'ಸೈರಾ ನರಸಿಂಹ ರೆಡ್ಡಿ' ಗೆ ಕಂದಾಯ ಅಧಿಕಾರಿಗಳಿಂದ ಶಾಕ್
ಬಹುನಿರೀಕ್ಷಿತ ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಭಾರಿ ಬಜೆಟ್ ನ 'ಸೈರಾ ನರಸಿಂಹ ರೆಡ್ಡಿ' ಚಿತ್ರತಂಡಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಚಿತ್ರದ ಚಿತ್ರಿಕರಣಕ್ಕೆ ಹಾಕಲಾಗಿದ್ದ ದೊಡ್ಡ ಸೆಟ್ ಅನ್ನು ಅಧಿಕಾರಿಗಳು ತೆರವುಗೊಳಿಸಿದ್ದಾರೆ.
'ಸೈರಾ' ಚಿತ್ರಕ್ಕಾಗಿ ನಾಯಕನ ಮನೆಯನ್ನು ನಿರ್ಮಿಸಲಾಗಿತ್ತು. ಈಗ ಅದೇ ಮನೆಯನ್ನು ಅಧಿಕಾರಿಗಳು ಕೆಡವಿದ್ದಾರೆ. ರಾಮ್ ಚರಣ್ ಅಭಿನಯದ ಸೂಪರ್ ಹಿಟ್ 'ರಂಗಸ್ಥಳಂ' ಚಿತ್ರಕ್ಕೂ ಇದೇ ಸ್ಥಳದಲ್ಲಿ ಸೆಟ್ ಹಾಕಲಾಗಿತ್ತು. 'ಸೈರಾ ನರಸಿಂಹ ರೆಡ್ಡಿ' ಚಿತ್ರವನ್ನು ಮೆಗಾ ಸ್ಟಾರ್ ಚಿರಂಜೀವಿಯವರ ಹೋಂ ಬ್ಯಾನರ್ ನಲ್ಲಿ ನಿರ್ಮಾಣವಾಗುತಿದ್ದು, ಅವರ ಪುತ್ರ ರಾಮ್ ಚರಣ್ ಈ ಚಿತ್ರಕ್ಕೆ ಬಂಡವಾಳವನ್ನ ಹಾಕಿದ್ದಾರೆ.

ಸೇರಿಲಿಂಗಂಪಲ್ಲಿಯಲ್ಲಿ ಚಿತ್ರಕ್ಕಾಗಿ ಸೆಟ್ ಗಳನ್ನು ಅನಧಿಕೃತವಾಗಿ ನಿರ್ಮಿಸಲಾಗಿತ್ತು. ಸರ್ಕಾರಿ ಭೂಮಿಯಲ್ಲಿ ಅನುಮತಿ ಇಲ್ಲದೆ ಸೆಟ್ ನಿರ್ಮಾಣ ಮಾಡಿರುವುದಕ್ಕೆ ಕಂದಾಯ ಅಧಿಕಾರಿಗಳು ಸೆಟ್ ಅನ್ನು ಕೆಡವಿದ್ದಾರೆ. ಈ ಸ್ಥಳದಿಂದ ಸೆಟ್ ಅನ್ನು ಸ್ಥಳಾಂತರಿಸಲು ಹಲವು ಬಾರಿ ಚಿತ್ರತಂಡಕ್ಕೆ ಸೂಚನೆಗಳನ್ನು ನೀಡಲಾಗಿದ್ದರೂ, ಯಾವುದೇ ಪ್ರಯೋಜನ ಆಗಿಲ್ಲ.

ಇದು ಭೂ ಸ್ವಾಧೀನಕ್ಕೆ ಚಿತ್ರತಂಡ ಹಾಕಿದ್ದ ಪೂರ್ವ ಯೋಜಿತ ಪ್ಲಾನ್ ಎಂದು ಆದಾಯ ಅಧಿಕಾರಿಗಳು ಸಂಶಯವನ್ನ ವ್ಯಕ್ತಪಡಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಚಿತ್ರತಂಡ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.


Click it and Unblock the Notifications











