ರವಿಬೋಪಣ್ಣ, ಕನ್ನಡಿಗ, ದೃಶ್ಯ2: ಯಾವುದು ಮೊದಲು, ಯಾವುದು ನಂತರ?
ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ಮೂರ್ನಾಲ್ಕು ಸಿನಿಮಾಗಳು ಬಿಡುಗಡೆಗೆ ಸಜ್ಜಾಗುತ್ತಿದೆ. ಒಂದರ ಹಿಂದೆ ಒಂದರಂತೆ ಚಿತ್ರೀಕರಣ ಮುಗಿಸಿ ಥಿಯೇಟರ್ಗೆ ಬರಲು ಸಿದ್ಧವಾಗಿದೆ. ಆದರೆ ಕೋವಿಡ್ ಭೀತಿ ಇದೆಲ್ಲದಕ್ಕೂ ತಡೆಯಾಗಿ ನಿಂತಿದೆ. ಆದರೂ ಯಾವ ಸಿನಿಮಾ ಮೊದಲು ಬರಲಿದೆ, ಯಾವುದು ಸಿನಿಮಾ ನಂತರ ಬರಲಿದೆ ಎನ್ನುವ ಪ್ರಶ್ನೆಯೂ ಅಭಿಮಾನಿಗಳನ್ನು ಕಾಡ್ತಿದೆ.
ಸದ್ಯ ರವಿಚಂದ್ರನ್ ದೃಶ್ಯ 2 ಸಿನಿಮಾ ಚಿತ್ರೀಕರಣದಲ್ಲಿದ್ದಾರೆ. ಕೊಡಗಿನಲ್ಲಿ ಶೂಟಿಂಗ್ ಮಾಡ್ತಿದ್ದಾರೆ ಎಂಬ ಮಾಹಿತಿ ಇದೆ. ಮಲಯಾಳಂ ಹಿಟ್ 'ದೃಶ್ಯಂ 2' ರಿಮೇಕ್ ಇದಾಗಿದೆ. ಈ ಹಿಂದೆ 'ದೃಶ್ಯ' ಸಿನಿಮಾ ರಿಲೀಸ್ ಆಗಿತ್ತು. ಆ ಚಿತ್ರದ ಮುಂದುವರಿದ ಭಾಗ. ದೃಶ್ಯ ಚಿತ್ರಗಳ ಬಗ್ಗೆ ರವಿಚಂದ್ರನ್ಗೆ ವಿಶೇಷ ಕಾಳಜಿ ಮತ್ತು ಬಾಂಧವ್ಯ ಇದೆ. ಈ ಕುರಿತು 'ನ್ಯೂಸ್ ಫಸ್ಟ್' ಸಂದರ್ಶನದಲ್ಲಿ ರವಿಮಾಮ ಮಾತನಾಡಿದ್ದಾರೆ.
''ನಾನು ಮಾಡಿರುವ ಅಷ್ಟು ಚಿತ್ರಗಳಲ್ಲಿ ದೃಶ್ಯ ವಿಶೇಷ. ನಾನು ದೃಶ್ಯ ಸೆಟ್ಗೆ ಬಂದ್ರೆ ಇನ್ನೊಂದು ಫ್ಯಾಮಿಲಿ ಅನ್ಸುತ್ತೆ. ನಿರ್ದೇಶಕ ಪಿ ವಾಸು, ಆ ನಿಮಾರ್ಪಕ, ನವ್ಯ ನಾಯರ್ ಆ ಇಬ್ಬರು ಮಕ್ಕಳು. ಇವರೆನ್ನೆಲ್ಲಾ ನೋಡಿದಾಗ ಗೊತ್ತಿದ್ದೋ ಗೊತ್ತಿಲ್ಲದೇ ಆ ಅನುಭವ ಆಗುತ್ತದೆ'' ಎಂದಿದ್ದಾರೆ.
''ಸಾಮಾನ್ಯವಾಗಿ ನಾನು ನನ್ನ ಕುಟುಂಬವನ್ನು ಹೆಚ್ಚು ಪ್ರೀತಿಸುತ್ತೇನೆ. ನನ್ನ ಮಗಳು, ಮಕ್ಕಳು ಎಲ್ಲೆ ಹೋದ್ರು ಅವರ ಮೇಲೆ ಒಂದು ಕಣ್ಣು ಇರುತ್ತೆ. ವಾಪಸ್ ಮನೆಗೆ ಬರುವವರೆಗೂ ಅವರು ನನ್ನ ಟಚ್ನಲ್ಲಿರಬೇಕು. ಫೋನ್ ಮಾಡಿ ಅಪ್ಡೇಟ್ ಕೊಡಬೇಕು. ಮನೆಗೆ ಅವರು ಬರೋವರೆಗೂ ನಿದ್ದೆ ಬರಲ್ಲ. ಕುಟುಂಬದ ಮೇಲೆ ಇಂತಹದೊಂದು ಕಾಳಜಿ ಇದೆ. ಅವರ ಭದ್ರತೆ ಬಗ್ಗೆ ಯೋಚನೆ ಮಾಡುವುದು ಇರುತ್ತೆ. ಈ ಸಿನಿಮಾಗೆ ಬಂದ್ರೆ ಅಂತಹದ್ದೇ ಯೋಚನೆಗಳು ಬರುತ್ತೆ. ದೃಶ್ಯ ಸಿನಿಮಾದಲ್ಲೂ ಅಂತಹ ತಂದೆಯ ಪಾತ್ರ ಆಗಿರುವುದು ಸಹ ನನಗೆ ತುಂಬಾ ಹತ್ತಿರವಾಗಿದೆ'' ಎಂದು ಹೇಳಿದ್ದಾರೆ. ಮುಂದೆ ಓದಿ...

