Don't Miss!
- News ಲೋಕಸಭಾ ಚುನಾವಣೆ: ಕಾಂಗ್ರೆಸ್ ಸರ್ಕಾರದ ವಿರುದ್ಧ ಎಚ್ಡಿಕೆ ಮೇಕೆದಾಟು ಅಸ್ತ್ರ
- Sports DC vs GT IPL 2024: ಅಕ್ಷರ್, ಪಂತ್ ಭರ್ಜರಿ ಬ್ಯಾಟಿಂಗ್; ಗುಜರಾತ್ಗೆ ಸವಾಲಿನ ಗುರಿ ನೀಡಿದ ಡೆಲ್ಲಿ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಕಾಂತಾರ' ನೋಡಿ ಶಭಾಷ್ ಎಂದ ರಜನೀಕಾಂತ್ಗೆ ರಿಷಬ್ ಶೆಟ್ಟಿ ಪ್ರತಿಕ್ರಿಯೆ
ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ಕನ್ನಡದ 'ಕಾಂತಾರ' ಸಿನಿಮಾ ದೊಡ್ಡ ಹಿಟ್ ಆಗಿದೆ. ಕರ್ನಾಟಕ ಸೇರಿದಂತೆ ಇತರೆ ರಾಜ್ಯಗಳಲ್ಲಿಯೂ ಸಿನಿಮಾವನ್ನು ಮುಗಿಬಿದ್ದು ನೋಡುತ್ತಿದ್ದಾರೆ ಪ್ರೇಕ್ಷಕರು.
ಸಾಮಾನ್ಯ ಪ್ರೇಕ್ಷಕರು ಮಾತ್ರವೇ ಅಲ್ಲದೆ, ವಿವಿಧ ಚಿತ್ರರಂಗದ ಸ್ಟಾರ್ ನಟ, ನಟಿಯರು, ತಂತ್ರಜ್ಞರು ಸಹ ಸಿನಿಮಾವನ್ನು ವೀಕ್ಷಿಸಿ ಸಿನಿಮಾದ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ದೊಡ್ಡ ದೊಡ್ಡ ಚಿತ್ರನಟರನ್ನು ಸಹ ಚಿತ್ರಮಂದಿರಕ್ಕೆ ಸೆಳೆಯುತ್ತಿದೆ 'ಕಾಂತಾರ' ಸಿನಿಮಾ.
ಇದೀಗ ಭಾರತದ ಸೂಪರ್ ಸ್ಟಾರ್ ನಟ ರಜನೀಕಾಂತ್ 'ಕಾಂತಾರ' ಸಿನಿಮಾವನ್ನು ವೀಕ್ಷಿಸಿದ್ದು, ಅಪಾರವಾಗಿ ಮೆಚ್ಚಿಕೊಂಡಿದ್ದಾರೆ. ಸಿನಿಮಾದ ಬಗ್ಗೆ ಟ್ವೀಟ್ ಮಾಡಿ, ರಿಷಬ್ ಶೆಟ್ಟಿಯವರನ್ನು, ಚಿತ್ರತಂಡವನ್ನು ಹೊಗಳಿದ್ದಾರೆ ಮಾತ್ರವಲ್ಲದೆ, 'ಕಾಂತಾರ' ಸಿನಿಮಾ ಭಾರತದ ಮಾಸ್ಟರ್ ಪೀಸ್ ಎಂದಿದ್ದಾರೆ.
