ನಾಗತಿಹಳ್ಳಿ ಚಂದ್ರಶೇಖರ್ ವಿದ್ಯಾರ್ಥಿಗಳಿಗೆ ಸಿನಿಪಾಠ ಮಾಡಿದ ಕ್ರೇಜಿಸ್ಟಾರ್
ಸಿನಿಮಾ ಇಂಡಸ್ಟ್ರಿಗೆ ಬರಬೇಕು, ಸಿನಿಮಾ ನಿರ್ದೇಶಿಸಬೇಕು, ಸಿನಿಮಾದಲ್ಲಿ ನಟಿಸಬೇಕು ಅಥವಾ ಸಿನಿಮಾಗಾಗಿ ಬರೆಯಬೇಕು ಎಂಬ ಆಸೆಗಳೊಂದಿಗೆ ಅದೇಷ್ಟೊ ಜನ ಯುವಕರು ಗಾಂಧಿನಗರದಲ್ಲಿ ಸುತ್ತಾಡುತ್ತಿದ್ದಾರೆ. ಚಿತ್ರರಂಗಕ್ಕೆ ಭವಿಷ್ಯದ ಪ್ರತಿಭೆಗಳನ್ನು ತಯಾರು ಮಾಡುವವರ ಪೈಕಿ ನಾಗತಿಹಳ್ಳಿ ಚಂದ್ರಶೇಖರ್ ಅವರ 'ಟೆಂಟ್ ಸಿನಿಮಾ'ವೂ ಒಂದಾಗಿದೆ.
ಕನ್ನಡದ ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸಾರಥ್ಯದ 'ಟೆಂಟ್ ಸಿನಿಮಾ ಶಾಲೆ'ಯಲ್ಲಿ ಸಿನಿಮಾ ಕಾರ್ಯಗಾರ ನಡೆಯುತ್ತಿದೆ. ಸೀಮಿತ ವಿದ್ಯಾರ್ಥಿಗಳಿಗೆ ದಾಖಲಾತಿ ನೀಡಿ ಚಿತ್ರ ನಿರ್ಮಾಣದ ಕುರಿತು ಅನುಭವಿ ತಂತ್ರಜ್ಞ-ಕಲಾವಿದರಿಂದ ತರಬೇತಿ ನೀಡಲಾಗುತ್ತದೆ.
ಆಗಸ್ಟ್ 29 ರಂದು ಭಾನುವಾರ ಟೆಂಟ್ ಸಿನಿಮಾ ಶಾಲೆಯಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಟೆಂಟ್ ಸಿನಿಮಾದ ವಿದ್ಯಾರ್ಥಿಗಳೊಂದಿಗೆ ತಮ್ಮ ಸಿನಿಮಾ ಜರ್ನಿಯ ಅನುಭವ ಹಂಚಿಕೊಂಡರು. ಚಿತ್ರರಂಗ ಅಂದ್ರೆ ಏನು? ಸಿನಿಮಾ ಹಿಂದಿನ ಶ್ರಮ, ಸಿನಿಮಾ ಉದ್ದೇಶ ಏನಾಗಿರಬೇಕು ಎಂಬ ವಿಚಾರಗಳ ಬಗ್ಗೆ ವಿದ್ಯಾರ್ಥಿಗಳಿಗೆ ಸಲಹೆ ಕೊಟ್ಟರು.

ಟೆಂಟ್ ಸಿನಿಮಾ ಕಾರ್ಯಗಾರದಲ್ಲಿ ರವಿಚಂದ್ರನ್ ಭಾಗವಹಿಸಿದ್ದ ಫೋಟೋಗಳನ್ನು ಸ್ವತಃ ನಾಗತಿಹಳ್ಳಿ ಚಂದ್ರಶೇಖರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಧನ್ಯವಾದ ತಿಳಿಸಿದ್ದಾರೆ. ''ಅವರು ಜೀವನ ಎಂಬ ವಿಶ್ವವಿದ್ಯಾಲಯದಲ್ಲಿ ಅದ್ಭುತ ಶಿಕ್ಷಕರು. ತಮ್ಮ ಸಿನಿ ಪಯಣದ ಸಹಜ ಮತ್ತು ಆಳವಾದ ಅನುಭವದ ಮಾತುಗಳಿಂದ ಹೃದಯಗಳನ್ನು ಮುಟ್ಟಿದರು. ನನಗೆ ಮತ್ತು ನಮ್ಮ ಟೆಂಟ್ ಸಿನಿಮಾ ವಿದ್ಯಾರ್ಥಿಗಳಿಗೆ ಭಾನುವಾರವನ್ನು ಅತ್ಯಂತ ವಿಶೇಷವಾಗಿರಿಸಿದರು. ರವಿಚಂದ್ರನ್ ಅವರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳು'' ಎಂದು ನಾಗತಿಹಳ್ಳಿ ಟ್ವಿಟ್ಟರ್ನಲ್ಲಿ ಪೋಸ್ಟ್ ಹಾಕಿದ್ದಾರೆ.
ರವಿಚಂದ್ರನ್ ಸಿನಿಮಾಗಳು
ಪಿ ವಾಸು ನಿರ್ದೇಶನದಲ್ಲಿ ದೃಶ್ಯ 2 ಸಿನಿಮಾದ ಚಿತ್ರೀಕರಣ ಪೂರ್ಣಗೊಳಿಸಲಾಗಿದೆ. ಮಲಯಾಳಂ ಹಿಟ್ ಚಿತ್ರ 'ದೃಶ್ಯಂ-2' ಕನ್ನಡ ರಿಮೇಕ್ ಇದಾಗಿದ್ದು, ಶೀಘ್ರದಲ್ಲಿ ತೆರೆಗೆ ಬರಲಿದೆ. ಗಿರಿರಾಜ್ ನಿರ್ದೇಶನದಲ್ಲಿ 'ಕನ್ನಡಿಗ' ಚಿತ್ರವೂ ಶೂಟಿಂಗ್ ಮುಗಿಸಿ ಬಿಡುಗಡೆಯಾಗಲು ತಯಾರಾಗುತ್ತಿದೆ. ರವಿಚಂದ್ರನ್ ನಿರ್ದೇಶಿಸಿ, ನಟಿಸಿರುವ ಸಿನಿಮಾ 'ರಾಜೇಂದ್ರ ಪೊನ್ನಪ್ಪ' ರಿಲೀಸ್ ಆಗಬೇಕಿದೆ.
ಇನ್ನು 'ಇಂಡಿಯಾ vs ಇಂಗ್ಲೆಂಡ್' ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಕೊನೆಯ ಸಿನಿಮಾ. 2020ರಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರದಲ್ಲಿ ವಸಿಷ್ಠ ಸಿಂಹ, ಮಾನ್ವಿತಾ ಕಾಮತ್, ಅನಂತ್ ನಾಗ್, ಸುಮಲತಾ, ಪ್ರಕಾಶ್ ಬೆಳವಾಡಿ, ಸಾಧುಕೋಕಿಲಾ ಸೇರಿದಂತೆ ಹಲವರು ನಟಿಸಿದ್ದರು.


Click it and Unblock the Notifications











