ತಂದೆಯ ಹುಟ್ಟುಹಬ್ಬಕ್ಕೆ ರವಿಚಂದ್ರನ್ 'ಅಪೂರ್ವ' ಕನಸು
ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಇನ್ನೊಂದು ಕನಸು ನನಸಾಗುವ ಸಮಯ ಹತ್ತಿರವಾಗಿದೆ. ರವಿಚಂದ್ರನ್ ಈಗ ಎಂದಿನಂತಿಲ್ಲ. ಕಥೆ, ಚಿತ್ರಕಥೆಗಳ ಆಯ್ಕೆಯಲ್ಲಿ ಅವರು ಬಹಳ ಎಚ್ಚರಿಕೆಯ ಹೆಜ್ಜೆ ಇಡುತ್ತಿದ್ದಾರೆ. ವೈವಿಧ್ಯಮಯ ಪಾತ್ರಗಳ ಕಡೆಗೆ ಅವರ ದೃಷ್ಟಿ ಹರಿದಿದೆ. ಇದೀಗ ಬಿಡುಗಡೆಗೆ ಸಿದ್ಧವಾಗಿರುವ 'ಅಪೂರ್ವ' ಚಿತ್ರವೂ ಅದೇ ರೀತಿಯ ಭಿನ್ನ ಕಥಾಹಂದರದ ಚಿತ್ರ.
ತಮ್ಮ ತಂದೆ ಎನ್ ವೀರಸ್ವಾಮಿ ಅವರ ಹುಟ್ಟುಹಬ್ಬದ ದಿನ ಅಂದರೆ ಏಪ್ರಿಲ್ 17ರಂದು 'ಅಪೂರ್ವ' ಚಿತ್ರವನ್ನು ತೆರೆಗೆ ತರಲು ಹೊರಟಿದ್ದಾರೆ ರವಿಮಾಮ. ಈಗಾಗಲೆ ಈ ಚಿತ್ರದ ಟ್ರೇಲರ್ ಗಳು ಪ್ರೇಕ್ಷಕರಲ್ಲಿ ಬಹಳಷ್ಟು ಕುತೂಹಲವನ್ನು ಹುಟ್ಟುಹಾಕಿವೆ. [ರವಿಚಂದ್ರನ್ 'ಅಪೂರ್ವ' ದೃಶ್ಯಕಾವ್ಯದ ಫಸ್ಟ್ ಲುಕ್]

ಮೈಸೂರು ಮೂಲದ ಅಪೂರ್ವ ಈ ಚಿತ್ರದ ನಾಯಕಿ. ಲಿಫ್ಟ್ ಒಂದರಲ್ಲಿ ನಡೆಯುವ ಕಥೆ ಇದಾಗಿದೆ. ರವಿಚಂದ್ರನ್ ಅವರೇ ಆಕ್ಷನ್ ಕಟ್ ಹೇಳುತ್ತಿರುವ ಕಾರಣ ಚಿತ್ರದ ಬಗೆಗಿನ ನಿರೀಕ್ಷೆಗಳು ದುಪ್ಪಟ್ಟಾಗಿವೆ. ಚಿತ್ರದಲ್ಲಿ ರವಿಚಂದ್ರನ್ ಅವರು 61ರ ವಯಸ್ಸಿನಲ್ಲಿ ಕಾಣಿಸಿದರೆ ನಾಯಕಿ ವಯಸ್ಸು ಕೇವಲ ಇನ್ನೂ 19ರ ಪ್ರಾಯ. ಇವರಿಬ್ಬರ 'ಅಪೂರ್ವ' ಸಂಗಮದ ಕಥೆಯೇ ಈ ಚಿತ್ರ.
ಈ ಚಿತ್ರದಲ್ಲಿ ಕೇವಲ ಎರಡೇ ಎರಡು ಮುಖ್ಯ ಪಾತ್ರಗಳಿರುತ್ತವೆ. ರವಿಚಂದ್ರನ್ ಅವರ ಮನೆಯಲ್ಲೇ ಲಿಫ್ಟ್ ಸೆಟ್ ಹಾಕಿ ಚಿತ್ರೀಕರಿಸಲಾಗಿದೆ. ಈ ರೀತಿಯ ಚಿತ್ರ ನಾನು ಹಿಂದೆ ಮಾಡಿಲ್ಲ ಮುಂದೆ ಮಾಡುತ್ತೇನೆ ಎಂಬ ನಂಬಿಕೆ ಇಲ್ಲ ಎನ್ನುವ ರವಿ, ಚಿತ್ರ ನೋಡಿದರೆ ನೀಮಗೂ ಥಿಯೇಟರ್ ನಿಂದ ಹೊರ ಬರುವ ಮನಸ್ಸು ಬರಲ್ಲ ಎನ್ನುತ್ತಾರೆ.
ಪ್ರೇಕ್ಷಕರ ಕಣ್ಣಂಚಲಿ ನೀರಿರುತ್ತದೆ. ಹಾಗಂತ ಇದು ಕಣ್ಣೀರಧಾರೆ ಕಥೆ ಎಂದುಕೊಳ್ಳಬೇಡಿ ಎಂದೂ ರವಿಮಾಮ ಹೇಳಿದ್ದು, ಚಿತ್ರದ ಅತಿಥಿ ಪಾತ್ರದಲ್ಲಿ ಸುದೀಪ್ ಇದ್ದಾರೆ ಎಂಬುದು ಇನ್ನೊಂದು ವಿಶೇಷ. ಇಷ್ಟಕ್ಕೂ ಸಂಪೂರ್ಣ ಕಥೆ ಏನು ಎಂಬುದು ಗೊತ್ತಾಗಬೇಕಾದರೆ ಏಪ್ರಿಲ್ 17ರ ತನಕ ಕಾಯಬೇಕು. (ಏಜೆನ್ಸೀಸ್)


Click it and Unblock the Notifications