ಸಿನಿಮಾ ಬಗ್ಗೆ ಟ್ವೀಟ್ ಮಾಡಿರುವ ರಜನೀಕಾಂತ್, ''ನಾವು ತಿಳಿದುಕೊಂಡಿರುವುದಕ್ಕಿಂತಲೂ ತಿಳಿದುಕೊಂಡಿರದೇ ಇರುವುದೇ ಹೆಚ್ಚು ಎಂಬುದನ್ನು 'ಕಾಂತಾರ' ಸಿನಿಮಾ ಮೂಲಕ ಅದ್ಭುತವಾಗಿ ಹೇಳಲಾಗಿದೆ. ರಿಷಬ್ ಶೆಟ್ಟಿ ಅಂತೂ ರೋಮಾಂಚನಗೊಳಿಸಿಬಿಟ್ಟಿದ್ದಾರೆ. ರಿಷಬ್, ನಟನಾಗಿ, ಬರಹಗಾರನಾಗಿ, ನಿರ್ದೇಶಕನಾಗಿ ಅದ್ಭುತ ಕಾರ್ಯ ಮಾಡಿರುವ ನಿಮಗೆ ನನ್ನ ಗೌರವಗಳು. ಭಾರತದ ಮಾಸ್ಟರ್ ಪೀಸ್ ಸಿನಿಮಾ 'ಕಾಂತಾರ'ದ ಎಲ್ಲ ನಟರು, ತಂತ್ರಜ್ಞರಿಗೆ ನನ್ನ ಅಭಿನಂದನೆಗಳು'' ಎಂದಿದ್ದಾರೆ.
ಪ್ರತಿಕ್ರಿಯೆ ನೀಡಿರುವ ರಿಷಬ್ ಶೆಟ್ಟಿ
ರಜನೀಕಾಂತ್ರ ಟ್ವೀಟ್ಗೆ ಖುಷಿಯಿಂದ ಪ್ರತಿಕ್ರಿಯೆ ನೀಡಿರುವ ರಿಷಬ್ ಶೆಟ್ಟಿ, ''ಪ್ರೀತಿಯ ರಜನೀಕಾಂತ್, ನೀವು ಭಾರತದ ಅತಿದೊಡ್ಡ ಸೂಪರ್ಸ್ಟಾರ್, ನಾನು ಬಾಲ್ಯದಿಂದಲೂ ನಿಮ್ಮ ದೊಡ್ಡ ಅಭಿಮಾನಿ. ನೀವು ಮೆಚ್ಚುಗೆ ಸೂಚಿಸಿರುವುದು ನನ್ನ ಕನಸು ನನಸಾದಂತಾಗಿದೆ. ಇನ್ನೂ ಹೆಚ್ಚು ಸ್ಥಳೀಯ ಕಥೆಗಳನ್ನು ಸಿನಿಮಾ ಮಾಡಲು ನೀವು ನನ್ನನ್ನು ಪ್ರೇರೇಪಿಸಿದ್ದೀರಿ ನಿಮಗೆ ಧನ್ಯವಾದಗಳು.
ಹೊಸಬರನ್ನು ಪ್ರೇರೇಪಿಸುವ ಗುಣ
ಸೂಪರ್ ಸ್ಟಾರ್ ರಜನೀಕಾಂತ್ ಈಗಲೂ ಹೊಸ ಚಿತ್ರಗಳನ್ನು, ಒಳ್ಳೆಯ ಚಿತ್ರಗಳನ್ನು ನೋಡುವ ಆಸಕ್ತಿ ಇಟ್ಟುಕೊಂಡಿದ್ದಾರೆ. ಅದು ಮಾತ್ರವೇ ಅಲ್ಲದೆ, ತಮಗೆ ಸಿನಿಮಾ ಇಷ್ಟವಾದರೆ ಟ್ವೀಟ್ ಮಾಡುವ ಮೂಲಕ ಸಿನಿಮಾಕ್ಕೆ ಬೆಂಬಲ ನೀಡುತ್ತಾರೆ, ತಮ್ಮ ಖುಷಿಯನ್ನು ಹಂಚಿಕೊಳ್ಳುತ್ತಾರೆ ಹಾಗೂ ಸಿನಿಮಾದ ನಿರ್ದೇಶಕ, ನಟರಿಗೆ ಕರೆ ಮಾಡಿ ಅಭಿನಂದನೆಗಳನ್ನು ಸಲ್ಲಿಸುವ ಪರಿಪಾಠವನ್ನೂ ಇಟ್ಟುಕೊಂಡಿದ್ದಾರೆ. ಇದೀಗ 'ಕಾಂತಾರ' ಸಿನಿಮಾವನ್ನು ವೀಕ್ಷಿಸಿ ಬಹಳ ಇಷ್ಟಪಟ್ಟು ಸಿನಿಮಾದ ಬಗ್ಗೆ ಟ್ವೀಟ್ ಮಾಡಿದ್ದಾರೆ.