ದೃಶ್ಯ ಆದ್ಮೇಲೆ ಹೆಚ್ಚು ಫೋನ್ ಬಂದಿತ್ತು
ದೃಶ್ಯ ಸಿನಿಮಾ ಮಾಡಿದಾಗ ನ್ಯಾಯಮೂರ್ತಿ, ವಕೀಲರು, ಪೊಲೀಸರು ಫೋನ್ ಮಾಡಿ ರವಿಚಂದ್ರನ್ ಅವರ ಪಾತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಂತೆ. ಅದಕ್ಕೂ ಮುಂಚೆ 'ಮಾಣಿಕ್ಯ' ಸಿನಿಮಾ ಮಾಡಿದಾಗಲೂ ಅಂತಹ ಪಾತ್ರಗಳು ಮಾಡಿ ಎಂದು ಅನೇಕರು ಫೋನ್ ಮಾಡಿ ಸಲಹೆ ಕೊಟ್ಟಿದ್ದರು ಎಂಬ ವಿಚಾರವನ್ನು ಸ್ವತಃ ರವಿಚಂದ್ರನ್ ಹೇಳಿಕೊಂಡಿದ್ದಾರೆ.

ಯಾವ ಸಿನಿಮಾ ಮೊದಲು ಬರುತ್ತದೆ
ನವೆಂಬರ್ ತಿಂಗಳಲ್ಲಿ ದೃಶ್ಯ 2 ಸಿನಿಮಾ ಬಿಡುಗಡೆ ಮಾಡಬೇಕು ಎನ್ನುವುದು ಚಿತ್ರತಂಡದ ಉದ್ದೇಶ ಆಗಿತ್ತು. ಚಿತ್ರ ಆರಂಭಿಸಿದಾಗಲೂ ಅದೇ ಪ್ಲಾನ್ ಇತ್ತು. ಆದರೆ, ರವಿಚಂದ್ರನ್ ನಟಿಸಿರುವ ರವಿ ಬೋಪಣ್ಣ ಹಾಗೂ ಕನ್ನಡಿಗ ಚಿತ್ರಗಳು ಸಹ ಚಿತ್ರೀಕರಣ ಮುಗಿಸಿ ತೆರೆಗೆ ಬರಲು ಸಜ್ಜಾಗಿದೆ. ಈ ಲಾಕ್ಡೌನ್, ಕೊರೊನಾ ಭೀತಿ ಯಾವುದನ್ನು ಸ್ಪಷ್ಟಪಡಿಸಲು ಬಿಡ್ತಿಲ್ಲ. ಇದರ ಜೊತೆಗೆ ರಾಜೇಂದ್ರ ಪೊನ್ನಪ್ಪ ಸಿನಿಮಾನೂ ಇದೆ.

