'ರಾಬರ್ಟ್' ನಿರ್ಮಾಪಕನಿಂದ ರಾಜಕೀಯ ಮುಖಂಡರ ಭೇಟಿ: ಉಮಾಪತಿ ಲೆಕ್ಕಾಚಾರದ ಬಗ್ಗೆ ಗುಸುಗುಸು!
ನಿರ್ಮಾಪಕ ಉಮಾಪತಿ ಸ್ಯಾಂಡಲ್ವುಡ್ನಲ್ಲಿ ಕಡಿಮೆ ಸಮಯದಲ್ಲಿ ಸಿಕ್ಕಾಪಟ್ಟೆ ಹೆಸರು ಮಾಡಿದ್ದಾರೆ. ಉಮಾಪತಿ ನಿರ್ಮಿಸಿದ್ದ 'ರಾಬರ್ಟ್' ಸಿನಿಮಾ ಬಾಕ್ಸಾಫೀಸ್ನಲ್ಲಿ ಸದ್ದು ಮಾಡಿತ್ತು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ಹೆಚ್ಚಾಗಿ ಗುರುತಿಸಿಕೊಂಡಿದ್ದ ಉಮಾಪತಿ ಹೆಸರೀಗ ರಾಜಕೀಯ ವಲಯದಲ್ಲೂ ಓಡಾಡುತ್ತಿದೆ.
ನಿರ್ಮಾಪಕ ಉಮಾಪತಿಯ ರಾಜಕೀಯ ಆಕಾಂಕ್ಷೆ ಇಂದಿನದಲ್ಲ. ಪಾಲಿಟಿಕ್ಸ್ಗೆ ಎಂಟ್ರಿ ಕೊಡಬೇಕು ಅನ್ನೋದು ಅವರ ಮಹದಾಸೆ ಅಂತ ಆಪ್ತರು ಹೇಳುತ್ತಾರೆ. ಇನ್ನೇನು ಚುನಾವಣೆ ಸಮೀಪಿಸುತ್ತಿದ್ದಂತೆ ಉಮಾಪತಿ ಆಕ್ಟಿವ್ ಆಗಿದ್ದಾರೆ.
ಸಿನಿಮಾ ನಿರ್ಮಾಣಕ್ಕಿಂತ ರಾಜಕೀಯ ಕ್ಷೇತ್ರದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಬಾರಿ ಯಾವುದಾದರೂ ಒಂದು ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸುತ್ತಾರೆ ಅನ್ನೋ ಗುಲ್ಲೆದ್ದಿದೆ. ಅಸಲಿಗೆ ರಾಜಕೀಯ ವಲಯದಲ್ಲಿ ಉಮಾಪತಿ ರಾಜಕೀಯ ಎಂಟ್ರಿಯ ಲೆಕ್ಕಾಚಾರವೇನು? ಅನ್ನೋದನ್ನು ತಿಳಿಯಲು ಮುಂದೆ ಓದಿ.

ಡಿಕೆಶಿ ಭೇಟಿ ಮಾಡಿದ ಉಮಾಪತಿ
ಕಳೆದ ಎರಡು ದಿನಗಳಿಂದ 'ರಾಬರ್ಟ್' ನಿರ್ಮಾಪಕ ಉಮಾಪತಿ ಹೆಸರು ರಾಜಕೀಯ ವಲಯದಲ್ಲಿ ಓಡಾಡುತ್ತಿದೆ. ಅದಕ್ಕೆ ಕಾರಣವೂ ಈಗಾಗಲೇ ಎರಡು ಪ್ರಮುಖ ಪಕ್ಷದ ಮುಖಂಡರನ್ನು ಉಮಾಪತಿ ಭೇಟಿ ಮಾಡಿದ್ದಾರೆ. ನಿನ್ನೆ (ಅಕ್ಟೋಬರ್ 11) ಕರ್ನಾಟಕ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಡಿ ಕೆ ಶಿವಕುಮಾರ್ರನ್ನು ಭೇಟಿ ಮಾಡಿದ್ದರು. ಇಲ್ಲಿಂದ ಉಮಾಪತಿ ರಾಜಕೀಯ ಎಂಟ್ರಿ ಕೊಡುವ ಬಗ್ಗೆ ಮತ್ತೆ ಗುಲ್ಲೆದ್ದಿದೆ. ಇವರೊಬ್ಬರನೇ ಭೇಟಿ ಮಾಡಿದ್ದರೆ ಜನರು ಕಾಂಗ್ರೆಸ್ಗೆ ಹೋದು ಅಂತ ಫಿಕ್ಸ್ ಆಗುತ್ತಿದ್ದರೋ ಏನೋ? ಆದರೆ, ಗೃಹ ಮಂತ್ರಿಯ ಭೇಟಿ ಗೊಂದಲಕ್ಕೆ ಎಡೆ ಮಾಡಿಕೊಟ್ಟಿದೆ.

