ಗಣೇಶ್ 'ರೋಮಿಯೋ' ಚಿತ್ರಕ್ಕೆ ಕತ್ತರಿ ಪ್ರಯೋಗ
ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ರೋಮಿಯೋ' ಚಿತ್ರ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಸತತ ಸೋಲುಗಳಿಂದ ಕಂಗೆಟ್ಟಿದ್ದ ಗಣೇಶ್ ವೃತ್ತಿಜೀವನದಲ್ಲಿ 'ರೋಮಿಯೋ' ಹೊಸ ತಿರುವು ನೀಡಿದೆ. ಏತನ್ಮಧ್ಯೆ ಚಿತ್ರಕ್ಕೆ ಮತ್ತೊಂದು ಕತ್ತರಿ ಪ್ರಯೋಗವೂ ಆಗಿದೆ.
ಅದೇನಪ್ಪಾ ಅಂದರೆ ಜನ ಏನೋ ಚಿತ್ರವನ್ನು ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದಾರೆ. ಆದರೆ ಎಲ್ಲರದೂ ಒಂದೇ ರಾಗ. ಚಿತ್ರದಲ್ಲಿನ ಭಾವನಾತ್ಮಕ ಸನ್ನಿವೇಶಗಳು ಅತಿಯಾದವು ಎಂಬುದು. ಇದನ್ನು ಸೀರಿಯಸ್ಸಾಗಿ ಪರಿಗಣಿಸಿರುವ ಚಿತ್ರದ ನಿರ್ದೇಶಕ ಪಿಸಿ ಶೇಖರ್ ಆ ರೀತಿಯ ಸನ್ನಿವೇಶಗಳಿಗೆ ಕತ್ತರಿ ಪ್ರಯೋಗಿಸಿದ್ದಾರೆ.
ಒಟ್ಟು 15 ನಿಮಿಷಗಳ ಸನ್ನಿವೇಶಗಳಿಗೆ ಅವರು ಕತ್ತರಿ ಹಾಕಿ ಮತ್ತೊಮ್ಮೆ ಪ್ರೇಕ್ಷಕರ ಪ್ರತಿಕ್ರಿಯೆಗೆ ಕಾದಿದ್ದಾರೆ. 'ರೋಮಿಯೋ' ಚಿತ್ರಕ್ಕೆ ಅವರೇನು ಏಕಾಏಕಿ ಕತ್ತರಿ ಪ್ರಯೋಗಿಸಿಲ್ಲ. ಎಲ್ಲ ವರ್ಗದ ಪ್ರೇಕ್ಷಕರನ್ನು ಸಂಪರ್ಕಿಸಿ ಈ ನಿರ್ಧಾರಕ್ಕೆ ಬಂದಿದ್ದಾಗಿ ಅವರು ತಿಳಿಸಿದ್ದಾರೆ.
ಚಿತ್ರ ಬಿಡುಗಡೆಯಾದ ಬಳಿಕ ಸತತ ಮೂರು ದಿನಗಳ ಕಾಲ ಚಿತ್ರವನ್ನು ಪ್ರೇಕ್ಷಕರ ಜೊತೆ ಕೂತು ನೋಡಿದ್ದೇನೆ. ಗಾಂಧಿಕ್ಲಾಸಿನಲ್ಲಿ ಪ್ರೇಕ್ಷಕರ ಜೊತೆ ಕೂತು ನೋಡಿದ್ದೇನೆ. ಬಳಿಕ ಮಲ್ಟಿಫ್ಲೆಕ್ಸ್ ಗಳಲ್ಲಿ ಫ್ಯಾಮಿಲಿ ಆಡಿಯನ್ಸ್ ಜೊತೆ ನೋಡಿದ್ದೇನೆ.
ಚಿತ್ರದ ಕೊನೆಕೊನೆ ಯಾಕೋ ಅತಿಯಾಗಿ ಜಗ್ಗಾಡಿದ್ದಾರೆ ಎಂದು ಪ್ರೇಕ್ಷಕರು ಗೊಣಗತೊಡಗಿದರು. ಕತೆಯ ಓಟಕ್ಕೆ ಎಲ್ಲೂ ಭಂಗ ಬಾರದಂತೆ ಒಟ್ಟು 15 ನಿಮಿಷಗಳಷ್ಟನ್ನು ಕಡಿತ ಮಾಡಿರುವುದಾಗಿ ಶೇಖರ್ ತಿಳಿಸಿದ್ದಾರೆ.
ಮೊದಲ ವಾರ 'ರೋಮಿಯೋ' ಚಿತ್ರ ತೆರೆಕಂಡಿದ್ದು ಎಂಬತ್ತು ಚಿತ್ರಮಂದಿರಗಳಲ್ಲಿ. ಒಟ್ಟಾರೆ ಗಳಿಕೆ 2.70 ಕೋಟಿ ರೂಪಾಯಿ. ಥಿಯೇಟರ್ ಬಾಡಿಗೆ ಪಕ್ಕಕ್ಕಿಟ್ಟರೆ ನಿರ್ಮಾಪಕರ ಪಾಲು ರು 1.96 ಕೋಟಿ ರೂಪಾಯಿ.
ನವೀನ್ ರಮೇಶ್ ಕುಮಾರ್ ನಿರ್ಮಿಸಿರುವ ಈ ಚಿತ್ರ ಗಣೇಶ್ ಗೆ ಮರುಜನ್ಮ ಪ್ರಸಾದಿಸಿದೆ. "ಮಲ್ಟಿಫ್ಲೆಕ್ಸ್ ಚಿತ್ರಮಂದಿರಗಳು ಸಹಕರಿಸಿದ್ದರೆ ಚಿತ್ರ ಇನ್ನೊಂದಷ್ಟು ದುಡ್ಡು ಮಾಡುತ್ತಿತ್ತು. ಆದರೆ ಅವರು ಚಿತ್ರವನ್ನು ಎತ್ತಂಗಡಿ ಮಾಡುವ ಮೂಲಕ 'ರೋಮಿಯೋ' ಆರ್ಭಟಕ್ಕೆ ತಡೆಯೊಡ್ಡಿದ್ದಾರೆ ಎಂದು ಚಿತ್ರದ ವಿತರಕ ಕೆ ಮಂಜು ಆರೋಪಿಸಿದ್ದರು. (ಏಜೆನ್ಸೀಸ್)


Click it and Unblock the Notifications











