Kantara 2 : 'ಕಾಂತಾರ 2'ಗೆ ಪಂಜುರ್ಲಿಯ ಅನುಮತಿ ಕೇಳಿದ ರಿಷಬ್: ಸಿಕ್ಕಿತಾ ದೈವದ ಅನುಮತಿ?
'ಕಾಂತಾರ' ಚಿತ್ರದ ಅದ್ಭುತ ಯಶಸ್ಸಿನ ಬಳಿಕ ಚಿತ್ರ ತಂಡ ಮತ್ತೆ ಪಂಜುರ್ಲಿ ಮೊರೆ ಹೋಗಿದೆ. ನಿರ್ಮಾಪಕ ವಿಜಯ್ ಕಿರಗಂದೂರು ಸೇರಿದಂತೆ ಇಡೀ ಚಿತ್ರರಂಗ ಮಂಗಳೂರಿನಲ್ಲಿ ಅಣ್ಣಪ್ಪ ಪಂಜುರ್ಲಿ ದೈವಕ್ಕೆ ಹರಕೆ ಕೋಲ ನೀಡಿದೆ.
ಈ ವೇಳೆ ಕಾಂತಾರಾ ತಂಡ ದೈವ ಅಣ್ಣಪ್ಪ ಪಂಜುರ್ಲಿ ಬಳಿ 'ಕಾಂತಾರ' ಚಿತ್ರ ಭಾಗ ಎರಡಕ್ಕೆ ಅನುಮತಿ ಯನ್ನು ದೈವದ ಬಳಿ ಕೇಳಿದ್ದು, ದೈವ ಹಲವು ಸಲಹೆಗಳೊಂದಿಗೆ ಚಿತ್ರ ಚಿತ್ರೀಕರಣಕ್ಕೆ ಅಸ್ತು ಅಂತಾ ಹೇಳಿದೆ.ಕದ್ರಿ ಮಂಜುನಾಥೇಶ್ವರ ದೇವಸ್ಥಾನದಲ್ಲಿ ಸೇವೆ ಸಲ್ಲಿಸುವ ಮಡಿವಾಳ ಸಮುದಾಯದ ಪ್ರಮುಖ ರ ಮನೆಯಲ್ಲಿ ನಡೆದ ಅಣ್ಣಪ್ಪ ಪಂಜುರ್ಲಿ ಕೋಲದಲ್ಲಿ ಕಾಂತಾರಾ ಚಿತ್ರತಂಡ ಭಾಗವಹಿಸಿತ್ತು.
ನಗರ ಹೊರವಲಯದ ಬಂದಲೆಯ ಮನೆಯಲ್ಲಿ ನಡೆದ ಪಂಜುರ್ಲಿ ಕೋಲದಲ್ಲಿ ಕಾಂತಾರಾ ಚಿತ್ರತಂಡ ಭಾಗವಹಿಸಿದೆ. ಕದ್ರಿ ಮಂಜುನಾಥೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಕೃಷ್ಣ ಅಡಿಗ ಅವರ ಸಮ್ಮುಖದಲ್ಲಿ ನಡೆದ ಅಣ್ಣಪ್ಪ ಪಂಜುರ್ಲಿ ಕೋಲದಲ್ಲಿ ದೈವದ ಬಳಿ ರಿಷಬ್ ಶೆಟ್ಟಿ ದೈವದ ಬಳಿ 'ಕಾಂತಾರ' ಭಾಗ ಎರಡು ಚಿತ್ರಕ್ಕೆ ಅನುಮತಿ ಕೇಳಲಾಗಿದೆ.
ಅಂತೆಯೇ ದೈವವು, 'ಕಾಂತಾರ 2' ಸಿನಿಮಾ ನಿರ್ಮಾಣಕ್ಕೆ ಅನುಮತಿಯನ್ನು ನೀಡಿದೆ. ಅದರೆ ಕೆಲವು ಸಲಹೆಗಳನ್ನು, ಎಚ್ಚರಿಕೆಗಳನ್ನು ಸಹ ದೈವ ರಿಷಬ್ ಶೆಟ್ಟಿಗೆ ನೀಡಿದೆ ಎನ್ನಲಾಗಿದೆ.

