ಮೊದಲು ಡಾ.ರಾಜ್, ನಂತ್ರ ದರ್ಶನ್.! ಡಿ-ಬಾಸ್ ಬಗ್ಗೆ ಹೀಗ್ಯಾಕಂದ್ರು ರವಿಶಂಕರ್.?
Recommended Video

ಕರ್ನಾಟಕ ರತ್ನ, ಅಭಿಮಾನಿಗಳ ಆರಾಧ್ಯ ದೈವ, ಗಾನ ಗಂಧರ್ವ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ, ಕನ್ನಡಿಗರ ಕಣ್ಮಣಿ ಅಂತೆಲ್ಲ ಅಭಿಮಾನಿಗಳಿಂದ ಪ್ರೀತಿಯಿಂದ ಕರೆಯಿಸಿಕೊಳ್ಳುವ ವರನಟ ಡಾ.ರಾಜ್ ಕುಮಾರ್.
ಇನ್ನೂ ಸ್ಯಾಂಡಲ್ ವುಡ್ ನಲ್ಲಿ 'ಚಾಲೆಂಜಿಂಗ್ ಸ್ಟಾರ್' ಆಗಿ 'ಬಾಕ್ಸ್ ಆಫೀಸ್ ಸುಲ್ತಾನ್' ಪಟ್ಟಕ್ಕೇರಿರುವ ಅಭಿಮಾನಿಗಳ ಪ್ರೀತಿಯ 'ದಾಸ' ದರ್ಶನ್.
ಡಾ.ರಾಜ್ ಕುಮಾರ್ ಹಾಗೂ ನಟ ದರ್ಶನ್ ಬಗ್ಗೆ ನಾವೀಗ ಒಟ್ಟೊಟ್ಟಿಗೆ ಮಾತನಾಡಲು ಕಾರಣ ರವಿಶಂಕರ್ ಗೌಡ. ಕಿರುತೆರೆಯ 'ಸಿಲ್ಲಿ ಲಲ್ಲಿ' ಧಾರಾವಾಹಿ ಮೂಲಕ ಜನಪ್ರಿಯತೆಯ ಉತ್ತುಂಗಕ್ಕೆ ಏರಿದ ರವಿಶಂಕರ್ ಗೌಡ ಇದೀಗ ಬೆಳ್ಳಿತೆರೆ ಮೇಲೆ ಹೀರೋ ಆಗಿಯೂ ಖ್ಯಾತಿ ಪಡೆದಿದ್ದಾರೆ.
ಇಂತಿಪ್ಪ ರವಿಶಂಕರ್ ಗೌಡ ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಗ್ಗೆ ಒಂದು ಕಾಮೆಂಟ್ ಮಾಡಿದ್ದಾರೆ. ಏನಪ್ಪಾ ಆ ಕಾಮೆಂಟ್.? ಡಾ.ರಾಜ್ ಕುಮಾರ್ ಅವರನ್ನ ಪ್ರಸ್ತಾಪಿಸಿದ್ದು ಏಕೆ.? ಎಂಬುದರ ಸಂಪೂರ್ಣ ವಿವರ ಇಲ್ಲಿದೆ ಓದಿರಿ...

ದರ್ಶನ್ ಗೆ ನನ್ನ ಮೇಲೆ ಕೋಪ ಇದೆ.!
''ಹೊಸಬರಿಗೆ ಹೆಚ್ಚಿನ ಪ್ರೋತ್ಸಾಹ ನೀಡುವುದರಲ್ಲಿ ದರ್ಶನ್ ಎತ್ತಿದ ಕೈ. ಸುಮಾರು ಜನರಿಗೆ ಗೊತ್ತಿಲ್ಲ. ನನ್ನ ಆತ್ಮೀಯ ಗೆಳೆಯ ದರ್ಶನ್ ಅವರ ಮೊದಲ ಪ್ರೊಡಕ್ಷನ್ ನಲ್ಲಿ ನಾನೇ ಹೀರೋ ಆಗ್ಬೇಕಿತ್ತು. ಕಾರಣಾಂತರಗಳಿಂದ ಅದು ಆಗಲಿಲ್ಲ. ಹೀಗಾಗಿ ದರ್ಶನ್ ಗೆ ಇವತ್ತಿಗೂ ನನ್ನ ಮೇಲೆ ಕೋಪ ಇದೆ. ಆದರೂ ಅಲ್ಲಲ್ಲೇ ಸಮಾಧಾನ ಮಾಡಿಕೊಳ್ತೀವಿ ಇಬ್ಬರೂ'' ಎಂದು ಕಾರ್ಯಕ್ರಮವೊಂದರಲ್ಲಿ ದರ್ಶನ್ ಬಗ್ಗೆ ರವಿಶಂಕರ್ ಗೌಡ ಮಾತನಾಡಲು ಆರಂಭಿಸಿದರು.

ಎಕ್ಸ್ ಟ್ರಾ ನರಗಳು ಬೇಕು.!
''ಭಾರತೀಯ ಚಿತ್ರರಂಗದಲ್ಲಿ ನನಗೆ ಗೊತ್ತಿರುವ ಹಾಗೆ, ಜನಪ್ರಿಯತೆಯ ತುತ್ತ ತುದಿಯಲ್ಲಿ ಇದ್ದ ಇಬ್ಬರು ನಟರು ಇಡೀ ಸಿನಿಮಾದಲ್ಲಿ ನೆಗೆಟಿವ್ ಪಾತ್ರ ಮಾಡಿದರು. ಹಾಗೆ ಮಾಡೋಕೆ ಎಕ್ಸ್ ಟ್ರಾ ನರಗಳು ಬೇಕು. ಆ ಇಬ್ಬರು ನಟರು ಯಾರು ಅಂದ್ರೆ ಒಬ್ಬರು ಡಾ.ರಾಜ್ ಕುಮಾರ್ ಇನ್ನೊಬ್ಬರು ದರ್ಶನ್'' ಎಂದು ರವಿಶಂಕರ್ ಗೌಡ ಹೇಳುತ್ತಿದ್ದಂತೆಯೇ ನೆರೆದಿದ್ದವರು ಶಿಳ್ಳೆ, ಚಪ್ಪಾಳೆ ಹೊಡೆಯಲು ಶುರು ಮಾಡಿದರು.

ಅಂದು 'ಭಕ್ತ ಪ್ರಹ್ಲಾದ', ಇಂದು 'ಕುರುಕ್ಷೇತ್ರ'
''ಭಕ್ತ ಪ್ರಹ್ಲಾದ' ಚಿತ್ರದಲ್ಲಿ 'ಹಿರಣ್ಯಕಶ್ಯಪ' ಪಾತ್ರದಲ್ಲಿ ಡಾ.ರಾಜ್ ಕುಮಾರ್ ಅಭಿನಯಿಸಿದ್ದರು. ಈಗ 'ಕುರುಕ್ಷೇತ್ರ' ಚಿತ್ರದಲ್ಲಿ ದರ್ಶನ್ 'ದುರ್ಯೋಧನ' ಪಾತ್ರದಲ್ಲಿ ಮಿಂಚಲಿದ್ದಾರೆ'' - ರವಿಶಂಕರ್ ಗೌಡ

ದೃಷ್ಟಿ ತೆಗೆಸಿಕೊಳ್ಳಿ...
''ದುರ್ಯೋಧನ'ನಾಗಿ ದರ್ಶನ್ ಎಷ್ಟು ಚೆನ್ನಾಗಿ ಕಾಣಿಸುತ್ತಾರೆ ಅಂದ್ರೆ, ''ಯಾವ ದೃಷ್ಟಿಯೂ ನಿಮ್ಮ ಮೇಲೆ ಬೀಳದೆ ಇರಲಿ'' ಅಂತ ಹೇಳಿದೆ. 'ಕುರುಕ್ಷೇತ್ರ' ಚಿತ್ರ ಅದ್ಭುತ ಯಶಸ್ಸು ಕಾಣಲಿ ಅಂತ ನಾನು ಹಾರೈಸುತ್ತೇನೆ'' - ರವಿಶಂಕರ್ ಗೌಡ

ಇಷ್ಟೆಲ್ಲ ರವಿಶಂಕರ್ ಹೇಳಿದ್ದೆಲ್ಲಿ.?
ಅಷ್ಟಕ್ಕೂ, ರವಿಶಂಕರ್ ಇದನ್ನೆಲ್ಲ ಹೇಳಿದ್ದು ಕನ್ನಡದ 'ವೆನ್ನಿಲ್ಲಾ' ಸಿನಿಮಾದ ಆಡಿಯೋ ಹಾಗೂ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ.

ಪಕ್ಕದಲ್ಲೇ ಇದ್ದ ದರ್ಶನ್.!
'ಬ್ಯೂಟಿಫುಲ್ ಮನಸ್ಸುಗಳು' ಸಿನಿಮಾ ಖ್ಯಾತಿಯ ಜಯತೀರ್ಥ ನಿರ್ದೇಶನದ 'ವೆನ್ನಿಲ್ಲಾ' ಚಿತ್ರದ ಆಡಿಯೋ ಮತ್ತು ಟ್ರೈಲರ್ ಬಿಡುಗಡೆ ಮಾಡಲು ಮುಖ್ಯ ಅತಿಥಿಯಾಗಿ ದರ್ಶನ್ ಆಗಮಿಸಿದ್ದರು. ದರ್ಶನ್ ಸಮ್ಮುಖದಲ್ಲಿಯೇ ರವಿಶಂಕರ್ ಇದನ್ನೆಲ್ಲ ಮಾತನಾಡಿದರು. ದರ್ಶನ್ ಬಗ್ಗೆ ರವಿಶಂಕರ್ ಮಾತನಾಡಿದ್ದನ್ನ ಕೇಳಿದ್ಮೇಲೆ ಡಿ-ಬಾಸ್ ಫ್ಯಾನ್ಸ್ ಅಂತೂ ಫುಲ್ ಖುಷಿಯಾಗಿದ್ದಾರೆ.


Click it and Unblock the Notifications











