7 ಕೋಟಿ ಎಂದು ಶುರುವಾದ 'ಕಾಂತಾರ' ಚಿತ್ರಕ್ಕೆ ಖರ್ಚಾಗಿದ್ದು ದೊಡ್ಡ ಮೊತ್ತ; ರಿಷಬ್ ತಂದೆ ಕೊಟ್ರು ಲೆಕ್ಕ
ಕಾಂತಾರ ಸದ್ಯ ಇಡೀ ದೇಶದ ಗಮನವನ್ನು ತನ್ನತ್ತ ಸೆಳೆದಿರುವಂತ ಚಿತ್ರ. ಕನ್ನಡದಲ್ಲಿ ಬಿಡುಗಡೆಗೊಂಡು ಅಬ್ಬರಿಸಿದ ಕಾಂತಾರ ಚಿತ್ರ ಕೆಲವೇ ದಿನಗಳಲ್ಲಿ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗೂ ಡಬ್ ಆಯಿತು. ಸದ್ಯ ಮೂರನೇ ವಾರದ ಪ್ರದರ್ಶನ ಕಾಣುತ್ತಿರುವ ಕಾಂತಾರ ನೂರು ಕೋಟಿ ಕ್ಲಬ್ ಸೇರಿದ್ದು ಇನ್ನೂರು ಕೋಟಿಯತ್ತ ಹೆಜ್ಜೆ ಇಟ್ಟಿದೆ.
ಚಿತ್ರಕ್ಕೆ ಇನ್ನೂ ಸಹ ಯಾವ ರೀತಿಯ ಪ್ರತಿಕ್ರಿಯೆ ಇದೆ ಎಂದರೆ ವಾರದ ದಿನಗಳಲ್ಲಿಯೂ ಸಹ ಚಿತ್ರ ಹಲವು ಕಡೆ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ಅದರಲ್ಲಿಯೂ ತೆಲುಗು ಸಿನಿ ಪ್ರೇಕ್ಷಕರು ಚಿತ್ರವನ್ನು ದೊಡ್ಡ ಮಟ್ಟದಲ್ಲಿ ಒಪ್ಪಿಕೊಂಡಿದ್ದು ಇದು ಕನ್ನಡ ಚಿತ್ರರಂಗದಿಂದ ಬಂದಿರುವ ಮತ್ತೊಂದು ಮಾಸ್ಟರ್ಪೀಸ್ ಎಂಬ ಮಾತುಗಳು ಕೇಳಿಬರುತ್ತಿವೆ.
ಹೀಗೆ ಕೋಟಿ ಕೋಟಿ ಬಾಚುತ್ತಿರುವ ಕಾಂತಾರ ಚಿತ್ರದ ಬಜೆಟ್ ಎಂಬ ವಿಚಾರವನ್ನು ಮಾತ್ರ ಹೊಂಬಾಳೆ ಫಿಲ್ಮ್ಸ್ ಬಿಟ್ಟುಕೊಟ್ಟಿಲ್ಲ, ಈ ಚಿತ್ರ ಮಾತ್ರವಲ್ಲ ಹೊಂಬಾಳೆ ಫಿಲ್ಮ್ಸ್ ಇಲ್ಲಿಯವರೆಗೂ ನಿರ್ಮಿಸಿರುವ ಯಾವ ಚಿತ್ರದ ಬಜೆಟ್ ಬಗ್ಗೆ ಕೂಡ ಮಾಹಿತಿಯನ್ನು ಹಂಚಿಕೊಂಡಿಲ್ಲ. ಆದರೆ ಚಿತ್ರಕ್ಕೆ ಬೇಕಾದ ಹಣವನ್ನು ಹೂಡುವುದರಲ್ಲಿ ಹೊಂಬಾಳೆ ಫಿಲ್ಮ್ಸ್ ಇದುವರೆಗೂ ರಾಜಿಯಾಗಿಲ್ಲ. ಹೊಂಬಾಳೆ ಫಿಲ್ಮ್ಸ್ ಕಾಂತಾರ ಚಿತ್ರಕ್ಕೂ ಸಹ ಇದೇ ಬೆಂಬಲವನ್ನು ನೀಡಿದ್ದು ಏಳು ಕೋಟಿ ಬಜೆಟ್ ಎಂದು ಆರಂಭವಾದ ಚಿತ್ರಕ್ಕೆ ನಿಖರವಾಗಿ ಎಷ್ಟು ಖರ್ಚಾಯಿತು ಎಂಬ ವಿಷಯವನ್ನು ಇದೀಗ ರಿಷಬ್ ಶೆಟ್ಟಿ ತಂದೆ ಭಾಸ್ಕರ್ ಶೆಟ್ಟಿ ಬಿಚ್ಚಿಟ್ಟಿದ್ದಾರೆ.

