ದರ್ಶನ್ ಆಯ್ತು, ಈಗ ಹೊಂಬಾಳೆ ಫಿಲಮ್ಸ್ ವಿರುದ್ಧ ರವಿಚಂದ್ರನ್ ಅಭಿಮಾನಿಗಳ ಅಸಮಾಧಾನ
ಹೊಂಬಾಳೆ ಫಿಲಮ್ಸ್ ಕಡಿಮೆ ಅವಧಿಯಲ್ಲಿ ಕನ್ನಡ ಚಿತ್ರರಂಗದ ಹೆಮ್ಮೆಯ ನಿರ್ಮಾಣ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. 'ಕೆಜಿಎಫ್' ಸರಣಿ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದ ಕೀರ್ತಿ ಪತಾಕೆಯನ್ನು ವಿಶ್ವದಗಲ ಹಾರಿಸಿದ ಶ್ರೇಯ ಹೊಂಬಾಳೆಯದ್ದು.
'ಕೆಜಿಎಫ್' ಸಿನಿಮಾ ಸರಣಿ ಮಾತ್ರವೇ ಅಲ್ಲದೆ, ಹಲವು ಕಂಟೆಂಟ್ ಓರಿಯೆಂಟೆಡ್ ಸಿನಿಮಾಗಳನ್ನು ಮುಂಬರುವ ದಿನಗಳಲ್ಲಿ ನೀಡಲಿದೆ ಹೊಂಬಾಳೆ. ಪ್ರತಿಭಾವಂತ ನಿರ್ದೇಶಕರನ್ನು ಹುಡುಕಿ ಅವರ ಕನಸಿಗೆ ಬಂಡವಾಳ ಹೂಡುತ್ತಿದೆ ಹೊಂಬಾಳೆ.
ಆದರೆ ಕೆಲವು ದಿನಗಳ ಹಿಂದೆಯಷ್ಟೆ ದರ್ಶನ್ ಅಭಿಮಾನಿಗಳು ಹಠಾತ್ತನೆ ಹೊಂಬಾಳೆ ಫಿಲಮ್ಸ್ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದರು. ಅದಕ್ಕೆ ಕಾರಣವಾಗಿದ್ದು 'ಬಿರುದು ಬಳಕೆ' ಈಗ ರವಿಚಂದ್ರನ್ ಅಭಿಮಾನಿಗಳು ಸಹ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಾರಿಯೂ 'ಬಿರುದು ಬಳಕೆ'ಯೇ ವಿಷಯ.
Recommended Video


ಹುಟ್ಟುಹಬ್ಬ ಆಚರಿಸಿಕೊಂಡ ಪ್ರಶಾಂತ್ ನೀಲ್
ಹೊಂಬಾಳೆ ಫಿಲಮ್ಸ್ನ ಮೆಚ್ಚಿನ ನಿರ್ದೇಶಕ ಪ್ರಶಾಂತ್ ನೀಲ್ರ ಹುಟ್ಟುಹಬ್ಬ ಇಂದಿದೆ. ನಿನ್ನೆಯೇ 'ಕೆಜಿಎಫ್' ಚಿತ್ರತಂಡ ನೀಲ್ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಬೆಂಗಳೂರಿನಲ್ಲಿ ಆಚರಣೆ ಮಾಡಿದೆ. ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಪ್ರಭಾಸ್, ಯಶ್, ನಿರ್ಮಾಪಕ ವಿಜಯ್ ಕಿರಗಂದೂರು ಪಾಲ್ಗೊಂಡು ಪಾರ್ಟಿ ಮಾಡಿದ್ದಾರೆ. ಸಂಭ್ರಮದ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ ಹೊಂಬಾಳೆ ಫಿಲಮ್ಸ್. ಇದೇ ಈಗ ರವಿಚಂದ್ರನ್ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿರುವುದು!

'ಶೋಮ್ಯಾನ್' ಪ್ರಶಾಂತ್ ನೀಲ್ ಎಂದ ಹೊಂಬಾಳೆ
''ಭಾರತದ ಇಬ್ಬರು 'ಡೈನಮೈಟ್'ಗಳಾದ ಯಶ್ ಹಾಗೂ ಪ್ರಭಾಸ್, 'ಶೋಮ್ಯಾನ್' ಪ್ರಶಾಂತ್ ನೀಲ್ ಹುಟ್ಟುಹಬ್ಬ ಆಚರಿಸಲು ಒಂದುಗೂಡಿ ಬಂದಿದ್ದಾರೆ. ಪ್ರಶಾಂತ್ ನೀಲ್ಗೆ ವಿಶೇಷ ಗೌರವ ಸಲ್ಲಿಸಲು ಹೈದರಾಬಾದ್ನಿಂದ ಬೆಂಗಳೂರಿಗೆ ಬಂದಿದ್ದಾರೆ ಪ್ರಭಾಸ್'' ಎಂದು ಟ್ವೀಟ್ ಮಾಡಲಾಗಿದೆ ಹೊಂಬಾಳೆ ಫಿಲಮ್ಸ್ನ ಅಧಿಕೃತ ಪೇಜ್ನಿಂದ. ಆದರೆ ಪ್ರಶಾಂತ್ ನೀಲ್ಗೆ 'ಶೋಮ್ಯಾನ್' ಎಂದು ಕರೆದಿರುವುದು ರವಿಚಂದ್ರನ್ ಅಭಿಮಾನಿಗಳಿಗೆ ಅಸಮಾಧಾನ ಉಂಟು ಮಾಡಿದೆ.