ಅನುಮತಿ ನೀಡಿತೇ ಅಪ್ಪಣ್ಣ ಪಂಜುರ್ಲಿ?
ಹರಕೆ ಕಾರ್ಯಕ್ರಮದಲ್ಲಿ ಚಿತ್ರತಂಡದ ಬಹುತೇಕ ಕಲಾವಿದರು ಭಾಗವಹಿಸಿದ್ದು, 'ಕಾಂತಾರ' ಭಾಗ ಎರಡರಲ್ಲೂ ಅದೇ ಕಲಾವಿದರು ಮುಂದುವರಿಯುವ ಸಾಧ್ಯತೆಗಳಿವೆ. ಕಾಂತಾರದಲ್ಲಿ ನಟಿಸಿದ್ದ ಕಲಾವಿದರಿಗೆ ತಲೆಕೂದಲು ಬೆಳೆಸಿಕೊಳ್ಳಲು ರಿಷಬ್ ಸೂಚನೆ ನೀಡಿದ್ದಾರೆ ಅಂತಾ ಹೇಳಲಾಗಿದೆ. ಮುಂದಿನ ಮಳೆಗಾಲದ ಅವಧಿಯಲ್ಲಿ ಕಾಂತಾರ ಭಾಗ ಎರಡು ಚಿತ್ರದ ಚಿತ್ರೀಕರಣ ಪ್ರಾರಂಭವಾಗುವ ಸಾಧ್ಯತೆಗಳಿವೆ.

ವಿಜಯ್ ಕಿರಗಂದೂರ್, ರಿಷಬ್, ಪ್ರಮೋದ್ ಹಲವರು ಭಾಗಿ
ಹೊಂಬಾಳೆ ಪ್ರೊಡಕ್ಷನ್ನ ವಿಜಯ್ ಕಿರಂಗದೂರು, ನಟ ರಿಷಬ್ ಶೆಟ್ಟಿ, ನಟಿ ಸಪ್ತಮಿ ಗೌಡ, ಪ್ರಮೋದ್ ಶೆಟ್ಟಿ, ದೀಪಕ್ ರೈ ಪಾಣಾಜೆ, ನವೀಬ್ ಬೋಂದೆಲ್, ರಿಷಬ್ ಪತ್ನಿ ಪ್ರಗತಿ ಶೆಟ್ಟಿ ಸೇರಿದಂತೆ ರಿಷಬ್ ಕುಟುಂಬಸ್ಥರು, 'ಕಾಂತಾರ' ಚಿತ್ರ ತಂಡದ ಕಲಾವಿದರು ಅಣ್ಣಪ್ಪ ಪಂಜುರ್ಲಿ ಕೋಲದಲ್ಲಿ ಭಾಗವಹಿಸಿದ್ದಾರೆ. ಈ ಕೋಲ ಆಚರಣೆ ನಡೆಯುವ ವೇಳೆ ಚಿತ್ರೀಕರಣವನ್ನು ಸಂಪೂರ್ಣ ನಿಷೇಧ ಮಾಡಲಾಗಿತ್ತು. ಭಕ್ತಾದಿಗಳು ಮೊಬೈಲ್ನಲ್ಲಿ ವಿಡಿಯೋ ಫೋಟೋ ತೆಗೆಯಬಾರದೆಂದು ಅಲ್ಲಲ್ಲಿ ಸೂಚನಾ ಫಲಕ ಹಾಕಲಾಗಿತ್ತು.

