ಮೂಢನಂಬಿಕೆ ಬಿತ್ತುತ್ತಿದೆ: 'ಕಾಂತಾರ' ವಿರುದ್ಧ ಟೀಕೆಗೆ ರಿಷಬ್ ಖಡಕ್ ಉತ್ತರ
'ಕಾಂತಾರ' ಸಿನಿಮಾ ಕನ್ನಡ ಮಾತ್ರವೇ ಅಲ್ಲದೆ ಬಿಡುಗಡೆ ಆಗಿರುವ ಎಲ್ಲ ಭಾಷೆಗಳಲ್ಲಿಯೂ ಅದ್ಭುತ ಪ್ರದರ್ಶನ ಕಾಣುತ್ತಿದೆ. ಬಾಲಿವುಡ್ನ ದೊಡ್ಡ ಸ್ಟಾರ್ ನಟರ ಸಿನಿಮಾಗಳನ್ನೇ ಮಕಾಡೆ ಮಲಗಿಸಿ ಸಿನಿಮಾ ಮುನ್ನುಗ್ಗುತ್ತಿದೆ.
ಇದರ ನಡುವೆ 'ಕಾಂತಾರ' ಸಿನಿಮಾದ ಬಗ್ಗೆ ಟೀಕೆಗಳು, ಕಟು ವಿಮರ್ಶೆಗಳು ಸಹ ಎದುರಾಗಿದೆ. ಸಿನಿಮಾದ ಮೂಲಕ ಮೂಢನಂಬಿಕೆ ಬಿತ್ತಲಾಗುತ್ತಿದೆ ಎಂದು ಕೆಲವರು ಆರೋಪಿಸಿದ್ದಾರೆ. ಸಿನಿಮಾದ ಹಾಡಿನ ಮೇಲೆ ಕೃತಿ ಚೌರ್ಯದ ಆರೋಪ ಹೊರಿಸಲಾಗಿದೆ. ಇನ್ನೂ ಕೆಲವು ಋಣಾತ್ಮಕ ಚರ್ಚೆಗಳಿಗೆ ಈ ಸಿನಿಮಾ ಕಾರಣವಾಗಿದೆ.
'ಕಾಂತಾರ' ಸಿನಿಮಾವು ಮೂಢನಂಬಿಕೆ ಬಿತ್ತುತ್ತಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ನಟ, ನಿರ್ದೇಶಕ ರಿಷಬ್ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದು, ''ನಾನು ಕಂಡಿದ್ದು, ನಂಬಿದ್ದನ್ನು ನಾನು ಸಿನಿಮಾದ ಮೂಲಕ ತೋರಿಸಿದ್ದೇನೆ'' ಎಂದಿದ್ದಾರೆ.

ನಾನು ನಂಬಿದ್ದನ್ನು ಸಿನಿಮಾ ಮಾಡಿದ್ದೇನೆ: ರಿಷಬ್
ಮಾಧ್ಯಮಗಳೊಟ್ಟಿಗೆ ಮಾತನಾಡಿರುವ ರಿಷಬ್ ಶೆಟ್ಟಿ, ''ನಾನು ಕಂಡಿದ್ದನ್ನು, ನಾನು ನಂಬಿದ್ದನ್ನು ಸಿನಿಮಾದ ಮೂಲಕ ಪ್ರಸ್ತುತಪಡಿಸಿದ್ದೇನೆ. ದೈವ ಎಂಬುದು ಪ್ರಕೃತಿ ಮತ್ತು ಮನುಷ್ಯನ ನಡುವಿನ ಸೇತುವೆಯಂತೆ ಎಂದು ನಾನು ನಂಬುತ್ತೇನೆ. ಪ್ರಕೃತಿಯ ಮುಂದೆ ಎಲ್ಲರೂ ಸಮಾನರು ಎಂಬುದು 'ಕಾಂತಾರ' ಸಿನಿಮಾದ ಒಟ್ಟಾರೆ ಸಂದೇಶ. ಚಿತ್ರದ ಮೂಲಕ ಸಕಾರಾತ್ಮಕತೆಯನ್ನು ಹರಡಲು ಯತ್ನಿಸಿದ್ದೇನೆ. ಯಾರ ಭಾವನೆಗಳಿಗೂ ಧಕ್ಕೆ ಮಾಡುವುದು ನಮ್ಮ ಉದ್ದೇಶವಲ್ಲ. ಯಾರಾದರೂ ಅದನ್ನು ಮೂಢನಂಬಿಕೆ ಎಂದು ಕರೆದರೆ, ಅಂಥಹವರ ಬಗ್ಗೆ ನಾನು ಏನೂ ಮಾಡಲಾರೆ'' ಎಂದಿದ್ದಾರೆ ರಿಷಬ್ ಶೆಟ್ಟಿ.