ರವಿಚಂದ್ರನ್ ಅವರನ್ನು ಶೋಮ್ಯಾನ್ ಎನ್ನುವ ರೂಢಿ ಇದೆ
ರವಿಚಂದ್ರನ್ ಅವರನ್ನು ಶೋಮ್ಯಾನ್ ಎಂದು ಕರೆಯುವುದು ಮೊದಲಿನಿಂದಲೂ ರೂಢಿ. ರವಿಚಂದ್ರನ್ ಅವರ ಸ್ಟೈಲ್ಗೆ, ಅವರ ಸ್ಟೈಲಿಷ್ ಸಿನಿಮಾಗಳಿಗೆ, ಸಿನಿಮಾಗಳಲ್ಲಿ ಅವರ ಉಡುಗೆ ತೊಡುಗೆ, ನಾಯಕಿಯರನ್ನು ತೋರಿಸುವ ರೀತಿ ಈ ಎಲ್ಲ ಕಾರಣಗಳಿಗೆ ರವಿಚಂದ್ರನ್ ಅವರನ್ನು ಶೋಮ್ಯಾನ್ ಎನ್ನಲಾಗುತ್ತದೆ. ಆದರೆ ಈಗ ಪ್ರಶಾಂತ್ ನೀಲ್ ಅನ್ನು ಹೊಂಬಾಳೆ ಫಿಲಮ್ಸ್ 'ಶೋಮ್ಯಾನ್' ಎಂದಿರುವುದು ರವಿಚಂದ್ರನ್ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಕೆಲವರು ಈ ಬಗ್ಗೆ ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ.

ದರ್ಶನ್ ಅಭಿಮಾನಿಗಳು ಸಹ ಬೇಸರ ಹೊರಹಾಕಿದ್ದರು
ಕೆಲವು ದಿನಗಳ ಹಿಂದೆ ಇದೇ ಕಾರಣಕ್ಕೆ ದರ್ಶನ್ ಅಭಿಮಾನಿಗಳು ಸಹ ಮುನಿಸು ಹೊರಹಾಕಿದ್ದರು. 'ಕೆಜಿಎಫ್ 2' ಸಿನಿಮಾ ಬಾಕ್ಸ್ ಆಫೀಸ್ ದೋಚುತ್ತಿರುವುದರ ಬಗ್ಗೆ ಟ್ವೀಟ್ ಮಾಡಿದ್ದ ಹೊಂಬಾಳೆ, 'ಬಾಕ್ಸ್ ಆಫೀಸ್ ಸುಲ್ತಾನನ ಅಬ್ಬರ ಮುಂದುವರೆದಿದೆ'' ಎಂದು ಟ್ವೀಟ್ ಮಾಡಲಾಗಿತ್ತು. ಇದರ ಬಗ್ಗೆ ಆಕ್ಷೇಪಣೆ ವ್ಯಕ್ತಪಡಿಸಿದ್ದ ದರ್ಶನ್ ಅಭಿಮಾನಿಗಳು, 'ಬಾಕ್ಸ್ ಆಫೀಸ್ ಸುಲ್ತಾನ' ಎಂಬ ಬಿರುದು ದರ್ಶನ್ ಅವರದ್ದು, ಯಶ್ಗೆ ಅದನ್ನು ಬಳಸಿರುವುದು ತಪ್ಪು ಎಂದಿದ್ದರು. ಅಲ್ಲದೆ, " ಬಜಾರ್ನಲ್ಲಿ ತುಂಬಾ ಜನ ನಾನೇ ಸುಲ್ತಾನ.. ನಾನೇ ಸುಲ್ತಾನ ಅಂತ ಓಡುತ್ತಿರುತ್ತಾರೆ. ಆದರೆ, ಒರಿಜಿನಲ್ ಸುಲ್ತಾನ, ಎಲ್ಲರನ್ನೂ ಓಡಾಡಿಸಿಕೊಂಡು, ಆಟ ನೋಡಿಕೊಂಡು ನಿಂತಿರುತ್ತಾನೆ." ಎಂದು ದರ್ಶನ್ ಸಿನಿಮಾದ ಡೈಲಾಗ್ ಬರೆದು ಟ್ರೋಲ್ ಸಹ ಮಾಡಿದ್ದರು.


Click it and Unblock the Notifications











