ಒಕ್ಕೂಟ ಒಡೆದರೆ ಸುಮ್ಮನಿರಲ್ಲ: ಅಶೋಕ್ ಗುಡುಗು
ಕರ್ನಾಟಕ ಚಲನಚಿತ್ರ ಕಾರ್ಮಿಕರ, ಕಲಾವಿದರ, ತಂತ್ರಜ್ಞರ ಒಕ್ಕೂಟಕ್ಕೆ ಪರ್ಯಾಯ ಒಕ್ಕೂಟ ನಿರ್ಮಾಣ ಮಾಡುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಒಂದು ವೇಳೆ ಪರ್ಯಾಯ ಒಕ್ಕೂಟ ನಿರ್ಮಾಣ ಮಾಡಿದರೆ ಮಾರ್ಚ್ 12ರಿಂದ ಕನ್ನಡ ತಮ್ಮ ಒಕ್ಕೂಟದ ತಂತ್ರಜ್ಞರು ಕಾರ್ಯ ಸ್ಥಗಿತಗೊಳಿಸಲಿದ್ದಾರೆ ಎಂದು ಒಕ್ಕೂಟದ ಅಧ್ಯಕ್ಷ ಹಿರಿಯ ನಟ ಅಶೋಕ್ ಎಚ್ಚರಿಸಿದ್ದಾರೆ.
ಬುಧವಾರ (ಮಾ.5) ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ನಮ್ಮ ಒಕ್ಕೂಟದಲ್ಲಿ ಹದಿನಾರು ಘಟಕಗಳು ಒಂದಾಗಿ ಕಾರ್ಯನಿರ್ವಹಿಸುತ್ತಿವೆ. ಇದನ್ನು ಒಡೆಯುವ ಪ್ರಯತ್ನ ಮಾಡಲಾಗುತ್ತಿದೆ. ಇದಕ್ಕೆ ಅಧಿಕೃತ ಮುದ್ರೆ ಒದ್ದಲು ಸಿದ್ಧತೆಗಳು ನಡೆಯುತ್ತಿವೆ. ಪರ್ಯಾಯ ಒಕ್ಕೂಟಕ್ಕೆ ಮಾನ್ಯತೆ ನೀಡಿದರೆ ನಮ್ಮ ಎಲ್ಲಾ ತಂತ್ರಜ್ಞರು ಕಾರ್ಯ ಸ್ಥಗಿತಗೊಳಿಸಲಿದ್ದಾರೆ ಎಂದರು.

ಇದೇ ಮಾರ್ಚ್ 10ರಂದು ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಚ್ ಡಿ ಗಂಗರಾಜು ಅವರ ನೇತೃತ್ವದಲ್ಲಿ ಸಭೆ ನಡೆಯಲಿದೆ. ಪರ್ಯಾಯ ಒಕ್ಕೂಟ ಬೇಕೆ, ಬೇಡವೆ ಎಂಬ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ. ಈ ಹಿನ್ನೆಲೆಯಲ್ಲಿ ತಾವು ಸುದ್ದಿಗೋಷ್ಠಿ ಕರೆದಿರುವುದಾಗಿ ತಿಳಿಸಿದರು.
ಒಕ್ಕೂಟವನ್ನು ಒಡೆಯುವ ಪ್ರಯತ್ನವನ್ನು ಈಗಾಗಲೆ ಹಲವಾರು ಬಾರಿ ಮಾಡಲಾಗಿದೆ. 2002ರಲ್ಲಿ ಒಮ್ಮೆ ಅದೇ ರೀತಿಯ ಪ್ರಯತ್ನ ಮಾಡಲಾಗಿತ್ತು. 2006ರಲ್ಲಿ ತಮ್ಮನ್ನು ಒಕ್ಕೂಟದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಷಡ್ಯಂತ್ರ ರೂಪಿಸಲಾಗಿತ್ತು. ಆದರೆ ಅದರಿಂದ ಏನೂ ಪ್ರಯೋಜನವಾಗಲಿಲ್ಲ ಎಂದರು.
ಒಕ್ಕೂಟದಿಂದ ಕಾರ್ಮಿಕರಿಗೆ ಇಎಸ್ಐ, ಪಿಎಫ್ ಸೌಲಭ್ಯ ಕಲ್ಪಿಸಲಾಗಿದೆ. ಕಾರ್ಮಿಕರು, ಕಲಾವಿದರ ಏಳಿಗೆಗೆ ಒಕ್ಕೂಟ ನಿರಂತರ ಶ್ರಮಿಸುತ್ತಿದೆ. ಒಕ್ಕೂಟವನ್ನು ಒಡೆಯುವ ಪ್ರಯತ್ನವನ್ನು ರಾಜೇಶ್ ಬ್ರಹ್ಮಾವರ್ ಮಾಡುತ್ತಿದ್ದಾರೆ ಎಂದು ಆರೋಪಿಸಿದರು ಅಶೋಕ್.
ಚಲನಚಿತ್ರ ಕಾರ್ಮಿಕರು, ತಂತ್ರಜ್ಞರು ಹಾಗೂ ಕಲಾವಿದರ ಒಕ್ಕೂಟಕ್ಕೆ ಪರ್ಯಾಯ ಒಕ್ಕೂಟ ಸ್ಥಾಪಿಸಿದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಈ ಸಂದರ್ಭದಲ್ಲಿ ಅಶೋಕ್ ಎಚ್ಚರಿಸಿದರು. ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ.ಎನ್.ರವೀಂದ್ರನಾಥ್, ಖಜಾಂಚಿ ಬದ್ರಿ ನಾರಾಯಣ್ ಮುಂತಾದವರು ಉಪಸ್ಥಿತರಿದ್ದರು.


Click it and Unblock the Notifications











