ಕಟ್ಟೆಯೊಡೆದ ಅಂಬರೀಶ್ ಅಭಿಮಾನಿಗಳ ಆಕ್ರೋಶ
ನಟ, ವಸತಿ ಸಚಿವ ರೆಬೆಲ್ ಸ್ಟಾರ್ ಅಂಬರೀಶ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಸಿಂಗಪುರದ ಮೌಂಟ್ ಎಲಿಜೆಬತ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಶನಿವಾರ (ಮಾ.1) ಮುಂಜಾನೆ 4.45ರ ಸಮಯದಲ್ಲಿ ಅವರನ್ನು ವಿಕ್ರಂ ಆಸ್ಪತ್ರೆಯಿಂದ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕರೆದೊಯ್ಯಲಾಯಿತು.
ಈ ಸಂದರ್ಭದಲ್ಲಿ ಒಂದು ವಾರದಿಂದ ಅವರ ಅಪಾರ ಅಭಿಮಾನಿ ಬಳಗ ವಿಕ್ರಂ ಆಸ್ಪತ್ರೆ ಬಳಿಯೇ ಅವರನ್ನು ನೋಡಲು ಜಾತಕಪಕ್ಷಿಯಂತೆ ಕಾಯುತ್ತಿದ್ದರು. ಆದರೆ ಅಂಬಿ ಅವರನ್ನು ನೋಡಲು ಯಾರಿಗೂ ಅವಕಾಶ ಮಾಡಿಕೊಡಲಿಲ್ಲ. ಈ ಸಂದರ್ಭದಲ್ಲಿ ಅಂಬಿ ಅಭಿಮಾನಿಗಳ ಆಕ್ರೋಶ ಕಟ್ಟೆಯೊಡೆಯಿತು.[ನಟ ಅಂಬರೀಶ್ ಬಗ್ಗೆ ನಿಮಗೆ ಗೊತ್ತಿಲ್ಲದ ಸಂಗತಿಗಳು]
ರೊಚ್ಚಿಗೆದ್ದ ಕೆಲವು ಅಭಿಮಾನಿಗಳು ಆಸ್ಪತ್ರೆ ಮೇಲೆ ಕಲ್ಲುತೂರಾಟ ಮಾಡಿದರು. ಇನ್ನೂ ಕೆಲವರು ಅಂಬಿ ಅವರನ್ನು ತಾವು ನೋಡಲೇಬೇಕು ಎಂದು ಪಟ್ಟುಹಿಡಿದು ವಿಕ್ರಂ ಆಸ್ಪತ್ರೆ ಮುಂದೆಯೇ ಉರುಳುಸೇವೆ ಮಾಡಿದರು.ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರು ಅಭಿಮಾನಿಗಳನ್ನು ಸಮಾಧಾನ ಪಡಿಸಿದರು. ಅವರು ಆಸ್ಪತ್ರೆಗೆ ದಾಖಲಾದಾಗಿನಿಂದ ನಾನೂ ಸಹ ಅವರನ್ನು ನೋಡಲು ಸಾಧ್ಯವಾಗಿಲ್ಲ. ಎಲ್ಲರೂ ನೋಡಲು ಹೋದರೆ ಇನ್ಫೆಕ್ಷನ್ ಆಗುವ ಸಾಧ್ಯತೆಗಳಿವೆ. ಆದ್ದರಿಂದ ವೈದ್ಯರು ಯಾರನ್ನೂ ಒಳಗೆ ಬಿಡುತ್ತಿಲ್ಲ ಎಂದು ಸಮಾಧಾನಪಡಿಸಿದರು.
ಅಣ್ಣಾ ಎಂದರೆ ನಮಗೆಲ್ಲರಿಗೂ ಪ್ರಾಣ. ಅವರ ಅಭಿಮಾನಿ ಬಳಗ ಕಮ್ಮಿ ಇಲ್ಲ. ಎಲ್ಲರೂ ಅವರನ್ನು ನೋಡಲು ಹೋದರೆ ಚಿಕಿತ್ಸೆಗೆ ತೊಂದರೆಯಾಗುತ್ತದೆ. ಆದ್ದರಿಂದ ಯಾರಿಗೂ ಆ ಅವಕಾಶ ಮಾಡಿಕೊಡುತ್ತಿಲ್ಲ. ಅವರು ಸಿಂಗಪುರಕ್ಕೆ ಹೋಗುತ್ತಾರೆ ಎಂಬ ಬಗ್ಗೆ ನನಗೆ ಗೊತ್ತಿರಲಿಲ್ಲ. ಈಗಷ್ಟೇ ಗೊತ್ತಾಯಿತು ಎಂದರು.
ಬಿಗಿ ಭದ್ರತೆಯೊಂದಿಗೆ ವಿಕ್ರಂ ಆಸ್ಪತ್ರೆಯಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅವರನ್ನು ಕರೆದೊಯ್ಯಲಾಯಿತು. ಅವರಿಗೆ ಸಿಂಗಪುರದ ಮೌಂಟ್ ಎಲಿಜಬೆತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ. (ಒನ್ಇಂಡಿಯಾ ಕನ್ನಡ)


Click it and Unblock the Notifications












