'ಕುರುಕ್ಷೇತ್ರ' ಸಿನಿಮಾದಲ್ಲಿ ದರ್ಶನ್ ಜೊತೆ 'ರಾಕ್ ಲೈನ್' ನಟನೆ
'ಕುರುಕ್ಷೇತ್ರ' ಸಿನಿಮಾದ ಚಿತ್ರೀಕರಣ ಬಿರುಸಿನಿಂದ ನಡೆಯುತ್ತಿದೆ. ಈ ಚಿತ್ರಕ್ಕೆ ಎಂಟ್ರಿ ಆಗುತ್ತಿರುವ ಕಲಾವಿದರ ಸಂಖ್ಯೆ ಮುಂದುವರೆಯುತ್ತಲೇ ಇದೆ. ಸದ್ಯ 'ಕುರುಕ್ಷೇತ್ರ' ಅಡ್ಡದಲ್ಲಿ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಕಾಣಿಸಿಕೊಂಡಿದ್ದಾರೆ.
ಮುನಿರತ್ನ ನಿರ್ಮಾಣದ 'ಕುರುಕ್ಷೇತ್ರ' ಸಿನಿಮಾದಲ್ಲಿ ರಾಕ್ ಲೈನ್ ವೆಂಕಟೇಶ್ ಒಂದು ಪಾತ್ರ ಮಾಡುತ್ತಿದ್ದಾರೆ. ಚಿತ್ರದಲ್ಲಿ ಬರುವ ಶಲ್ಯನ ಪಾತ್ರವನ್ನು ರಾಕ್ ಲೈನ್ ವೆಂಕಟೇಶ್ ನಿರ್ವಹಿಸಲಿದ್ದಾರೆ. ಮಹಾಭಾರತದಲ್ಲಿ ಕರ್ಣನ ಸಾರಥಿ ಆಗಿರುವ ಶಲ್ಯನಾಗಿ ರಾಕ್ ಲೈನ್ ವೆಂಕಟೇಶ್ ಕಾಣಿಸಿಕೊಳ್ಳುತ್ತಿದ್ದಾರೆ. ಅಂದರೆ ನಟ ಅರ್ಜುನ್ ಸರ್ಜಾ ಜೊತೆ ರಾಕ್ ಲೈನ್ ವೆಂಕಟೇಶ್ ತೆರೆ ಹಂಚಿಕೊಳ್ಳಲಿದ್ದಾರೆ.

ಚಿತ್ರ ನಿರ್ಮಾಣದ ಜೊತೆಗೆ ನಟನೆಯೂ ರಾಕ್ ಲೈನ್ ವೆಂಕಟೇಶ್ ಅವರಿಗೆ ಹೊಸದಲ್ಲ. ಈ ಹಿಂದೆ ಅನೇಕ ಸಿನಿಮಾಗಳಲ್ಲಿ ಅವರು ತೆರೆ ಮೇಲೆ ಕಮಾಲ್ ಮಾಡಿದ್ದಾರೆ. ಇದೀಗ ಕನ್ನಡದ ಮಹತ್ವಾಕಾಂಕ್ಷೆಯ ಚಿತ್ರವಾದ 'ಕುರುಕ್ಷೇತ್ರ'ದಲ್ಲಿಯೂ ರಾಕ್ ಲೈನ್ ವೆಂಕಟೇಶ್ ನಟಿಸುತ್ತಿದ್ದಾರೆ.
ಅಂದಹಾಗೆ, ಚುನಾವಣೆ ಬರುವ ಮುಂಚೆಯೇ ಜನರಿಗೆ 'ಕುರುಕ್ಷೇತ್ರ' ಸಿನಿಮಾವನ್ನು ತೋರಿಸಬೇಕಾಗಿ ಪಣ ತೊಟ್ಟಿರುವ ನಿರ್ಮಾಪಕ ಮುನಿರತ್ನ 2018ರಲ್ಲಿ ಚಿತ್ರವನ್ನು ಬಿಡುಗಡೆ ಮಾಡಲಿದ್ದಾರೆ.


Click it and Unblock the Notifications











