ಕರ್ನಾಟಕದ ಸಿನಿಮಾ ಕಾರ್ಮಿಕರಿಗೆ ಎರಡು ಕೋಟಿ ದೇಣಿಗೆ ನೀಡಿದ ಅಂಬಾನಿ
ಕೊರೊನಾ ವೈರಸ್ ನಿಂದ ದಿನಗೂಲಿ ನೌಕರರು ಅತೀವ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಿನಿಮಾ ಉದ್ಯಮದ ದಿನಗೂಲಿ ನೌಕರರೂ ಸಹ ತೀವ್ರ ಸಂಕಷ್ಟದಲ್ಲಿದ್ದಾರೆ.
ಸಿನಿಮಾ ಉದ್ಯಮದ ದಿನಗೂಲಿ ನೌಕಕರಿಗೆ ಸ್ಟಾರ್ ನಟ-ನಟಿಯರು, ಸಂಘಗಳು, ಸಿನಿಮಾ ಒಕ್ಕೂಟಗಳು ಕೈಲಾದ ಸಹಾಯ ಮಾಡುತ್ತಿವೆ. ಆದರೆ ಅದು ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿದೆ.
ಸಾವಿರಾರು ಮಂದಿ ದಿನಗೂಲಿ ನೌಕರರು ಸಿನಿಮಾ ಉದ್ಯಮದಲ್ಲಿ ಕೆಲಸ ಮಾಡುತ್ತಾರೆ. ಅಂದಿನ ದಿನದ ಸಂಬಳವೇ ಬಹುತೇಕರಿಗೆ ಜೀವನದ ಆಸರೆ. ಈಗ ನಟ-ನಟಿಯರು, ಒಕ್ಕೂಟಗಳು ಮಾಡಿರುವ ಸಹಾಯ ಎಲ್ಲಾ ಸಿನಿ ಕಾರ್ಮಿಕರಿಗೆ ತಲುಪಿಯೇ ಇರಲಿಲ್ಲ, ಆದರೂ ಏಪ್ರಿಲ್ 14 ಕ್ಕೆ ಲಾಕ್ಡೌನ್ ಅಂತ್ಯವಾಗುವ ನಿರೀಕ್ಷೆಯಲ್ಲಿದ್ದವರಿಗೆ ಲಾಕ್ಡೌನ್ ಮುಂದೂಡಿಕೆ ದೊಡ್ಡ ಪೆಟ್ಟು ನೀಡಿದ್ದು, ಅವರೆಲ್ಲಾ ಮತ್ತೆ ಆಕಾಶ ನೋಡುವಂತಾಗಿದೆ.

ದಿನಗೂಲಿ ನೌಕರರ ಸಹಾಯಕ್ಕೆ ಬಂದ ರಿಲಯನ್ಸ್
ಇಂಥಹಾ ಸಮಯದಲ್ಲಿ ಸಿನಿಮಾ ದಿನಗೂಲಿ ನೌಕರರ ಸಹಾಯಕ್ಕೆ ವಿಶ್ವದ ಶ್ರೀಮಂತರಲ್ಲಿ ಒಬ್ಬರಾದ ಮಖೇಶ್ ಅಂಬಾನಿ ಮತ್ತು ದಂಪತಿ ಬಂದಿದ್ದಾರೆ. ಅವರು ತಮ್ಮ ರಿಲಯನ್ಸ್ ಫೌಂಡೇಶನ್ ವತಿಯಿಂದ ಸಿನಿಮಾ ದಿನಗೂಲಿ ನೌಕರರಿಗೆ ಸಹಾಯ ಮಾಡುತ್ತಿದ್ದಾರೆ.

6000 ನೌಕರರಿಗೆ ಎರಡು ಕೋಟಿ ನೆರವು
ಕರ್ನಾಟಕದ ಸಿನಿ ಉದ್ಯಮದ ದಿನಗೂಲಿ ನೌಕರರಿಗೂ ರಿಲಯನ್ಸ್ ಸಹಾಯ ಹಸ್ತ ನೀಡಿದ್ದು, ದಿನಗೂಲಿ ನೌಕರರ 6000 ಕುಟುಂಬಗಳಿಗೆ ಎರಡು ಕೋಟಿ ವೆಚ್ಚದ ದಿನಸಿ, ಆಹಾರ ಸಾಮಗ್ರಿಗಳನ್ನು ರಿಲಯನ್ಸ್ ದೇಣಿಗೆಯಾಗಿ ನೀಡುತ್ತಿದೆ.

ಧನ್ಯವಾದ ಹೇಳಿರುವ ಬಿ.ಎಸ್.ಯಡಿಯೂರಪ್ಪ
ಕರ್ನಾಟಕ ಸಿಎಂ ಯಡಿಯೂರಪ್ಪ ಅವರು ರಿಲನ್ಸ್ ಫೌಂಡೇಶನ್ ಮಾಡುತ್ತಿರುವ ಸಹಾಯಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ಟ್ವಿಟ್ಟರ್ನಲ್ಲಿ ಈ ಬಗ್ಗೆ ಬರೆದಿರುವ ಬಿಎಸ್ವೈ, 'ಸಂಪನ್ಮೂಲವುಳ್ಳವರು ಹೀಗೆ ಸಮಾಜದ ಸಹವರ್ತಿಗಳಿಗೆ ಸಹಾಯ ಮಾಡುವಂತಾಗಲಿ' ಎಂದು ಆಶಿಸಿದ್ದಾರೆ.

ಭಾರಿ ಮೊತ್ತದ ದೇಣಿಗೆ ನೀಡಿದ ರಿಲಯನ್ಸ್
ರಿಲಯನ್ಸ್ ಫೌಂಡೇಶನ್ ಕರ್ನಾಟಕದ ಸಿನಿ ಕಾರ್ಮಿಕರಿಗೆ ಮಾತ್ರವಲ್ಲದೆ ದೇಶದ ಇತರ ಎಲ್ಲಾ ಸಿನಿ ಉದ್ಯಮಗಳ ಸಿನಿ ಕಾರ್ಮಿಕರಿಗೆ ಸಹಾಯ ಮಾಡಿದೆ. ಕೇವಲ ಸಿನಿ ಕಾರ್ಮಿಕರಿಗೆ ಮಾತ್ರವಲ್ಲದೆ, ಜನ ಸಾಮಾನ್ಯರಿಗೆ, ಇತರ ಉದ್ಯಮಗಳ ದಿನಗೂಲಿ ನೌಕರರಿಗೆ ಸಹ ಸಹಾಯ ಮಾಡುತ್ತಿದೆ. ಸರ್ಕಾರಕ್ಕೂ ಸಹ ಭಾರಿ ಮೊತ್ತದ ದೇಣಿಗೆಯನ್ನು ರಿಲಯನ್ಸ್ ನೀಡಿದೆ.


Click it and Unblock the Notifications











