ಒದ್ದೆಕಣ್ಣಿನಿಂದ ಮನಃಪೂರ್ವಕವಾಗಿ ಕೊಡಗಿನ ಪರವಾಗಿ ಎಲ್ಲರಿಗೂ ವಂದಿಸಿದ ರಶ್ಮಿಕಾ
Recommended Video

ಭೂಲೋಕದ ಸ್ವರ್ಗ ಎಂದೇ ಕರೆಯಿಸಿಕೊಳ್ಳುವ ಕೊಡಗು ಜಿಲ್ಲೆ ಇದೀಗ ರಣ ಮಳೆಯಿಂದಾಗಿ ಅಕ್ಷರಶಃ ನರಕವಾಗಿದೆ. ಬಿಡದೆ ಸುರಿದ ಭಾರಿ ಮಳೆ ಹಾಗೂ ಪ್ರವಾಹದಿಂದಾಗಿ, ಕೊಡಗಿನ ಗುಡ್ಡಗಳು ಕುಸಿಯುತ್ತಿವೆ. ಮನೆಗಳು ನೆಲಕಚ್ಚಿವೆ. ಎಷ್ಟೋ ಮಂದಿ ನಿರಾಶ್ರಿತರಾಗಿ ಗಂಜಿ ಕೇಂದ್ರ ಸೇರಿದ್ದಾರೆ.
ಮಂಜಿನ ನಗರಿ ಜನತೆಯ ನೋವಿಗೆ ಇಡೀ ಕರ್ನಾಟಕ ಸ್ಪಂದಿಸಿದೆ. ಕೊಡಗಿಗೆ ಸರ್ಕಾರ, ರಾಜಕಾರಣಿಗಳು, ಕನ್ನಡ ಚಿತ್ರರಂಗ, ಮಾಧ್ಯಮ, ಪತ್ರಕರ್ತರು ಹಾಗೂ ವಿವಿದೆಡೆ ಇರುವ ಕೊಡವ ಸಮಾಜ ಸೇರಿದಂತೆ ಹಲವರು ಸಹಾಯ ಹಸ್ತ ಚಾಚಿದ್ದಾರೆ.
ಕೊಡಗಿನವರ ಕಣ್ಣೀರಿಗೆ ಸ್ಪಂದಿಸಿದ ಎಲ್ಲರಿಗೂ ಕೊಡವತಿ, ಕನ್ನಡ ನಟಿ ರಶ್ಮಿಕಾ ಮಂದಣ್ಣ ಟ್ವಿಟ್ಟರ್ ಮುಖಾಂತರ ವಂದನೆ ಸಲ್ಲಿಸಿದ್ದಾರೆ.