ಕಾಂತಾರ ಚಿತ್ರದ ಬಜೆಟ್ ರಿವೀಲ್
ಕಾಂತಾರ ಚಿತ್ರದ ಬಜೆಟ್ ಕುರಿತು ಮುಕ್ತ ಮನಸ್ಸಿನಿಂದ ಮಾತನಾಡಿರುವ ಭಾಸ್ಕರ್ ಶೆಟ್ಟಿ 7 ಕೋಟಿ ಖರ್ಚಿನಲ್ಲಿ ಮುಗಿಯಬೇಕಿದ್ದ ಚಿತ್ರಕ್ಕೆ 16 ಕೋಟಿ ಖರ್ಚಾಯಿತು ಎಂದರು. ಇನ್ನು ಬಜೆಟ್ ಇಷ್ಟು ಬೃಹತ್ ವ್ಯತ್ಯಾಸವಾಗಲು ಕಾರಣವನ್ನೂ ಸಹ ಭಾಸ್ಕರ್ ಶೆಟ್ಟಿ ಬಿಚ್ಚಿಟ್ಟಿದ್ದಾರೆ. ಚಿತ್ರದ ಚಿತ್ರೀಕರಣಕ್ಕಾಗಿ ಹಾಕಿದ್ದ ಮಣ್ಣೇ ಕರಗಿ ಹೋಗಿತ್ತು, ನಿರ್ಮಿಸಿದ್ದ ರಸ್ತೆಯೇ ನಾಪತ್ತೆಯಾಗಿ ಕೆಸರಾಗಿತ್ತು, ಅದಕ್ಕೆ ಜಲ್ಲಿ ಹಾಕಬೇಕಿತ್ತು, ಅಷ್ಟೇ ಅಲ್ಲದೇ ಆರು ತಿಂಗಳ ಕಾಲ ಮಳೆ ಸುರಿದು ಚಿತ್ರೀಕರಣಕ್ಕೆ ಅಡ್ಡಿಯಾಗಿತ್ತು, ಚಿತ್ರೀಕರಣಕ್ಕಾಗಿ ಬಳಸಿದ್ದ ಸಾಮಗ್ರಿಗಳು ಕಾಣೆಯಾಗಿದ್ದವು ಈ ಎಲ್ಲಾ ಕಾರಣಗಳಿಂದ ಚಿತ್ರದ ಬಜೆಟ್ ಏರಿಕೆಯಾಗಿತ್ತು ಎಂದು ಭಾಸ್ಕರ್ ಶೆಟ್ಟಿ ನ್ಯೂಸ್ ಫಸ್ಟ್ ಸುದ್ದಿ ವಾಹಿನಿ ಜತೆ ಮಾತನಾಡಿದಾಗ ಹೇಳಿಕೆ ನೀಡಿದರು.

ಒಳ್ಳೆಯ ಕಲೆಕ್ಷನ್ ಮಾಡಿದೆ
ಇನ್ನು ಊಹಿಸಿದ್ದಕ್ಕಿಂತ ಹೆಚ್ಚು ಖರ್ಚು ಮಾಡಿಸಿದ ಕಾಂತಾರ ಚಿತ್ರ ನಿರೀಕ್ಷೆಗೂ ಮೀರಿದ ಕಲೆಕ್ಷನ್ ಮಾಡಿದೆ ಎಂದೂ ಸಹ ಭಾಸ್ಕರ್ ಶೆಟ್ಟಿ ಹೇಳಿಕೊಂಡಿದ್ದಾರೆ. ಚಿತ್ರ ಚೆನ್ನಾಗಿ ಓಡುತ್ತೆ, ಹಾಕಿದ ಹಣ ವಾಪಸ್ ಬರುತ್ತೆ ಎಂದು ನಾನು ಹೇಳಿದ್ದೆ, ಆದರೆ ಈ ಮಟ್ಟಕ್ಕೆ ದೇಶವ್ಯಾಪಿ ಸದ್ದು ಮಾಡುತ್ತೆ ಎಂದುಕೊಂಡಿರಲಿಲ್ಲ ಎಂದು ಭಾಸ್ಕರ್ ಶೆಟ್ಟಿ ಹೇಳಿಕೆ ನೀಡಿದ್ದಾರೆ. ಕರ್ನಾಟಕ ಮಾತ್ರವಲ್ಲದೇ ಮಹಾರಾಷ್ಟ, ರಾಜಸ್ಥಾನ್ ರಾಜ್ಯಗಳಲ್ಲಿಯೂ ಚಿತ್ರ ಒಳ್ಳೆಯ ಪ್ರದರ್ಶನ ಕಾಣುತ್ತಿರುವುದರ ಬಗ್ಗೆ ಭಾಸ್ಕರ್ ಶೆಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಎಂಬಿಎ ಮಾಡೋಕೆ ಎರಡು ಬಾರಿ ಫೀಸ್ ಕಟ್ಟಿದ್ದೆ
ಇನ್ನು ರಿಷಬ್ ಶೆಟ್ಟಿ ಬಾಲ್ಯ ಹಾಗೂ ವಿದ್ಯಾಭ್ಯಾಸದ ಕುರಿತು ಮಾತನಾಡಿದ ಭಾಸ್ಕರ್ ಶೆಟ್ಟಿ ಆತನಿಗೆ ಎಂಬಿಎ ಮಾಡೋಕೆ ಎರಡು ಬಾರಿ ಶುಲ್ಕ ಕಟ್ಟಿದ್ದೆ, ಆದರೆ ಆತ ಎರಡೂ ಬಾರಿಯೂ ಎಂಬಿಎ ಪೂರ್ತಿ ಮಾಡಲೇ ಇಲ್ಲ ಎಂದು ನಕ್ಕರು ಹಾಗೂ ಆತನ ಹೆಸರು ರಿಷಬ್ ಅಲ್ಲ ಪ್ರಶಾಂತ್ ಎಂಬ ವಿಚಾರವನ್ನೂ ಸಹ ಭಾಸ್ಕರ್ ಶೆಟ್ಟಿ ತಿಳಿಸಿದರು. ಸಿನಿಮಾ ಪ್ರವೇಶಿಸಿದ ನಂತರ ಆತನ ಹೆಸರನ್ನು ಸಂಖ್ಯಾಶಾಸ್ತ್ರದ ಪ್ರಕಾರ ಬದಲಿಸಲಾಯಿತು ಎಂದು ಇದೇ ವೇಳೆ ತಿಳಿಸಿದರು.


Click it and Unblock the Notifications











