ನಡುರಾತ್ರಿ ಬೆಳಗೆರೆಗೆ ಏನಾಯ್ತು: ತಂದೆಯ ಕೊನೆಯ ಕ್ಷಣ ವಿವರಿಸಿದ ಮಗ ಕರ್ಣ
ಖ್ಯಾತ ಪತ್ರಕರ್ತ, ನಟ-ನಿರ್ದೇಶಕ, ಕನ್ನಡ ಸಾಹಿತಿ, ಚಿತ್ರಕಥೆ ಬರಹಗಾರ, ನಿರೂಪಕ ಹೀಗೆ ಬಹುಮುಖ ಪ್ರತಿಭೆಯಾಗಿದ್ದ ರವಿ ಬೆಳಗೆರೆ ವಿಧಿವಶರಾಗಿದ್ದಾರೆ. ನವೆಂಬರ್ 12ರ ಮಧ್ಯರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.
ಹಾಯ್ ಬೆಂಗಳೂರು ಪತ್ರಿಕೆಯ ಸಂಸ್ಥಾಪಕ ರವಿ ಬೆಳಗೆರೆ ಅಗಲಿಗೆ ಪತ್ರಿಕೋದ್ಯಮ ಕ್ಷೇತ್ರ, ಸಾಹಿತ್ಯ ಕ್ಷೇತ್ರ ಹಾಗೂ ಸಿನಿಮಾ ಇಂಡಸ್ಟ್ರಿಯವರು ಸಂತಾಪ ಸೂಚಿಸಿದ್ದಾರೆ. 62ರ ವಯಸ್ಸಿನ ರವಿಬೆಳಗೆರೆಗೆ ನಿನ್ನೆ ರಾತ್ರಿ ಏನಾಯ್ತು? ಅವರು ಎಲ್ಲಿದ್ದರು ಎಂಬ ವಿಚಾರವನ್ನು ಅವರ ಮಗ ಕರ್ಣ ಮಾಧ್ಯಮಗಳ ಮುಂದೆ ವಿವರಿಸಿದ್ದಾರೆ.

ರಾತ್ರಿ 12.30 ಗಂಟೆ ಸಮಯ ಆಗಿತ್ತು
''ರಾತ್ರಿ 12.15 ಅಥವಾ 12.20ರ ಸಮಯದಲ್ಲಿ ಅಪ್ಪ ಅವರಿಗೆ ಹೃದಯಾಘಾತ ಆಗಿದೆ. ಅವರು ರಾತ್ರಿ ಕಚೇರಿಯಲ್ಲಿಯೇ ಉಳಿದುಕೊಂಡಿದ್ದರು. ನಾನು ಮನೆಯಲ್ಲಿದ್ದೆ. ಫೋನ್ ಮೂಲಕ ವಿಷಯ ತಿಳಿಯಿತು. ಕೂಡಲೇ ಆಫೀಸ್ಗೆ ಬಂದೆ. ನಾನು ಬರುವಷ್ಟರಲ್ಲಿ ಅಪ್ಪಾಜಿ ಯಾವುದೇ ರೀತಿಯ ಪ್ರತಿಕ್ರಿಯೆ ನೀಡುತ್ತಿರಲಿಲ್ಲ. ನಂತರ ವೈದ್ಯರು ಬದುಕಿಲ್ಲ ಎಂದು ಖಚಿತಪಡಿಸಿದರು'' ಎಂದು ಕರ್ಣ ಘಟನೆ ವಿವರಿಸಿದ್ದಾರೆ.

ಬಹಳ ದುಃಖ ತಂದಿದೆ
''ನಮ್ಮ ತಂದೆ ಇಂದು ನಮ್ಮ ಜೊತೆ ಇಲ್ಲ ಎಂಬ ನೋವು ಕಾಡುತ್ತಿದೆ. ಅವರ ಬಗ್ಗೆ ಒಂದು ಮಾತಿನಲ್ಲಿ ಹೇಳಲು ಸಾಧ್ಯವಿಲ್ಲ. ನಮ್ಮ ಇಡೀ ಕುಟುಂಬ ಹಾಗೂ ಅವರನ್ನೇ ನಂಬಿಕೊಂಡಿದ್ದವರಿಗೆ ತುಂಬಾ ದುಃಖ ತಂದಿದೆ'' ಎಂದು ಬೇಸರ ವ್ಯಕ್ತಪಡಿಸಿದರು.

ಅದು ಕೊನೆ ಆಸೆಯಾಗಿತ್ತು
''ಅವರು ಕಟ್ಟಿ ಬೆಳೆಸಿದ ಪ್ರಾರ್ಥನಾ ಶಾಲೆ ಬಹಳ ದೊಡ್ಡ ಮಟ್ಟಕ್ಕೆ ಹೋಗಬೇಕು. ನಾನು ಮತ್ತ ನನ್ನ ಕುಟುಂಬ ಅದನ್ನು ತುಂಬಾ ಎತ್ತರಕ್ಕೆ ತೆಗೆದುಕೊಂಡು ಹೋಗಬೇಕು. ಕೊನೆಗೂ ಹೆಚ್ಚು ಇಷ್ಟ ಪಡ್ತಿದ್ದ ಪ್ರಾರ್ಥನಾ ಶಾಲೆಯಲ್ಲಿ ಅವರು ಕೊನೆ ಕ್ಷಣ ಕಳೆದಿದ್ದಾರೆ. ಇನ್ನು ತುಂಬಾ ವರ್ಷ ಅವರು ನಮ್ಮೊಂದಿಗೆ ಇರ್ತಾರೆ ಎಂದು ಭಾವಿಸಿದ್ವಿ. ಆದ್ರೆ, ಈಗ ನಮ್ಮೊಂದಿಗೆ ಇಲ್ಲ'' ಎಂದು ಕರ್ಣ ನೋವು ಹಂಚಿಕೊಂಡಿದ್ದಾರೆ.
Recommended Video

ರವಿ ಬೆಳಗೆರೆ ಆರೋಗ್ಯವಾಗಿದ್ದರು
''ಆರೋಗ್ಯವಾಗಿದ್ದರು, ಚೆನ್ನಾಗಿದ್ದರು. ಡಯಾಬಿಟೀಸ್ ಮತ್ತು ಸಣ್ಣಪುಟ್ಟ ಅನಾರೋಗ್ಯ ಇತ್ತು. ಕಾಲುಗಳಿಗೆ ಸ್ವಲ್ಪ ಸಮಸ್ಯೆಯಾಗಿತ್ತು. ಆದರೂ ಆ ಬಗ್ಗೆ ಅವರು ತಲೆ ಕೆಡಿಸಿಕೊಳ್ಳುವ ವ್ಯಕ್ತಿಯಲ್ಲ. ನನಗೆ ಇದೆಲ್ಲ ಏನೂ ಆಗಲ್ಲ ಅಂತಿದ್ದರು. ನಿನ್ನೆ ಸಹ ನಮ್ಮ ಮನೆಯಲ್ಲಿದ್ದರು. ಹೋಗುವಾಗಲೇ ಹೇಳ ಹೋದರು, ನಾಳೆ ಸಿಗ್ತೀನಿ ಅಂತ. ಇದು ಬಹಳ ಅನಿರೀಕ್ಷಿತವಾಗಿ ಆಗಿರುವ ಘಟನೆ'' ಎಂದು ಅವರ ಆರೋಗ್ಯದ ಬಗ್ಗೆ ಸ್ಪಷ್ಟನೆ ನೀಡಿದರು.


Click it and Unblock the Notifications











