ನೂತನ ದಾಂಪತ್ಯಕ್ಕೆ ಅಡಿಯಿಟ್ಟ ರೆಬೆಲ್ ಸ್ಟಾರ್ ಅಂಬಿ!
ರೆಬೆಲ್ ಸ್ಟಾರ್ ಅಂಬರೀಷ್ ಅವರು ಭಾನುವಾರ (ಮೇ 27) ನೂತನ ದಾಂಪತ್ಯಕ್ಕೆ ಅಡಿಯಿಟ್ಟರು. ಬೆಂಗಳೂರು ಜೆಪಿ ನಗರದ ತಮ್ಮ ನಿವಾಸದಲ್ಲಿ ಅಂಬರೀಷ್ ಮದುಮಗನಾಗಿ ಕಂಗೊಳಿಸುತ್ತಿದ್ದರು. ಬೆಳಗ್ಗೆ 6ಕ್ಕೆ ಆರಂಭವಾದ ಹೋಮ, ಹವನ ಪೂಜಾ ಕಾರ್ಯಕ್ರಮಗಳು ಮಧ್ಯಾಹ್ನದವರೆಗೂ ನಡೆದವು.
ಬಳಿಕ ನೂತನ ದಂಪತಿಗಳಾದ ಅಂಬರೀಷ್ ಮತ್ತು ಸುಮಲತಾ ಅವರಿಗೆ ತಣ್ಣೀರಿನಲ್ಲಿ ಅಭಿಷೇಕ ಮಾಡಲಾಯಿತು. ಅಭಿಷೇಕದ ಬಳಿಕ ದಂಪತಿಗಳನ್ನು ವಧುವರರಂತೆ ಸಿಂಗರಿಸಲಾಯಿತು. ಅಂಬರೀಷ್ ಮತ್ತು ಅಂಬಿ ಅವರ ಮದುವೆಯನ್ನು ಮತ್ತೊಮ್ಮೆ ಕಣ್ತುಂಬಿಕೊಳ್ಳುವ ಅವಕಾಶ ಮತ್ತೊಮ್ಮೆ ಅಭಿಮಾನಿಗಳ ಪಾಲಿಗೆ ಸಿಕ್ಕಿತು.
ವಧುವರರಂತೆ ಸಿಂಗರಿಸಿಕೊಂಡಿದ್ದ ದಂಪತಿಗಳು ಹೂವಿನ ಹಾರ ಬದಲಾಯಿಸಿಕೊಂಡರು. ಮಾಂಗಲ್ಯ ಧಾರಣೆ ಮಾಡಿದ ಅಂಬರೀಷ್ ನವಯುವಕನಾಗಿ ಕಂಗೊಳಿಸುತ್ತಿದ್ದರು. ಅಂಬರೀಷ್ ಮತ್ತು ಸುಮಲತಾ ದಂಪತಿಗಳ ಷಷ್ಠಿಪೂರ್ತಿ ಕಾರ್ಯಕ್ರಮಕ್ಕೆ ಹಲವರು ಸಾಕ್ಷಿಯಾದರು.
ಕನ್ನಡ, ತೆಲುಗು ಮತ್ತು ತಮಿಳು ಚಿತ್ರರಂಗದ ಹಲವರು ಶುಭ ಕೋರಿದರು. ನಟ ನಟಿಯರಾದ ಜೈಜಗದೀಶ್, ಪ್ರೇಮ್ ರಕ್ಷಿತಾ, ತೆಲುಗು ಚಿತ್ರರಂಗದ ಮೋಹನ್ ಬಾಬು, ತಾರಾ ವೇಣು, ನಿರ್ದೇಶಕರಾದ ರಾಜೇಂದ್ರ ಸಿಂಗ್ ಬಾಬು, ನಾಗತಿಹಳ್ಳಿ ಚಂದ್ರಶೇಖರ್ ಹಾಗೂ ಅರ್ಜುನ್ ಸರ್ಜಾ ಭಾಗವಹಿಸಿ ಶುಭಕೋರಿದರು.
ಅಂಬರೀಷ್ ಹುಟ್ಟುಹಬ್ಬ: ಮೇ 29ರಿಂದ 31ರವರೆಗೆ ಅಂಬರೀಷ್ ಹುಟ್ಟುಹಬ್ಬ ಸಂಭ್ರಮ ಬೆಂಗಳೂರು ಅರಮನೆ ಮೈದಾನದಲ್ಲಿ ನಡೆಯಲಿದೆ. ಈ ಮೂರು ದಿನಗಳ ಕಾಲ ಕನ್ನಡ ಚಿತ್ರರಂಗಕ್ಕೆ ರಜೆ ಘೋಷಿಸಲಾಗಿದೆ. ಈ ಮೂರು ದಿನಗಳ ಕಾಲ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ನಟಿಯರಾದ ಮಾಲಾಶ್ರೀ, ಶ್ರುತಿ, ಹರಿಪ್ರಿಯಾ, ನಿರ್ದೇಶಕ ಎಸ್ ನಾರಾಯಣ್ ಕೂಡ ನಿನ್ನೆ ಬಂದಿದ್ದರು. ಭರ್ಜರಿ ಔತಣಕೂಟವನ್ನು ಏರಪಡಿಸಲಾಗಿತ್ತು. ಸದ್ಯದಲ್ಲೇ ಇತರರೂ ಕೂಡ ಬಂದು ರಿಹರ್ಸಲ್ ನಲ್ಲಿ ಪಾಲ್ಗೊಂಡು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. (ಏಜೆನ್ಸೀಸ್)


Click it and Unblock the Notifications











