ಸೌಂದರ್ಯ ಕೊಲೆ ಕೇಸ್ ಭೇದಿಸಲಿರುವ ಕ್ರೇಜಿಸ್ಟಾರ್
ಪಂಚಭಾಷೆಯಲ್ಲಿ ಮಿನುಗಿದ ನಟಿ ಸೌಂದರ್ಯಾ ಇಹಲೋಕ ತ್ಯಜಿಸಿ ಒಂದು ದಶಕವೇ ಕಳೆದಿದೆ. ವಿಮಾನ ದುರಂತದಿಂದ ಮೋಡದ ಮರೆಯಲ್ಲಿ ಮರೆಯಾದ ಸೌಂದರ್ಯ ಹೆಸರು ಇದೀಗ ಗಾಂಧಿನಗರದಲ್ಲಿ ಸದ್ದು ಮಾಡುತ್ತಿದೆ.
ಹಾಗೆ ಸೌಂದರ್ಯಾ ಮತ್ತೆ ಸ್ಯಾಂಡಲ್ ವುಡ್ ನಲ್ಲಿ ಸುದ್ದಿ ಮಾಡುತ್ತಿರುವುದಕ್ಕೆ ಕಾರಣ ನಿರ್ದೇಶಕ ದಯಾಳ್ ಪದ್ಮನಾಭನ್. ಈ ಹಿಂದೆ ಮಸಾಲಾ, ಯಶವಂತ್, ಘರ್ಷಣೆ ಸಿನಿಮಾಗಳನ್ನ ನೀಡಿದ್ದ ದಯಾಳ್ ಇದೀಗ 'ಸೌಂದರ್ಯ ಕೊಲೆ ಕೇಸ್' ನ ತೆರೆಮೇಲೆ ತರೋಕೆ ಸಿದ್ಧತೆ ನಡೆಸುತ್ತಿದ್ದಾರೆ.[ಸೌಂದರ್ಯ ವಿಲ್ ಬರೆದಿಟ್ಟಿದ್ದೇಕೆ,ಸಾವಿನ ಮುನ್ಸೂಚನೆ?]
ಸೌಂದರ್ಯಾ ಅಂದ ಕೂಡಲೆ ನಿಮಗೆ ಥಟ್ ಅಂತ ನೆನಪಾಗುವುದು, ಒಂದ್ಕಾಲದಲ್ಲಿ ಇಡೀ ಸ್ಯಾಂಡಲ್ ವುಡ್, ಟಾಲಿವುಡ್, ಕಾಲಿವುಡ್ ನ ಆಳಿದ ಬೆಂಗಳೂರು ಚೆಲುವೆ ಸೌಂದರ್ಯಾ. ಆದರೆ ನಟಿ ಸೌಂದರ್ಯಗೂ ಈ ಕೊಲೆ ಕೇಸ್ ಗೂ ಯಾವುದೇ ಸಂಬಂಧವಿಲ್ಲ. [ನಮ್ಮನ್ನಗಲಿದ ನಕ್ಷತ್ರ ಸೌಂದರ್ಯಾ ಆಪ್ತ ನೆನಪುಗಳು]

ಮಲಯಾಳಂನ ಹಿಟ್ ಸಿನಿಮಾ 'ಚಿಂತಾಮಣಿ ಕೊಲಾ ಕೇಸ್' ರೀಮೇಕ್ ಮಾಡುತ್ತಿರುವ ದಯಾಳ್ ಅದಕ್ಕೆ 'ಸೌಂದರ್ಯ ಕೊಲೆ ಕೇಸ್' ಅಂತ ಟೈಟಲ್ ಇಟ್ಟಿದ್ದಾರೆ. 'ಚಿತ್ರದ ನಾಯಕಿ ಸೌಂದರ್ಯಳ ಬರ್ಬರ ಹತ್ಯೆಯಾಗುತ್ತೆ. ಹೀಗಾಗಿ ಅದನ್ನೇ ಟೈಟಲ್ ಇಟ್ಟಿದ್ದೀವಿ' ಅಂತಾರೆ ದಯಾಳ್ ಪದ್ಮನಾಭನ್. [ಸ್ಯಾಂಡಲ್ ವುಡ್ ನಲ್ಲಿ ಹೊಸ ರಣಧೀರನ ಉದಯ]
