ರಿಷಿಕಾ ಸಿಂಗ್ ಭವಿಷ್ಯ ಬರೆಯಲಿರುವ 'ತುಂತುರು'

ಜನಪ್ರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಮಗಳು ರಿಷಿಕಾ ಸಿಂಗ್ ನಾಯಕಿಯಾಗಿ ಅಭಿನಯಿಸಿದ್ದ 'ಯಾರಾದ್ರೆ ನಂಗೇನು' ಚಿತ್ರದ ಬಗ್ಗೆ ಮುಹೂರ್ತದ ನಂತರ ಹೆಚ್ಚು ಸುದ್ದಿಯೇ ಇಲ್ಲ. ಬೆತ್ತಲೆ ಫೋಟೋ ಜಾಹೀರಾತಿನ ಮೂಲಕ ಸಾಕಷ್ಟು ಗಲಾಟೆ ನಡೆದ ನಂತರ ರಿಷಿಕಾ ಬಗ್ಗೆ ಕರ್ನಾಟಕದ ತುಂಬಾ ಚರ್ಚೆಯಾಗಿತ್ತು. ಆದರೆ ನಂತರ ಚಿತ್ರ ಮುಂದುವರಿದ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಹೀಗಾಗಿ ಸದ್ಯಕ್ಕಂತೂ ಆ ಚಿತ್ರ ತೆರೆಗೆ ಬರುವ ನಿರೀಕ್ಷೆಯಿಲ್ಲ.
ಆ ಚಿತ್ರದ ಬಗ್ಗೆ 'ರಗಳೆ' ಮಾಡಿಕೊಂಡ ರಿಷಿಕಾ ಬಗ್ಗೆ ಸಾಕಷ್ಟು ಕುತೂಹಲ ಸಿನಿಪ್ರೇಕ್ಷಕರಲ್ಲಿ ಇದೆ. ಈಗಂತೂ ಅದೇ ರಗಳೆಯನ್ನೇ 'ಎನ್ ಕ್ಯಾಷ್' ಮಾಡಿಕೊಂಡವರಂತೆ ತಾವು ಕಿರುತೆರೆಯಲ್ಲಿ ನಡೆಸಿಕೊಡುತ್ತಿರುವ ಕಾರ್ಯಕ್ರಮಕ್ಕೆ 'ರಗಳೆ ವಿತ್ ರಿಷಿಕಾ' ಎಂದೇ ಟೈಟಲ್ ಇಟ್ಟು ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ ನಟಿ ರಿಷಿಕಾ ಸಿಂಗ್. ಈ ಕಾರ್ಯಕ್ರಮ ತಕ್ಕಮಟ್ಟಿಗೆ ಯಶಸ್ವಿಯಾದ ಸುದ್ದಿ ಬರುತ್ತಿದ್ದಂತೆ ಇತ್ತ ರಿಷಿಕಾ ನಟನೆಯ 'ತುಂತುರು' ತೆರೆಗೆ ಬರಲು ಸಿದ್ಧವಾಗಿದೆ.
ತಿಬ್ಬಾದೇವಿ ಎಂಟರ್ ಪ್ರೈಸಸ್ ಲಾಂಛನದಲ್ಲಿ ಸೋಮಶೇಖರ್ ಅವರು ನಿರ್ಮಿಸಿರುವ 'ತುಂತುರು' ಈ ಚಿತ್ರಕ್ಕೆ ಬೆಂಗಳೂರು, ದೇವನಹಳ್ಳಿ, ಸಕಲೇಶಪುರ ಮುಂತಾದ ಕಡೆ ಚಿತ್ರೀಕರಣ ನಡೆದಿದೆ. ರಮೇಶ್ ನಾಯಕತ್ವದ ಈ ಚಿತ್ರದಲ್ಲಿ ರಿಷಿಕಾ ಸಿಂಗ್, ಅನುಪ್ರಭಾಕರ್, ಸಾಧುಕೋಕಿಲಾ, ಸೋಮು, ಅನಿಲ್ ಗೌಡ, ನವೀನ್ ಮುಂತಾದವರು ನಟಿಸಿದ್ದಾರೆ. ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ ಮಹೇಶ್.
ಚಿತ್ರಕ್ಕೆ ಶ್ರೀಧರ್ ವಿ ಸಂಭ್ರಮ್ ಸಂಗೀತ ನೀಡಿದ್ದು ನಾಗೇಶ್ ಆಚಾರ್ಯ ಛಾಯಾಗ್ರಹಣ, ಗಣೇಶ್ ನೃತ್ಯ ನಿರ್ದೇಶನ, ರೇವಣ್ಣ ಕಲಾ ನಿರ್ದೇಶನ, ರವಿವರ್ಮ ಸಾಹಸ, ಗಂಗು ಅವರ ನಿರ್ಮಾಣ ನಿರ್ವಹಣೆಯಿದೆ. ಈ 'ತುಂತುರು' ಚಿತ್ರದ ಮೂಲಕ ರಿಷಿಕಾ ಸಿಂಗ್ ಹಣೆಬರಹ ನಿರ್ಧಾರವಾಗಲಿದೆ ಎಂಬುದು ಗಾಂಧಿನಗರದಲ್ಲಿ ಹಲವರ ಅಭಿಪ್ರಾಯ. ಕಾರಣ ಕನ್ನಡ ಚಿತ್ರರಂಗದಲ್ಲೇ ಮೊದಲಬಾರಿಗೆ ಇಡೀ ಚಿತ್ರ ಮಳೆಯಲ್ಲೇ ಚಿತ್ರೀಕರಣಗೊಂಡಿದೆ. ಚಿತ್ರದ ಬಗ್ಗೆ ಭಾರಿ ನಿರೀಕ್ಷೆಯಿದೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications











