ಕೆಜಿಎಫ್ 2 ಮುಹೂರ್ತ : ಪೂಜೆ ಮಾಡಿದ ಪುರೋಹಿತರೂ ಬಿಟ್ಟಿದ್ದರು 'ಗಡ್ಡ'
'ಕೆಜಿಎಫ್' ಸಿನಿಮಾ ಸಾಕಷ್ಟು ವಿಶೇಷಗಳನ್ನು ಹೊಂದಿದೆ. ಅದರಲ್ಲಿ 'ಗಡ್ಡ' ಕೂಡ ಒಂದು. ಸಿನಿಮಾದ ಬಹುತೇಕ ಪಾತ್ರಗಳು ಗಮನ ಸೆಳೆದಿದ್ದು 'ಗಡ್ಡ'ದ ಮೂಲಕವೇ.
'ಕೆಜಿಎಫ್' ಸಿನಿಮಾದಲ್ಲಿ ನಟ ಯಶ್ ಜೊತೆಗೆ ನಟಿಸಿದ್ದ ಬಹುತೇಕ ಎಲ್ಲ ವಿಲನ್ ಗಳು ಗಡ್ಡ ಬಿಟ್ಟಿದ್ದರು. ಯಶ್ ಎಲ್ಲಿಯೇ ಹೋದರು ಗಡ್ಡದ ಬಗ್ಗೆ ಚರ್ಚೆ ಆಗುತ್ತಿತ್ತು. ಆದರೆ, ಇದೀಗ ಆ ಗಡ್ಡದ ಎಫೆಕ್ಟ್ ಮತ್ತೊಂದು ಹಂತಕ್ಕೆ ಹೋಗಿದೆ.
ಇಂದು 'ಕೆಜಿಎಫ್ ಚಾಪ್ಟರ್ 2' ಸಿನಿಮಾದ ಮುಹೂರ್ತ ಕಾರ್ಯಕ್ರಮ ವಿಜಯನಗರದ ಕೋದಂಡರಾಮ ದೇವಾಲಯದಲ್ಲಿ ನೆರವೇರಿದೆ. ಮುಹೂರ್ತದ ಫೋಟೋಗಳನ್ನು ಗಮನಿಸಿದರೆ ಅಲ್ಲಿನ ದೇವಸ್ಥಾನದ ಪುರೋಹಿತರೂ ಸಹ ಗಡ್ಡ ಬಿಟ್ಟಿರುವುದು ಕಾಣುತ್ತದೆ.

ಇದನ್ನು ಗಮನಿಸಿರುವ ಪ್ರೇಕ್ಷಕರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ತಮಾಷೆ ಮಾಡಿದ್ದಾರೆ. ಪ್ರತಾಪ್ ಹೆಗ್ಡೆ ಎಂಬುವವರು 'ಈ ಸಿನಿಮಾದವ್ರದ್ದದು ಏನ್ ಕಥೆ... ಪೂಜಾರಿನಾ ಕೂಡ ಗಡ್ಡ ಇರೋರ್ನೆ ಹುಡ್ಕವ್ರೆ..' ಎಂಬ ಫನ್ನಿ ಬರಹವನ್ನು ಹಾಕಿದ್ದಾರೆ. ಪ್ರತಾಪ್ ಹೆಗ್ಡೆ ಅವರ ಸ್ಪೇಟಸ್ ನೆಟ್ಟಿಗರ ಗಮನ ಸೆಳೆಯುತ್ತಿದೆ.

ಅಂದಹಾಗೆ, 'ಕೆಜಿಎಫ್ ಚಾಪ್ಟರ್ 2' ಸಿನಿಮಾದ ಇಂದಿನಿಂದ ಶುಭಾರಂಭವಾಗಿದೆ. ನಟ ಯಶ್, ಚಿತ್ರದ ನಾಯಕಿ ಶ್ರೀನಿಧಿ ಶೆಟ್ಟಿ, ನಿರ್ಮಾಪಕ ವಿಜಯ ಕಿರಗಂದರು, ನಿರ್ದೇಶಕ ಪ್ರಶಾಂತ್ ನೀಲ್, ಸಿನಿಮಾಟೋಗ್ರಾಫರ್ ಭುವನ್ ಗೌಡ ಇಂದಿನ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.


Click it and Unblock the Notifications











