ಏ.11ಕ್ಕೆ ಬೆಂಗಳೂರಿಗೆ ರೆಬೆಲ್ ಸ್ಟಾರ್ ಅಂಬರೀಶ್
ರೆಬೆಲ್ ಸ್ಟಾರ್ ಅಂಬರೀಶ್ ಅವರು ಈಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು ಮಲೇಷ್ಯಾದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಈಗವರು ಎಷ್ಟರ ಮಟ್ಟಿಗೆ ಚೇತರಿಸಿಕೊಂಡಿದ್ದಾರೆ ಎಂದರೆ ಮಲೇಷ್ಯಾದಲ್ಲೇ ಕುಳಿತು ರಾಜ್ಯದ ರಾಜಕೀಯ ಬೆಳವಣಿಗೆಗಳ ಬಗ್ಗೆ ತಿಳಿದುಕೊಳ್ಳುತ್ತಿದ್ದಾರೆ.
ಏಪ್ರಿಲ್ 14ಕ್ಕೆ ಅವರು ನೇರವಾಗಿ ಮಂಡ್ಯಕ್ಕೆ ಬಂದಿಳಿಯಲಿದ್ದಾರೆ ಎಂಬ ಸುದ್ದಿ ಇತ್ತು. ಆದರೆ ಅವರು ಏಪ್ರಿಲ್ 11ಕ್ಕೆ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ ಎಂದು ನಿರ್ಮಾಪಕ ಸಾ.ರಾ.ಗೋವಿಂದು ಅವರು ತಿಳಿಸಿದ್ದಾರೆ. ಸದ್ಯಕ್ಕೆ ಅವರು ಅಂಬಿ ಜೊತೆ ಮಲೇಷ್ಯಾದಲ್ಲೇ ಇದ್ದು ಅಲ್ಲಿಂದಲೇ ಮಾಹಿತಿಯನ್ನು ರವಾನಿಸಿದ್ದಾರೆ. [ಅಂಬರೀಶ್ ಇತ್ತೀಚೆಗಿನ ಕಾರ್ಯಕ್ರಮದ ಮೆಲುಕು]
ಬೆಂಗಳೂರಿಗೆ ಮರಳಿದ ಬಳಿಕ ಅವರು ನೇರವಾಗಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ. ಈ ಮೂಲಕ ಅಂಬಿ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರದಲ್ಲಿ ಹೊಸ ಸ್ಫೂರ್ತಿ, ಉತ್ಸಾಹ ತುಂಬಲಿದ್ದಾರೆ. ಏಪ್ರಿಲ್ 14ರಂದು ಮಂಡ್ಯದಲ್ಲಿ ಅಂಬಿ ಅವರ ಅದ್ದೂರಿ ಸ್ವಾಗತಕ್ಕೆ ಸಿದ್ಧತೆಗಳು ಭರದಿಂದ ಸಾಗಿವೆ.ಸಿಂಗಪುರದಲ್ಲಿ ಚಿಕಿತ್ಸೆ ಪಡೆದ ಬಳಿಕ ಅಂಬರೀಶ್ ಅವರು ವಿಶ್ರಾಂತಿಗಾಗಿ ಮಲೇಷ್ಯಾದಲ್ಲಿದ್ದಾರೆ. ಅಲ್ಲಿಂದಲೇ ತಮ್ಮ ಅಭಿಮಾನಿಗಳಿಗೆ ವಿಡಿಯೋ ಸಂದೇಶ ಕಳುಹಿಸಿದ್ದರು. ಇದೀಗ ಅವರು ನೇರವಾಗಿ ಬೆಂಗಳೂರಿಗೆ ಬದಲಾಗಿ ಮಂಡ್ಯಕ್ಕೆ ಬಂದಿಳಿಯಲಿದ್ದಾರೆ.
ಸ್ವಾಗತ ಕಾರ್ಯಕ್ರಮದಲ್ಲಿ ಮಂಡ್ಯ ಹಾಲಿ ಸಂಸದೆ ರಮ್ಯಾ, ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಹಾಗೂ ಮಂಡ್ಯ ಜಿಲ್ಲೆಯ ಶಾಸಕರು ಭಾಗಿಯಾಗಲಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಖಜಾಂಚಿ ಅಮರಾವತಿ ಚಂದ್ರಶೇಖರ್ ತಿಳಿಸಿದ್ದಾರೆ.
ಶ್ವಾಸಕೋಶದ ಸೋಂಕಿನ ಚಿಕಿತ್ಸೆಗಾಗಿ ಸಿಂಗಪುರದ ಮೌಂಟ್ ಎಲಿಜಬೆತ್ ಆಸ್ಪತ್ರೆಗೆ ಅಂಬಿ ದಾಖಾಲಾಗಿ ಚಿಕಿತ್ಸೆ ಪಡೆದು ಸಂಪೂರ್ಣ ಗುಣಮುಖರಾಗಿದ್ದಾರೆ. ಇದಕ್ಕೂ ಮೊದಲು ಅವರು ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಅಭಿಮಾನಿಗಳು ಹೋಮ ಹವನ ವಿಶೇಷ ಪೂಜೆಗಳನ್ನು ಮಾಡಿ ತಮ್ಮ ನೆಚ್ಚಿನ ನಾಯಕ ಬೇಗ ಗುಣಮುಖರಾಗಲಿ ಎಂದು ಬಯಸಿದ್ದರು.


Click it and Unblock the Notifications