'ಕನ್ನಡಿಗ' ಸಿನಿಮಾ ಕುರಿತು
ನೈಜ ಘಟನೆಯನ್ನು ಆಧರಿಸಿ 'ಕನ್ನಡಿಗ' ಸಿನಿಮಾ ತಯಾರಾಗುತ್ತಿದ್ದು, ಬರಹಗಾರರ ಕುಟುಂಬದಿಂದ ಬಂದ ಕನ್ನಡ ವಿದ್ವಾಂಸನ ಪಾತ್ರದಲ್ಲಿ ರವಿಚಂದ್ರನ್ ನಟಿಸಲಿದ್ದಾರೆ. ಬ್ರಿಟಿಷ್ ಮತ್ತು ಪೋರ್ಚುಗೀಸ್ ಆಳ್ವಿಕೆಯಯ ಕಾಲಘಟ್ಟದ ಕಥೆಯ ಇಲ್ಲಿರಲಿದೆ. 1550 ರ ದಶಕದ ಫ್ಲಾಶ್ಬ್ಯಾಕ್ ದೃಶ್ಯಗಳು ಸಹ ಈ ಸಿನಿಮಾದಲ್ಲಿ ಬರಲಿದೆ. ಬಿಎಂ ಗಿರಿರಾಜ್ ಈ ಚಿತ್ರ ನಿರ್ದೇಶಿಸಿದ್ದಾರೆ. ಎನ್ಎಸ್ ರಾಜ್ ಕುಮಾರ್ ನಿರ್ಮಾಣ ಮಾಡುತ್ತಿದ್ದು, ಜಿ.ಎಸ್.ವಿ ಸೀತಾರಾಮ್ ಛಾಯಾಗ್ರಹಣ, ರವಿ ಬಸ್ರೂರು ಸಂಗೀತ ಒಳಗೊಂಡಿದೆ.

'ರವಿಬೋಪಣ್ಣ' ಸಿನಿಮಾದ ಬಗ್ಗೆ
ಅಪೂರ್ವ ನಂತರ ರವಿಚಂದ್ರನ್ ನಿರ್ದೇಶನ ಮಾಡುತ್ತಿರುವ ಸಿನಿಮಾ ರವಿಬೋಪಣ್ಣ. ಈ ಸಿನಿಮಾದ ಟ್ರೈಲರ್, ಟೀಸರ್ ಹಾಗೂ ಲುಕ್ಗಳಿಂದ ಕ್ರೇಜಿಸ್ಟಾರ್ ಹೆಚ್ಚು ಗಮನ ಸೆಳೆದಿದ್ದಾರೆ. ಸರ್ಕಾರ್ ಅಜಿತ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ವಿಶೇಷ ಅಂದ್ರೆ ಕಿಚ್ಚ ಸುದೀಪ್ ಅತಿಥಿ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಇದರ ಜೊತೆ 'ರಾಜೇಂದ್ರ ಪೊನ್ನಪ್ಪ' ಸಿನಿಮಾ ಶೂಟಿಂಗ್ ಮುಗಿಸಿದೆ. ರಾಧಿಕಾ ಕುಮಾರಸ್ವಾಮಿ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ.


Click it and Unblock the Notifications











