯ ನಟಿಯ ಅಗತ್ಯವಿತ್ತು.
ಹೀಗಾಗಿ ರಮ್ಯಾ ಜತೆ ಮಾತನಾಡಿ ಆ ಜಾಗಕ್ಕೆ ಶ್ರೀಯಾ ಸರನ್ ಅವರನ್ನು ಆಯ್ಕೆ ಮಾಡಿದ್ದೇವೆ. ನಮಗೆ ರಮ್ಯಾ ಜನಪ್ರಿಯತೆಯನ್ನು ಬಳಸಿಕೊಳ್ಳುವ ಅಗತ್ಯವೇನೂ ಇಲ್ಲ. ನಮ್ಮ ಕಥೆ, ಚಿತ್ರಕಥೆ ಹಾಗೂ ಮೇಕಿಂಗ್ ಪ್ಲಾನ್ ಎಲ್ಲವೂ ಚೆನ್ನಾಗಿದೆ. ಒಳ್ಳೆಯ ಸಿನಿಮಾ ಮಾಡುವ ಭರವಸೆಯೂ ಇದೆ. ಅಷ್ಟೇ ಅಲ್ಲ, ನಾನೂ ಕೂಡ ಜನಪ್ರಿಯ ನಟಿ" ಎಂದಿದ್ದಾರೆ.
ಅಂದಹಾಗೆ, ಚಂದ್ರ ಚಿತ್ರದ ನಿರ್ದೇಶಕಿ ರೂಪಾ ಅಯ್ಯರ್ ಈ ಮೊದಲು ಬಂದಿದ್ದ 'ಮುಖಪುಟ' ಚಿತ್ರದ ಮೂಲಕ ಅಂತಾರಾಷ್ಟ್ರೀಯ ಮನ್ನಣೆ ಪಡೆದ ನಟಿ ಎಂಬುದು ನಿಮಗೆ ನೆನಪಾಗಲಿ. ಚಂದ್ರ ಎಂಬ ರಾಜಮನೆತನದ ಕಥೆಯನ್ನು ಸಿನಿಮಾ ಮಾಡಲು ತೊಡಗಿದ್ದಾರೆ ರೂಪಾ ಅಯ್ಯರ್.
ರಮ್ಯಾ ಆ ಚಿತ್ರಕ್ಕೆ ಆಯ್ಕೆಯಾಗಿ ಹೊರಬಿದ್ದ ನಂತರ ಚಂದ್ರ ಚಿತ್ರದ ಕುರಿತು ಪ್ರಚಾರ ಆಗಿದ್ದಕ್ಕಿಂತ ಹೆಚ್ಚು ರಮ್ಯಾ-ರೂಪಾ ಹಾಗೂ ನೆನಪಿರಲಿ ಪ್ರೇಮ್ ಬಗ್ಗೆಯೇ ಸುದ್ದಿ, ಗಾಸಿಪ್ ಹರಿದಾಡಿದ್ದೇ ಹೆಚ್ಚು. ಈಗ ರಮ್ಯಾ ಹಾಗೂ ರೂಪಾ ಇಬ್ಬರೂ ಅಪರೂಪಕ್ಕೆಂಬಂತೆ ಸ್ಪಷ್ಟವಾಗಿ ಮಾತನಾಡಿ ಈ ವಿವಾದಕ್ಕೆ ಅಂತ್ಯ ಹಾಡಿದ್ದಾರೆ. ಇದು ಚಂದ್ರ ವಿವಾದಕ್ಕೆ ಮಂಗಳ ಹಾಡಿದ ಸುದ್ದಿ. (ಒನ್ ಇಂಡಿಯಾ ಕನ್ನಡ)


Click it and Unblock the Notifications