ಅವರ ಸಲಹೆ ಪಡೆದೆ ಸಿನಿಮಾ ಮಾಡಿದ್ದೇನೆ: ರಿಷಬ್
''ವರ್ಷಗಳಿಂದ ದೈವದ ಸಂಪ್ರದಾಯವನ್ನು ಆಚರಿಸಿಕೊಂಡು, ಉಳಿಸಿಕೊಂಡು ಬಂದಿರುವ ಜನರ ಭಾವನೆಗಳನ್ನು ನೋಯಿಸುವುದು ನನಗೆ ಇಷ್ಟವಿರಲಿಲ್ಲ. ಚಿತ್ರಕತೆಯ ಬಗ್ಗೆ ಅವರೊಂದಿಗೆ ಪ್ರತಿಬಾರಿ ಸಮಾಲೋಚನೆ ನಡೆಸುತ್ತಿದ್ದೆ. ದೈವಕ್ಕೆ ಸಂಬಂಧಿಸಿದ ದೃಶ್ಯಗಳ ಚಿತ್ರೀಕರಣ ಮಾಡುವಾಗ ಅವರೂ ಸ್ಥಳದಲ್ಲಿರುತ್ತಿದ್ದರು, ಅವರ ಸಲಹೆ ಪಡೆಯುತ್ತಿದ್ದೆ. ಚಿತ್ರಕ್ಕೆ ಅಥೆಂಟಿಸಿಟಿ ತರಲು ಅವರು ನನಗೆ ತುಂಬಾ ಸಹಾಯ ಮಾಡಿದ್ದಾರೆ'' ಎಂದು ಹೊಗಳಿದ್ದಾರೆ ನಟ, ನಿರ್ದೇಶಕ ರಿಷಬ್ ಶೆಟ್ಟಿ.

ಮುಂಬೈನಲ್ಲಿ ರಿಷಬ್ ಗಣೇಶ ಪೂಜೆ
ಮುಂಬೈಗೆ ತೆರಳಿ ಗಣೇಶ ಪೂಜೆಯಲ್ಲಿ ಭಾಗವಹಿಸಿರುವ ರಿಷಬ್ ಶೆಟ್ಟಿ ಅಲ್ಲಿ ಮಾಧ್ಯಮಗಳೊಟ್ಟಿಗೆ ಮಾತನಾಡಿದ್ದು, ''ಕಾಂತಾರ' ಸಿನಿಮಾ ಸ್ವತಃ ಒಂದು ದಂತಕತೆಯಾಗುತ್ತಿರುವುದು ನೋಡುತ್ತಿದ್ದೇನೆ. ನಾನು ಹಾಗೂ ನನ್ನ ತಂಡ ಒಂದು ನಗರದಿಂದ ಮತ್ತೊಂದು ನಗರಕ್ಕೆ ಹಾರಾಡುತ್ತಲೇ ಇದ್ದೇವೆ, ಆದರೆ ಜನರೇ ಅದನ್ನು ಮುಂದೆ ತೆಗೆದುಕೊಂಡು ಹೋಗುತ್ತಿದ್ದಾರೆ. ಸಣ್ಣ ಬೀಜವಾಗಿ ನಾವು ನೆಟ್ಟಿದ್ದು ಈಗ ದೊಡ್ಡ ಮರವಾಗಿದೆ. ಇದು ಪವಾಡವೇ ಹೌದು, ಸಿನಿಮಾದ ಈ ಗೆಲುವಿಗೆ ದೈವದ ಆಶೀರ್ವಾದವೂ ಕಾರಣ. ನಮ್ಮ ಸಿನಿಮಾ ಇಷ್ಟು ದೊಡ್ಡದಾಗಿ ಬೆಳೆಯುತ್ತದೆ ಎಂದು ನಾನು ನಿರೀಕ್ಷಿಸಿರಲಿಲ್ಲ'' ಎಂದಿದ್ದಾರೆ ರಿಷಬ್.

ದಾಖಲೆಗಳನ್ನು ಬರೆದಿರುವ 'ಕಾಂತಾರ'
'ಕಾಂತಾರ' ಸಿನಿಮಾ ಕೇವಲ ಒಂದು ತಿಂಗಳಲ್ಲಿ ಹಲವು ದಾಖಲೆಗಳನ್ನು ಮೀರಿ 250 ಕೋಟಿಗೂ ಹೆಚ್ಚು ಹಣ ಕಲೆಕ್ಷನ್ ಮಾಡಿದೆ. ಕೇವಲ ಕನ್ನಡದಲ್ಲಿ ಬಿಡುಗಡೆ ಆಗಿದ್ದ ಈ ಸಿನಿಮಾವನ್ನು ಆ ಬಳಿಕ ಬೇರೆ ಭಾಷೆಗಳಿಗೆ ಡಬ್ ಮಾಡಲಾಗಿದ್ದು, ಪರಭಾಷೆಗಳಲ್ಲಿಯೂ ಸಿನಿಮಾ ಸೂಪರ್ ಹಿಟ್ ಆಗಿದೆ. ಸಿನಿಮಾವನ್ನು ರಿಷಬ್ ಅವರೇ ನಿರ್ದೇಶಿಸಿದ್ದು, ನಾಯಕನಾಗಿ ನಟಿಸಿದ್ದಾರೆ ಸಹ. ಸಿನಿಮಾದಲ್ಲಿ ಸಪ್ತಮಿ ಗೌಡ ನಾಯಕಿ. ಕಿಶೋರ್, ಅಚ್ಯುತ್ ಕುಮಾರ್ ಸಹ ಪ್ರಧಾನ ಪೋಷಕ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾಕ್ಕೆ ಬಂಡವಾಳ ಹೂಡಿರುವುದು ಹೊಂಬಾಳೆ ಫಿಲಮ್ಸ್.


Click it and Unblock the Notifications