''ನಮಗೆ ನೋವಾದಾಗ ಅಮ್ಮ ಎಂದು ಕೂಗುತ್ತೇವೆ,
ಅಮ್ಮನೇ ಮುನಿಸಿಕೊಂಡಾಗ ಯಾರನ್ನು ಕೂಗುವುದು, ಏನೆಂದು ಕೂಗುವುದು...
ನಾ ಹುಟ್ಟಿದ, ಬೆಳೆದ, ಆಡಿದ್ದ, ಓದಿದ್ದ, ಉಸಿರಾಡುತ್ತಿದ್ದ, ಕೊಡಗು ಇಂದು ಮುಳುಗಿದ ಹಡಗಾಗಿದೆ. ಜಲಪ್ರಳಯಕ್ಕೆ ಲಕ್ಷಾಂತರ ಜನರು ಅಕ್ಷರಶಃ ನೀರುಪಾಲಾಗಿದ್ದಾರೆ. ಇದಕ್ಕೆ ಮೂಕ ಜೀವಿಗಳು ಹೊರತಾಗಿಲ್ಲ.
ಯಾರಿಗೂ ನೋವು ಮಾಡದ ನಮ್ಮವರು ಇಂದು ನೋವಿನಲ್ಲಿದ್ದಾರೆ. ಪ್ರಪಂಚದಲ್ಲಿ ಮೂರರಷ್ಟು ನೀರು, ಒಂದರಷ್ಟು ಭೂಮಿ ಎಂಬುದನ್ನು ನೀರೇ ಮುಂದೆ ನಿಂತು ಹೇಳಿದಂತಿದೆ.!
ನಾನು, ನೀನು, ನಂದು, ನಿಂದು, ಮೇಲು, ಕೀಳು, ಶ್ರೀಮಂತಿಕೆ ಎಕ್ಕಾ ನೀರಿನಲ್ಲಿ ಕೊಚ್ಚಿ ಹೋಗಿದೆ. ಮನುಷ್ಯತ್ವವೇ ಕಣ್ತುಂಬಿಕೊಂಡಿದೆ. ಮಳೆ ಶಬ್ದ ನೀರಿನ ಆರ್ಭಟ ಕೇಳಿದರೆ ಜೀವ ನಡುಗುವಂತಾಗಿದೆ. ಮಕ್ಕಳು ಮಾಡಿದ ಪಾಪವಾದರೂ ಏನು.? ಪ್ರಾಣಿಗಳು ಮಾಡಿದ ಪಾಪವಾದರೂ ಏನು.? ದೇವರೇ ಉತ್ತರಿಸು.
ಬೆಟ್ಟಗಳು ನೆಂದು ನೆಲವಾಗಿ, ಬಯಲು ಕೆರೆಗಳಾಗಿ, ದಾರಿಗಳು ನದಿಗಳಾಗಿ, ಕೊಡಗು ಸಮುದ್ರವಾಗಿದೆ. ನೀರು ನೀರು ನೀರು ಬಿಟ್ಟರೆ ಕಣ್ಣೀರು.
''ಧೈರ್ಯವಾಗಿರಿ ನಾವಿದ್ದೇವೆ'' ಎಂಬ ನಿಮ್ಮ ಮಾತು ನಮ್ಮನ್ನು ಜೀವಂತವಾಗಿರಿಸಿದೆ. ಸರ್ಕಾರಗಳು, ಸ್ವಯಂ ಸಂಘಗಳು, ಚಿತ್ರರಂಗದವರು, ಪತ್ರಕರ್ತರು, ಮಾಧ್ಯಮದವರು, ವಿದ್ಯಾರ್ಥಿಗಳು, ಕೋಟ್ಯಾನುಕೋಟಿ ಕನ್ನಡಿಗರು, ಎಲ್ಲಾ ಭಾಷಿಕರು, ಪ್ರಪಂಚದ ಮೂಲೆ ಮೂಲೆಯಲ್ಲಿರುವ ಕೊಡವ ಸಮಾಜದವರು, ನೀವುಗಳು ಕೈಮೀರಿ ಸಹಾಯ ಮಾಡಿದ್ದೀರಿ. ಮಾಡುತ್ತಿದ್ದೀರಿ.
ಬಳ್ಳಾರಿಯ ಜೈಲಿನ ಖೈದಿಗಳು ನಾಲ್ಕು ವಾರದ ಮಾಂಸದೂಟ ಬೇಡವೆಂದು ಮೂರು ಲಕ್ಷ ರೂಗಳನ್ನು ಕೊಡಗಿನ ಸಂತ್ರಸ್ಥರಿಗೆ ಕಳಿಸಿದ್ದಾರೆಂದರೆ ಮನುಷ್ಯತ್ವ ನಮಗಿಂತ ಮುಂದಿದೆಯೆನಿಸುತ್ತದೆ.
ನಿಮ್ಮ ಸ್ಪಂದನೆಗೆ ಸಹಾಯಕ್ಕೆ ನಾನು ಋಣಿ. ಮನಃಪೂರ್ವಕವಾಗಿ ಕೊಡಗಿನ ಪರವಾಗಿ ಒದ್ದೆಕಣ್ಣಿನಿಂದ ವಂದಿಸುತ್ತಿದ್ದೇನೆ. ಕೊಡಗನ್ನು ಕೊಡಗಿನವರ ನೆಂದ ನೊಂದ ಬದುಕನ್ನು ಪುನರ್ನಿರ್ಮಿಸಬೇಕಾಗಿದೆ. ಕೈ ಜೋಡಿಸಿ ನಾನು ನಿಮ್ಮೊಂದಿಗೆ ಇರುತ್ತೇನೆ'' ಎಂದು ನಟಿ ರಶ್ಮಿಕಾ ಮಂದಣ್ಣ ಟ್ವೀಟ್ ಮಾಡಿದ್ದಾರೆ.
ಅಸಲಿಗೆ, ನಟಿ ರಶ್ಮಿಕಾ ಮಂದಣ್ಣ ಕೊಡಗಿನ ವಿರಾಜಪೇಟೆ ಮೂಲದವರು. ಕೊಡಗಿನಲ್ಲಿಯೇ ಹುಟ್ಟಿ ಬೆಳೆದ ರಶ್ಮಿಕಾ ಸದ್ಯ ಕನ್ನಡ ಹಾಗೂ ತೆಲುಗು ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ.


Click it and Unblock the Notifications











