ಹೊಸ ಅವತಾರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ
ರಿಯಲ್ ಸ್ಟಾರ್ ಉಪೇಂದ್ರ ಈ ಬಾರಿ ವಿಭಿನ್ನ ಗೆಟಪ್ ನ ಮೂಲಕ ಪ್ರೇಕ್ಷಕರ ಮುಂದೆ ಬರಲು ಅಣಿಯಾಗುತ್ತಿದ್ದಾರೆ. ಈ ಹಿಂದೆ 'ಶ್ರೀಮತಿ' ಚಿತ್ರದಲ್ಲಿ ನುಣ್ಣಗೆ ಮೀಸೆ ಬೋಳಿಸಿಕೊಂಡು ಕಾಣಿಸಿಕೊಂಡಿದ್ದರು. 'ಸೂಪರ್' ಚಿತ್ರದಲ್ಲಿ ತರಹೇವಾರಿ ಕೇಶವಿನ್ಯಾಸ ಮಾಡಿಸಿಕೊಂಡು ಪ್ರೇಕ್ಷಕರಿಗೆ ವಿಭಿನ್ನ ಅನುಭವ ನೀಡಿದ್ದರು.
ಈಗ 'ಕಲ್ಪನಾ' ಚಿತ್ರದ ಮೂಲಕ ಹಿಂದೆಂದೂ ಕಾಣದ ಉಪೇಂದ್ರ ನಿಮ್ಮ ಮುಂದೆ ಬರುತ್ತಿದ್ದಾನೆ. ತಲೆಗೆ ಎಣ್ಣೆಹಚ್ಚಿದ, ದಪ್ಪಕನ್ನದ ಹಾಕಿಕೊಂಡು ಕಾಣಿಸಲಿದ್ದಾರೆ. ಚಿತ್ರದಲ್ಲಿ ನೀವೀಗ ನೋಡುತ್ತಿರುವ ಫೋಟೋ ಹಾರರ್ ಕಾಮಿಡಿ 'ಕಲ್ಪನಾ' ಚಿತ್ರದ್ದು.
ಈ ಚಿತ್ರದ ಉಳಿದ ಪಾತ್ರಗಳಲ್ಲಿ ಲಕ್ಷ್ಮಿ ರೈ, ಸಾಯಿಕುಮಾರ್, ಶ್ರುತಿ ಹಾಗೂ ಉಮಾಶ್ರೀ ಅಭಿನಯಿಸಿದ್ದಾರೆ. ಸುದೀರ್ಘ ಸಮಯದ ಬಳಿಕ ಈ ಚಿತ್ರದ ಮೂಲಕ ಸಾಯಿಕುಮಾರ್ ಮತ್ತೊಮ್ಮೆ ಕನ್ನಡಕ್ಕೆ ಆಗಮಿಸಿದ್ದಾರೆ. ಚಿತ್ರದಲ್ಲಿ ಅವರದು ಹೆಣ್ಣು ಅಲ್ಲದ ಗಂಡು ಅಲ್ಲದ ಪಾತ್ರ.
ತೆಲುಗು, ತಮಿಳು ಚಿತ್ರಗಳಲ್ಲಿ ಸೂಪರ್ ಹಿಟ್ ದಾಖಿಸಿದ 'ಕಾಂಚನಾ' ಚಿತ್ರದ ರೀಮೇಕ್ ಇದು. ಮೂಲದ ಚಿತ್ರದಲ್ಲಿ ಸಾಯಿಕುಮಾರ್ ಪಾತ್ರವನ್ನು ಶರತ್ ಕುಮಾರ್ ಪೋಷಿಸಿದ್ದರು. ಸದ್ಯಕ್ಕೆ 'ಕಲ್ಪನಾ' ಚಿತ್ರದ ಶೂಟಿಂಗ್ ಮುಕ್ತಾಯ ಹಂತದಲ್ಲಿದೆ. ಬಹುಶಃ ಡಿಸೆಂಬರ್ ವೇಳೆಗೆ ತೆರೆಕಾಣಬಹುದು.
ಚಿತ್ರದ ಬಗ್ಗೆ ಮಾತನಾಡುತ್ತಾ, "ಈ ಚಿತ್ರದ ಸಂಪೂರ್ಣ ಮನರಂಜನಾತ್ಮಕವಾಗಿರುತ್ತದೆ. ಪ್ರೇಕ್ಷಕರಿಗೆ ಹಬ್ಬದೂಟ" ಎಂದಿದ್ದಾರೆ ಉಪೇಂದ್ರ. 'ಕಲ್ಪನಾ' ಚಿತ್ರಕ್ಕೆ ಒಳ್ಳೆಯ ಸಬ್ಜೆಕ್ಟ್ ಇರುವ ಕಾರಣ ಸಹಜವಾಗಿಯೇ ಕುತೂಹಲವಿದೆ.
ತಮಿಳು-ತೆಲುಗಿನಲ್ಲಿ ಜಯಭೇರಿ ಬಾರಿಸಿದ್ದ 'ಕಾಂಚನಾ' ಚಿತ್ರವೇ ಕನ್ನಡ 'ಕಲ್ಪನಾ'. 'ಕಾಂಚನಾ' ಚಿತ್ರಕ್ಕೆ ರಾಘವ ಲಾರೆನ್ಸ್ ಆಕ್ಷನ್ ಕಟ್ ಹೇಳಿದ್ದರು. ಬೆಳಗಾವಿ ಬಾಲೆ ಲಕ್ಷ್ಮಿ ರೈ ಅಲ್ಲಿ ನಾಯಕಿಯಾಗಿದ್ದರು. ಕನ್ನಡದಲ್ಲೂ ಲಕ್ಷ್ಮಿ ರೈ ಅವರೇ ನಾಯಕಿ. ಆಕ್ಷನ್ ಕಟ್ ಹೇಳುತ್ತಿರುವುದು ಮಾತ್ರ ರಾಮ್ ನಾರಾಯಣ್.
ಕನ್ನಡ, ತಮಿಳು, ತೆಲುಗು ಹೀಗೆ 125ಕ್ಕೂ ಹೆಚ್ಚು ಸಿನಿಮಾಗಳನ್ನು ಡೈರೆಕ್ಟ್ ಮಾಡಿರುವ ಅನುಭವ ರಾಮ್ ನಾರಾಯಣ್ ಅವರದು. ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ಹರಿಕೃಷ್ಣ ಅವರ ಸಂಗೀತ ಚಿತ್ರಕ್ಕಿದೆ. ಹಾಡುಗಳು ಒಂದಕ್ಕಿಂತ ಒಂದು ಸೂಪರ್ ಆಗಿ ಮೂಡಿಬಂದಿವೆ ಎಂಬ ಮಾತುಗಳು ಚಿತ್ರತಂಡದಿಂದ ಕೇಳಿಬಂದಿವೆ. (ಒನ್ ಇಂಡಿಯಾ ಕನ್ನಡ ಸಿನೆಮಾ)


Click it and Unblock the Notifications











