ನಟ ಅಂಬರೀಶ್ ಆರೋಗ್ಯದ ಬಗ್ಗೆ ಆತಂಕ ಬೇಡ
ಶ್ವಾಸಕೋಶದ ಸೋಂಕಿನಿಂದ ಉಸಿರಾಟದ ತೊಂದರೆಗೆ ಒಳಗಾಗಿ ಅಸ್ವಸ್ಥಗೊಂಡಿರುವ ನಟ, ವಸತಿ ಸಚಿವ ಅಂಬರೀಶ್ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ಮಧ್ಯಾಹ್ನವ ವೇಳೆಗೆ ವೆಂಟಿಲೇಟರ್ ತೆಗೆಯಲಾಗುತ್ತದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಸೋಮವಾರ (ಫೆ.24) ಬೆಂಗಳೂರು ಮಿಲ್ಲರ್ಸ್ ರಸ್ತೆಯ ವಿಕ್ರಂ ಆಸ್ಪತ್ರೆಗೆ ಭೇಟಿ ನೀಡಿದ ನಟಿ ತಾರಾ ಅವರು ಮಾತನಾಡುತ್ತಾ, "ಅಂಬರೀಶ್ ಅವರಿಗೆ ಏನೂ ಆಗಿಲ್ಲ. ಅವರು ಆರೋಗ್ಯವಾಗಿದ್ದಾರೆ. ಸಂಜೆ ವೇಳೆಗೆ ಅವರನ್ನು ವಾರ್ಡ್ ಗೆ ಶಿಫ್ಟ್ ಮಾಡಲಾಗುತ್ತದೆ" ಎಂದರು.

ಸದ್ಯಕ್ಕೆ ಅಂಬರೀಶ್ ಅವರು ವೆಂಟಿಲೇಟರ್ ನಲ್ಲಿರುವುದರಿಂದ ಮಾತನಾಡಲು ಸಾಧ್ಯವಾಗುತ್ತಿಲ್ಲ. ಇನ್ನೆರಡು ದಿನಗಳಲ್ಲಿ ಅವರು ಸಂಪೂರ್ಣ ಗುಣಮುಖರಾಗಲಿದ್ದಾರೆ ಎಂದು ವಿಕ್ರಂ ಆಸ್ಪತ್ರೆಯ ಹೃದ್ರೋಗ ತಜ್ಞ ರಂಗನಾಥ್ ನಾಯಕ್ ತಿಳಿಸಿದ್ದಾರೆ.
ಏತನ್ಮಧ್ಯೆ ಅಂಬರೀಶ್ ಅವರ ಆರೋಗ್ಯವನ್ನು ವಿಚಾರಿಸಲು ಆಸ್ಪತ್ರೆಗೆ ಚಿತ್ರರಂಗದ ಹಲವಾರು ಗಣ್ಯರು ಹಾಗೂ ರಾಜಕೀಯ ಧುರೀಣರು ಭೇಟಿ ನೀಡುತ್ತಿದ್ದಾರೆ. ಇದುವರೆಗೂ ಆಸ್ಪತ್ರೆಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಗೃಹ ಸಚಿವ ಕೆ.ಜೆ.ಜಾರ್ಜ್, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಸದಾನಂದಗೌಡ, ಮಾಜಿ ಸಚಿವರಾದ ಬಸವರಾಜ ಬೊಮ್ಮಾಯಿ, ಅನಿಲ್ ಲಾಡ್, ವಿ.ಸೋಮಣ್ಣ ಭೇಟಿ ನೀಡಿದ್ದಾರೆ.
ನಟರಾದ ಉಪೇಂದ್ರ, ಪ್ರಿಯಾಂಕಾ ಉಪೇಂದ್ರ, ದರ್ಶನ್, ರಮ್ಯಾ, ಆದಿತ್ಯ, ವಿಜಯ ರಾಘವೇಂದ್ರ, ದೊಡ್ಡಣ್ಣ, ತಾರಾ ಸೇರಿದಂತೆ ಹಲವಾರು ಸಿನಿ ತಾರೆಗಳು ವಿಕ್ರಂ ಆಸ್ಪತ್ರೆಗೆ ಭೇಟಿ ನೀಡಿ ಅವರ ಆರೋಗ್ಯವನ್ನು ವಿಚಾರಿಸಿದ್ದಾರೆ. (ಒನ್ಇಂಡಿಯಾ ಕನ್ನಡ)


Click it and Unblock the Notifications