ಅಧ್ಯಾತ್ಮದಲ್ಲಿ ಆಸಕ್ತಿಯುಳ್ಳ ರಜನೀಕಾಂತ್
ರಜನೀಕಾಂತ್ ಸ್ವತಃ ಅಧ್ಯಾತ್ಮ, ದೇವರು, ದೈವಗಳಲ್ಲಿ ವಿಶ್ವಾಸವುಳ್ಳವರು. ಅತಿಮಾನುಷ ಶಕ್ತಿಯ ಕತೆಯುಳ್ಳ 'ಬಾಬಾ' ಸಿನಿಮಾವನ್ನು ರಜನೀಕಾಂತ್ ನಿರ್ಮಿಸಿ, ಚಿತ್ರಕತೆ, ಕತೆ ಸಹ ಬರೆದಿದ್ದರು. ತಾವು ಅಪಾರವಾಗಿ ನಂಬುವ ದೈವದ ಬಗ್ಗೆ ಮಾಡಿದ್ದ ಆ ಸಿನಿಮಾ ನೆಲಕಚ್ಚಿತ್ತು. ಆ ಸಿನಿಮಾದಿಂದ ನಷ್ಟ ಹೊಂದಿದ ವಿತರಕರ ಹಣವನ್ನು ರಜನೀಕಾಂತ್ ಹಿಂದಿರುಗಿಸಿ ಮಾದರಿಯಾಗಿದ್ದರು. ಅಧ್ಯಾತ್ಮದಲ್ಲಿ ಆಸಕ್ತಿಯುಳ್ಳ ರಜನೀಕಾಂತ್ಗೆ 'ಕಾಂತಾರ' ಸಿನಿಮಾ ಬಹಳ ಇಷ್ಟವಾಗಿರುವುದು ಸಹಜವೇ ಆಗಿದೆ.
ಹಲವು ಸ್ಟಾರ್ ನಟರು ಮೆಚ್ಚಿರುವ ಸಿನಿಮಾ
'ಕಾಂತಾರ' ಸಿನಿಮಾವನ್ನು ಈವರೆಗೆ ಹಲವು ಸ್ಟಾರ್ ನಟರು ನೋಡಿ ಮೆಚ್ಚಿದ್ದಾರೆ. ನಟ ಪ್ರಭಾಸ್, ಎರಡು ಬಾರಿ 'ಕಾಂತಾರ' ಸಿನಿಮಾ ನೋಡಿದ್ದಾಗಿ ಹೇಳಿಕೊಂಡಿದ್ದಾರೆ. ಕಂಗನಾ ರನೌತ್ ಸಹ ಸಿನಿಮಾ ನೋಡಿ ವಿಡಿಯೋ ಮಾಡಿ ರಿಷಬ್ ಅವರನ್ನು ಬಹುವಾಗಿ ಅಭಿನಂದಿಸಿದ್ದಾರೆ. ಕಿಚ್ಚ ಸುದೀಪ್ ಸಹ ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ. 'ದಿ ಕಾಶ್ಮೀರ್ ಫೈಲ್ಸ್' ನಿರ್ದೇಶಕ ವಿವೇಕ್ ಅಗ್ನಿಹೋತ್ರಿ, ಇನ್ನೂ ಹಲವರು ಮೆಚ್ಚುಗೆ ಸೂಚಿಸಿದ್ದಾರೆ.