ಇನ್ನೂ ಈ ಚಿತ್ರದ ಪ್ರಮುಖ ಪಾತ್ರಕ್ಕೆ ಕ್ರೇಜಿ ಸ್ಟಾರ್ ರವಿಚಂದ್ರನ್ ನ ಒಪ್ಪಿಸುವುದಕ್ಕೆ ದಯಾಳ್ ಓಡಾಡುತ್ತಿದ್ದಾರೆ. ''ಎರಡು ತಿಂಗಳ ಹಿಂದೆಯೇ ರವಿ ಸಾರ್ ಗೆ ಕಥೆ ಹೇಳಿದ್ದೆ, ಸಿನಿಮಾ ನೋಡಿ ಇಷ್ಟಪಟ್ಟಿದ್ದರು. ಅವರು ಒಪ್ಪಿಕೊಂಡರೆ ರವಿ ಸಾರ್ ಗೆ ಆಕ್ಷನ್ ಕಟ್ ಹೇಳೋ ಅವಕಾಶ ನನಗೆ ಸಿಗುತ್ತೆ'' ಅಂತ ಫಿಲ್ಮಿಬೀಟ್ ಕನ್ನಡಗೆ ದಯಾಳ್ ಪದ್ಮನಾಭನ್ ತಿಳಿಸಿದರು.
ರವಿಚಂದ್ರನ್ ಸದ್ಯ 'ಅಪೂರ್ವ' ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕಾರ್ಯದಲ್ಲಿ ಬಿಜಿಯಾಗಿದ್ದಾರೆ. ಇದರ ಜೊತೆಗೆ ಮಗನ ಸಿನಿಮಾಗೂ ಸಿದ್ಧತೆ ನಡೆಸುತ್ತಿದ್ದಾರೆ. ಹೀಗಾಗಿ 'ಸೌಂದರ್ಯ ಕೊಲೆ ಕೇಸ್' ನ ಕೈಗೆತ್ತಿಕೊಳ್ಳುವುದಕ್ಕಿನ್ನೂ ಅವರು ಗ್ರೀನ್ ಸಿಗ್ನಲ್ ಕೊಟ್ಟಿಲ್ಲ. ['ಶೃಂಗಾರ' ಚಿತ್ರದಿಂದ ಹೊರಬಿದ್ದ ಕನಸುಗಾರ ಕ್ರೆಜಿಸ್ಟಾರ್]
ದಯಾಳ್ ಕೂಡ 'ಹಗ್ಗದ ಕೊನೆ' ಚಿತ್ರದಲ್ಲಿ ಬಿಜಿಯಾಗಿದ್ದಾರೆ. ಅದು ರಿಲೀಸ್ ಆದ ನಂತರ ಮತ್ತೊಮ್ಮೆ ರವಿಚಂದ್ರನ್ ಜೊತೆ ಮಾತನಾಡುವುದಕ್ಕೆ ನಿರ್ಧರಿಸಿದ್ದಾರೆ. ಒಂದ್ವೇಳೆ ರವಿಮಾಮ ಒಪ್ಪಿಕೊಂಡರೆ, ಸೌಂದರ್ಯಾ ಕೊಲೆ ಕೇಸ್ ಗೆ ಅವರೇ ಕ್ರಿಮಿನಲ್ ಲಾಯರ್ ಆಗ್ತಾರೆ. (ಫಿಲ್ಮಿಬೀಟ್ ಕನ್ನಡ)


Click it and Unblock the Notifications











