ರೆಬೆಲ್ ಸ್ಟಾರ್ ಅಂಬರೀಶ್ ನಾಲ್ಕನೇ ವರ್ಷದ ಪುಣ್ಯ ಸ್ಮರಣೆ
2018ರ ನವೆಂಬರ್ 24ರ ಸಂಜೆ ವೇಳೆ ಹೃದಯಸ್ಥಂಬನಕ್ಕೆ ಒಳಗಾಗಿದ್ದ ಅಂಬರೀಶ್ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದ ಕಾರಣ ಅಂಬರೀಶ್ ಅದೇ ದಿನ ರಾತ್ರಿ 10.15ಕ್ಕೆ ಕೊನೆಯುಸಿರೆಳೆದರು. ನಂತರ ಅಂಬರೀಶ್ ಅವರ ಪಾರ್ಥಿವ ಶರೀರವನ್ನು ಕಂಠೀರವ ಕ್ರೀಡಾಂಗಣದಲ್ಲಿ ಇರಿಸಿ ಮಾರನೇ ದಿನ 5 ಗಂಟೆಯವರೆಗೆ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು ಹಾಗೂ ಒಂದು ಲಕ್ಷಕ್ಕೂ ಅಧಿಕ ಮಂದಿ ಅಂತಿಮ ದರ್ಶನ ಪಡೆದಿದ್ದರು. ಕನ್ನಡದ ಎಲ್ಲಾ ಕಲಾವಿದರು ಸೇರಿದಂತೆ ತೆಲುಗು, ತಮಿಳು ಹಾಗೂ ಮಲಯಾಳಂನ ಕಲಾವಿದರೂ ಸಹ ಅಂಬರೀಶ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದಿದ್ದರು. ಮಂಡ್ಯಕ್ಕೂ ಸಹ ಅಂಬರೀಶ್ ಪಾರ್ಥಿವ ಶರೀರವನ್ನು ಹೆಲಿಕಾಪ್ಟರ್ ಮೂಲಕ ರವಾನಿಸಿ ಅಲ್ಲಿನ ಜನರಿಗೂ ಅಂತಿಮ ದರ್ಶನದ ಅವಕಾಶ ಮಾಡಿಕೊಡಲಾಗಿತ್ತು.
ನಂತರ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಅಂಬರೀಶ್ ಅವರ ಅಂತ್ಯಕ್ರಿಯೆ ಮಾಡಿ ಸ್ಮಾರಕ ನಿರ್ಮಿಸಲಾಗಿದ್ದು, ಇಲ್ಲಿಗೆ ಪ್ರತಿದಿನವೂ ಹಲವಾರು ಅಭಿಮಾನಿಗಳು ಭೇಟಿ ನೀಡಿ ದರ್ಶನ ಪಡೆಯುತ್ತಿದ್ದಾರೆ. ಇನ್ನು ಇಂದು ಅಂಬರೀಶ್ ನಾಲ್ಕನೇ ವರ್ಷದ ಪುಣ್ಯ ತಿಥಿ ಇರುವ ಕಾರಣ ಸ್ಮಾರಕಕ್ಕೆ ಅಪಾರ ಅಭಿಮಾನಿಗಳು ಬಂದು ಪೂಜೆ ಸಲ್ಲಿಸುತ್ತಿದ್ದಾರೆ. ಅಂಬರೀಶ್ ಕುಟುಂಬಸ್ಥರೂ ಸಹ ಸ್ಮಾರಕಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ.

ಇನ್ನು 1952ರ ಮೇ 29ರಂದು ಮಂಡ್ಯ ಜಿಲ್ಲೆಯ ದೊಡ್ಡರಸಿನಕೆರೆ ಗ್ರಾಮದಲ್ಲಿ ಜನಿಸಿದ ಅಂಬರೀಶ್ ಅವರ ಹುಟ್ಟು ಹೆಸರು ಮಳವಳ್ಳಿ ಹುಚ್ಚೇಗೌಡ ಅಮರನಾಥ್. 1972ರಲ್ಲಿ ಬಿಡುಗಡೆಯಾದ ಪುಟ್ಟಣ್ಣ ಕಣಗಾಲ್ ನಿರ್ದೇಶನದ 'ನಾಗರಹಾವು' ಚಿತ್ರದ ಮೂಲಕ ಅಂಬರೀಶ್ ತಮ್ಮ ಕುಚಿಕು ಗೆಳೆಯ ವಿಷ್ಣುವರ್ಧನ್ ಜತೆಗೆ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ನಂತರ ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ದರ್ಶನ್, ಯಶ್, ಸುದೀಪ್ ಹಾಗೂ ಶಿವರಾಜ್ಕುಮಾರ್ ಜತೆ ಕೂಡ ಅಂಬರೀಶ್ ತೆರೆ ಹಂಚಿಕೊಂಡರು.


Click it and Unblock the Notifications