ಉಮಾಪತಿ ಗೃಹಮಂತ್ರಿ ಭೇಟಿಯಾಗಿದ್ದೇಕೆ?
ನಿನ್ನೆ (ಅಕ್ಟೋಬರ್ 11) ಡಿಕೆ ಶಿವಕುಮಾರ್ರನ್ನು ಭೇಟಿ ಮಾಡಿದ್ದ ನಿರ್ಮಾಪಕ ಉಮಾಪತಿ ಇಂದು (ಅಕ್ಟೋಬರ್ 12) ಗೃಹಮಂತ್ರಿ ಆರಗ ಜ್ಞಾನೇಂದ್ರರನ್ನು ಸಂಪರ್ಕಿಸಿದ್ದಾರೆ. ಇದು ಭೇಟಿ ರಾಜಕೀಯ ವಲಯದಲ್ಲಿ ಗೊಂದಲ ಮೂಡಿಸಿದೆ. ಉಮಾಪತಿ ಯಾವ ಪಕ್ಷಕ್ಕೆ ಸೇರುತ್ತಾರೆ? ಅನ್ನೋ ಪ್ರಶ್ನೆ ಒಂದೆಡೆಯಾದರೆ, ಮುಂದೆ ಜೆಡಿಎಸ್ ಮುಖಂಡರನ್ನು ಭೇಟಿ ಮಾಡುತ್ತಾರಾ? ಅನ್ನೋ ಗೊಂದಲವೂ ಇದೆ. ಅಸಲಿಗೆ ಗೃಹ ಮಂತ್ರಿ ಆರಗ ಜ್ಞಾನೇಂದ್ರರನ್ನು ಭೇಟಿಯಾದ ಬಳಿಕ ರಾಜಕೀಯ ಆಸೆಯ ಬಗ್ಗೆ ಮುಕ್ತವಾಗಿ ಮಾತಾಡಿದ್ದಾರೆ. ಈ ಕಾರಣಕ್ಕೆ ಮುಂದಿನ ಚುನಾವಣೆಯಲ್ಲಿ ಉಮಾಪತಿ ರಾಜಕೀಯಕ್ಕೆ ಬರೋದು ಪಕ್ಕಾ ಅಂತಾಗಿದೆ.

ರಾಜಕೀಯದ ಬಗ್ಗೆ ಉಮಾಪತಿ ಹೇಳಿದ್ದೇನು?
" ನೋಡಬೇಕು, ರಾಜಕೀಯ ಅಂದರೆ ದೊಡ್ಡ ಪ್ರಮಾಣದ ಸಮುದ್ರವಿದ್ದಂತೆ. ನಾವು ಇನ್ನೂ ಚಿಕ್ಕ ಚಿಕ್ಕ ಮೀನುಗಳು. ನೋಡೋಣ, ಈಗ ಸಮುದಾಯ ಸಂಘದ ಎಲೆಕ್ಷನ್ನಲ್ಲಿ ಗೆದ್ದಿದ್ದೀನಿ. ಆಸ್ಪತ್ರೆ ಚೇರ್ಮನ್ ಆದ್ಮೇಲೆ ನನಗೊಂದು ಭರವಸೆ ಬಂದಿದೆ. ಒಂದು ಕ್ಷೇತ್ರಕ್ಕೆ ಲೀಡರ್ ಆಗುವ ಕ್ಯಾಪಸಿಟಿ ಇದೆ ಅಂತ. ದೊಡ್ಡ ದೊಡ್ಡವರು ಆಶೀರ್ವಾದ ಮಾಡಿ, ಜನ ಆಶೀರ್ವಾದ ಮಾಡಿದ್ರೆ ನೋಡೋಣ. ನನ್ನ ಹುಟ್ಟೂರು ಬೊಮ್ಮನಹಳ್ಳಿ ಕ್ಷೇತ್ರದ ಅಲ್ಲಿಂದಲೇ ನಿಲ್ಲಬೇಕು ಅಂದುಕೊಂಡಿದ್ದೇವೆ. ಯಾಕಂದ್ರೆ, ನಮ್ಮ ಸಮುದಾಯ 1 ಲಕ್ಷ 10 ಸಾವಿರ ಜನ ಒಕ್ಕಲಿಗ ಮತದಾನರಿದ್ದಾರೆ. ನಮಗೆ ಮೋಸನೂ ಆಗಬಾರದು. ಅವಕಾಶ ವಂಚಿತರೂ ಆಗಬಾರದು." ಎಂದು ಉಮಾಪತಿ ಹೇಳಿದ್ದಾರೆ.

ರಾಜಕೀಯ ಒಲವಿನಿಂದಲೇ ಸಿನಿಮಾ ಎಂಟ್ರಿ
ಅಸಲಿಗೆ ಉಮಾಪತಿ ರಾಜಕೀಯ ಎಂಟ್ರಿ ಬಗ್ಗೆ ಸ್ಪಷ್ಟ ನಿಲುವು ನೀಡಿದ್ದಾರೆ. ಆದರೆ, ಉಮಾಪತಿ ಸಿನಿಮಾರಂಗಕ್ಕೆ ಎಂಟ್ರಿ ಕೊಡುವಾಗಲೇ ಉಮಾಪತಿ ಗುರಿ ರಾಜಕೀಯದ ಮೇಲಿತ್ತು ಅನ್ನೋ ಮಾತು ಕೇಳಿ ಬಂದಿತ್ತು. ಅಲ್ಲದೆ ಕನ್ನಡದ ಸೂಪರ್ಸ್ಟಾರ್ ದರ್ಶನ್ ಜೊತೆ ಹೆಚ್ಚಾಗಿ ಗುರುತಿಸಿಕೊಂಡಿದ್ದರು ಅನ್ನೋ ಮಾತಿತ್ತು. ಆದ್ರೀಗ ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ಗೆದ್ದಿರೋ ಉಮಾಪತಿ ಯಾವ ಪಕ್ಷ ಸೇರುತ್ತಾರೆ? ಟಿಕೆಟ್ ಸಿಗದೆ ಇದ್ದರೆ ಅವರ ಮುಂದಿನ ನಡೆಯೇನು? ಅನ್ನೋದನ್ನು ಸಿನಿಮಾ ಹಾಗೂ ರಾಜಕೀಯ ವಲಯ ಎದುರು ನೋಡುತ್ತಿದೆ.


Click it and Unblock the Notifications











