ರಾಮಮಂದಿರ ನಿರ್ಮಾಣಕ್ಕೆ 5 ಲಕ್ಷ ದೇಣಿಗೆ ನೀಡಿದ ರೆಮೋ ನಿರ್ಮಾಪಕ
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಕಾಮಗಾರಿ ಶುರುವಾಗಿದೆ. ಐತಿಹಾಸಿಕ ರಾಮಮಂದಿರ ನಿರ್ಮಿಸಲು ದೇಶಾದ್ಯಂತ ದೇಣಿಗೆ ಸಂಗ್ರಹಿಸಲಾಗುತ್ತಿದೆ. ಜನವರಿ 15 ರಿಂದ ಫೆಬ್ರವರಿ 27ರವರೆಗೂ ವಿಶ್ವ ಹಿಂದೂ ಪರಿಷತ್ ದೇಣಿಗೆ ಸಂಗ್ರಹಿಸುತ್ತಿದೆ.
ರಾಮಮಂದಿರ ನಿರ್ಮಾಣಕ್ಕೆ ಕನ್ನಡ ಚಲನಚಿತ್ರ ನಿರ್ಮಾಪಕ ಹಾಗೂ ವಿಧಾನಪರಿಷತ್ ಸದಸ್ಯ ಸಿಆರ್ ಮನೋಹರ್ 5 ಲಕ್ಷ ದೇಣಿಗೆ ನೀಡಿದ್ದಾರೆ. ಈ ವಿಚಾರವನ್ನು ನಿರ್ದೇಶಕ ಪವನ್ ಒಡೆಯರ್ ತಮ್ಮ ಫೇಸ್ಬುಕ್ ಹಾಗೂ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ.
''ರಾಮಮಂದಿರ ನಿರ್ಮಾಣಕ್ಕಾಗಿ "ರೇಮೊ" ಚಿತ್ರದ ನಿರ್ಮಾಪಕರಾದ ಸಿಆರ್ ಮನೋಹರ್ ಸರ್ 5ಲಕ್ಷ ನೀಡಿದ ಸಂದರ್ಭ. ಸರ್ವೇ ಜನ ಸುಖಿನೋ ಭವಂತು'' ಎಂದು ಒಡೆಯರ್ ಪೋಸ್ಟ್ ಹಾಕಿದ್ದಾರೆ.

ಈ ಹಿಂದೆ ಸ್ಯಾಂಡಲ್ವುಡ್ನಿಂದ ಹಲವು ಸೆಲೆಬ್ರಿಟಿಗಳು ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿದ್ದಾರೆ. ನಟಿ ಅಮೂಲ್ಯ ಮತ್ತು ಜಗದೀಶ್ ದಂಪತಿ 1.5 ಲಕ್ಷ ರೂಪಾಯಿ ದೇಣಿಗೆ ನೀಡಿದ್ದರು. ದೇಣಿಗೆ ನೀಡಿದ ರಸೀದಿಯನ್ನು ಅಮೂಲ್ಯ ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದಾರೆ.
ಅದಕ್ಕೂ ಮುಂಚೆ ನಟಿ ಪ್ರಣಿತಾ ಸುಭಾಷ್ ಸಹ ಒಂದು ಲಕ್ಷ ರೂಪಾಯಿ ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿದ್ದರು.

ಅಂದ್ಹಾಗೆ, ಸಿಆರ್ ಮನೋಹರ್ ಅವರು ಸದ್ಯ ರೆಮೋ ಎಂಬ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇಶಾನ್ ನಟನೆಯ ಈ ಚಿತ್ರವನ್ನು ಪವನ್ ಒಡೆಯರ್ ನಿರ್ದೇಶಿಸಿದ್ದಾರೆ. ಆಶಿಕಾ ರಂಗನಾಥ್ ನಾಯಕಿಯಾಗಿ ನಟಿಸಿದ್ದಾರೆ.


Click it and Unblock the Notifications