ಮೊದಲ ಭಾಗ ನಿರ್ಮಾಣದ ವೇಳೆಯೂ ಅನುಮತಿ ಪಡೆದಿದ್ದರು
ರಿಷಬ್ ಶೆಟ್ಟಿ, 'ಕಾಂತಾರ' ಸಿನಿಮಾ ಮಾಡುವ ಮುನ್ನವೂ ಅನುಮತಿ ಕೇಳಿದ್ದರು ಎನ್ನಲಾಗಿತ್ತು. ಮಂಜುನಾಥ ಸ್ವಾಮಿ ದೇವಾಲಯದಲ್ಲಿಯೂ ಹರಕೆ ಮಾಡಿಕೊಂಡಿದ್ದರು. ಇನ್ನೂ ಕೆಲವು ದೇವಾಲಯಗಳಿಗೆ, ದೈವದ ಸ್ಥಾನಗಳಿಗೆ ಭೇಟಿ ನೀಡಿ ಆಶೀರ್ವಾದ ಪಡೆದುಕೊಂಡಿದ್ದರು. ಜೊತೆಗೆ ದೈವ ನರ್ತಕರು, ಸಮುದಾಯದ ಹಿರಿಕರನ್ನು ಸಂಪರ್ಕಿಸಿ ಅವರಿಂದಲೂ ಅನುಮತಿ, ಸಲಹೆಗಳನ್ನು ಪಡೆದು, ಸ್ವತಃ ಅವರ ಸಮ್ಮುಖದಲ್ಲಿಯೇ ದೈವದ ದೃಶ್ಯಗಳನ್ನು ಅವರ ಮುಂದಾಳತ್ವದಲ್ಲಿಯೇ ಚಿತ್ರೀಕರಣ ಮಾಡಲಾಗಿತ್ತು.

ಶಿಸ್ತು, ಸಂಪ್ರದಾಯ ಪಾಲಿಸಿದ್ದ ರಿಷಬ್ ಶೆಟ್ಟಿ
ದೈವದ ದೃಶ್ಯಗಳನ್ನು ಚಿತ್ರೀಕರಿಸುವ ವೇಳೆ ಶಿಸ್ತು, ಸಂಪ್ರದಾಯಕ್ಕೆ ಅತಿಯಾದ ಮನ್ನಣೆಯನ್ನು ರಿಷಬ್ ಶೆಟ್ಟಿ ನೀಡಿದ್ದರು. ಸೆಟ್ನಲ್ಲಿ ಚಪ್ಪಲಿ ಧರಿಸಲು ಸಹ ಅನುಮತಿ ನಿರಾಕರಿಸಲಾಗಿತ್ತು. ಮಾಂಸಾಹಾರಕ್ಕೆ ನಿಷೇಧ ಹೇರಲಾಗಿತ್ತು. ಪ್ರತಿದಿನವೂ ಪೂಜೆಗಳನ್ನು ನಡೆಸಲಾಗುತ್ತಿತ್ತು. ಒಟ್ಟಾರೆಯಾಗಿ ದೈವಕ್ಕೆ, ದೈವದ ಆರಾಧಕರಿಗೆ, ದೈವ ನರ್ತಕರ ನಂಬಿಕೆಗಳಿಗೆ ತುಸುವೂ ಘಾಸಿಯಾಗದಂತೆ ಸಿನಿಮಾವನ್ನು ಚಿತ್ರೀಕರಣ ಮಾಡಲಾಗಿತ್ತು. ಈ ಬಗ್ಗೆ ರಿಷಬ್ ಶೆಟ್ಟಿ ಹಲವು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದರು. ಇದೀಗ ದೈವವು ಎರಡನೇ ಭಾಗದ ಚಿತ್ರೀಕರಣಕ್ಕೆ ಅನುಮತಿ ನೀಡಿ, ಆಶೀರ್ವಾದ ಮಾಡಿದ್ದು, ಸಿನಿಮಾವನ್ನು ಶೀಘ್ರವೇ ರಿಷಬ್ ಶುರು ಮಾಡಲಿದ್ದಾರೆ.


Click it and Unblock the Notifications











