ನನಗೇನು ಆಗಿಲ್ಲ, ಕಲ್ಲು ಗುಂಡಿನಂತಿದ್ದೇನೆ: ಅಂಬಿ
ರೆಬೆಲ್ ಸ್ಟಾರ್, ಮಂಡ್ಯದ ಗಂಡು, ವಸತಿ ಸಚಿವ ಅಂಬರೀಶ್ ಅವರು ಬೆಂಗಳೂರಿನ ವಿಕ್ರಂ ಆಸ್ಪತ್ರೆಯಿಂದ ಮಂಗಳವಾರ (ಮೇ.6) ಮಧ್ಯಾಹ್ನ ಡಿಸ್ಚಾರ್ಜ್ ಆಗಿದ್ದಾರೆ. ತಪಾಸಣೆಗಾಗಿ ಅವರು ವಿಕ್ರಂ ಆಸ್ಪತ್ರೆಗೆ ದಾಖಲಾಗಿದ್ದರು. ಅವರನ್ನು ಪರೀಕ್ಷಿಸಿದ ವೈದ್ಯರು ಎಲ್ಲವೂ ನಾರ್ಮಲ್ ಇದೆ ಎಂದು ತಿಳಿಸಿದ್ದಾರೆ.
ಅಲ್ಲಿಂದ ಬಿಡುಗಡೆಯಾದ ಮೇಲೆ ಅಂಬರೀಶ್ ಸುದ್ದಿಗಾರರ ಜೊತೆ ಮಾತನಾಡುತ್ತಾ, "ನನಗೇನು ಆಗಿಲ್ಲ್ಲ, ಕಲ್ಲು ಗುಂಡಿನಂತಿದ್ದೇನೆ. ಸುಮ್ಮನೆ ವದಂತಿ ಹಬ್ಬಿಸಿ ಜನರಲ್ಲಿ ಆತಂಕ ಮೂಡಿಸಬೇಡಿ" ಎಂದು ವಿನಂತಿಸಿಕೊಂಡರು. [ಹದಿನೇಳು ಕೆ.ಜಿ ತೂಕ ಇಳಿಸಿಕೊಂಡ ಅಂಬರೀಶ್]

ಅಂಬರೀಶ್ ಗೆ ಮತ್ತೆ ಏನೋ ಆಗಿದೆಯಂತೆ ಎನ್ನುವುದು. ಜನ ಇಲ್ಲಿಗೆ ಬರುವುದು, ಟ್ರಾಪಿಕ್ ಜಾಮ್ ಆಗುವುದು. ಅವನ್ಯಾರೋ ಅಂಬರೀಶ್ ಅಂತೆ ಇಲ್ಲಿಗೆ ಬಂದಿದ್ದಾನಂತೆ ಎಂದು ಜನ ಬೈದುಕೊಳ್ಳುವುದು ಬೇಡ ಎಂದು ಅಂಬಿ ಸೂಕ್ಷ್ಮವಾಗಿ ಪರಿಸ್ಥಿತಿ ಬಗ್ಗೆ ತಿಳಿಸಿದರು.
ಊಟಿಯಿಂದ ಅವರು ಹಿಂತಿರುಗುತ್ತಾ ಮೈಸೂರಿನಲ್ಲಿರುವ ವಿಕ್ರಮ್ ಆಸ್ಪತ್ರೆಗೆ ತಪಾಸಣೆಗೆ ತೆರಳಿದ್ದರು ಅಂಬಿ. ಬಳಿದ ಅಲ್ಲಿಂದ ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲಾಗಿದ್ದರು. ಈ ಸಂದರ್ಭದಲ್ಲಿ ಅಂಬಿ ಮತ್ತೆ ಅಸ್ವಸ್ಥರಾಗಿದ್ದಾರೆ ಎಂಬ ವದಂತಿ ಹಬ್ಬಿತ್ತು. ಈ ಬಗ್ಗೆ ಅವರು ತಮ್ಮದೇ ಆದ ರೀತಿಯಲ್ಲಿ ಉತ್ತರಿಸಿದರು.
ವಿಕ್ರಂ ಆಸ್ಪತ್ರೆಯ ವೈದ್ಯರಾದ ಡಾ.ಸತೀಶ್ ಅವರು ಮಾತನಾಡುತ್ತಾ, "ಸಾಮಾನ್ಯ ಆರೋಗ್ಯ ತಪಾಸಣೆ ಮಾಡಲಾಗಿದೆ. ಅಂಬಿ ಆರೋಗ್ಯದಲ್ಲಿ ಯಾವುದೇ ಏರುಪೇರಿಲ್ಲ. ಯಾರೂ ಗಾಬರಿಪಡುವಂತಹ ಅವಶ್ಯಕತೆ ಇಲ್ಲ. ಅವರನ್ನು ತಿಂಗಳಿಗೊಮ್ಮೆ ಮಾನೀಟರ್ ಮಾಡಬೇಕಾಗುತ್ತದೆ. ಬೆಳಗ್ಗೆ, ರಾತ್ರಿ ಅವರು ಆಸ್ಪತ್ರೆಗೆ ಬರಬೇಕಾಗುತ್ತದೆ. ಅವರಿಗೆ ಇನ್ನೇನೋ ಆಗಿದೆ ಎಂದು ಮತ್ತೆ ಅಭಿಮಾನಿಗಳನ್ನು ಗಾಬರಿಪಡಿಸಬೇಡಿ" ಎಂದರು. (ಏಜೆನ್ಸೀಸ್)


Click it and Unblock the Notifications











