ಡಾ.ವಿಷ್ಣು ಬಗ್ಗೆ ಕೆಟ್ಟದಾಗಿ ಮಾತಾಡಿದ್ದ ವಿಜಯ್ ರಂಗರಾಜು ವಿರುದ್ಧ ದೂರು ದಾಖಲು
ದಿವಂಗತ ನಟ, ಸಾಹಸ ಸಿಂಹ ಡಾ ವಿಷ್ಣುವರ್ಧನ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದ ತೆಲುಗು ನಟ ವಿಜಯ್ ರಂಗರಾಜು ವಿರುದ್ಧ ಕನ್ನಡ ಹೋರಾಟಗಾರ ರೂಪೇಶ್ ರಾಜಣ್ಣ ದೂರು ದಾಖಲಿಸಿದ್ದಾರೆ.
ಕನ್ನಡದ ದಿಗ್ಗಜ ನಟ ವಿಷ್ಣು ಗೌರವಕ್ಕೆ ಧಕ್ಕೆ ತರುವಂತೆ ಅಸಭ್ಯವಾಗಿ ಮಾತನಾಡಿರುವ ವಿಜಯ್ ರಂಗರಾಜು ವಿರುದ್ಧ ಹಲಸೂರು ಠಾಣೆಯಲ್ಲಿ ಇಂದು ದೂರು ದಾಖಲು ಮಾಡಲಾಗಿದೆ.
ಕಳೆದ ತಿಂಗಳು ತೆಲುಗು ವೆಬ್ಸೈಟ್ವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ವಿಷ್ಣುವರ್ಧನ್ ಬಗ್ಗೆ ಬಹಳ ಕೆಟ್ಟದಾಗಿ ಮಾತನಾಡಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿಷ್ಣು ಅಭಿಮಾನಿಗಳು ಆ ತೆಲುಗು ನಟನ ವಿರುದ್ಧ ಕೆಂಡಾಮಂಡಲರಾಗಿದ್ದಾರೆ.

ವಿಷ್ಣುದಾದಾ ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವಂತಹ ಮಾತುಗಳನ್ನಾಡಿರುವ ನಟನ ವಿರುದ್ಧ ಕ್ರಮ ಜರುಗಿಸುವಂತೆ ವಿಷ್ಣು ಸೇನಾ ಸಮಿತಿ ಈಗಾಗಲೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ದೂರು ನೀಡಿದೆ.
ವಿಜಯ್ ರಂಗರಾಜು ಅವರು ವಿರುದ್ಧ ಭಾರಿ ಟೀಕೆ ವ್ಯಕ್ತವಾಗಿದ್ದು, ಹಿರಿಯ ನಟ ಜಗ್ಗೇಶ್, ಬಿಗ್ ಬಾಸ್ ಖ್ಯಾತಿಯ ಪ್ರಥಮ್ ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಘಟನೆ ಬಗ್ಗೆ ವಿಷ್ಣು ಅಳಿಯ ಅನಿರುದ್ಧ್ ಸಹ ಪ್ರತಿಕ್ರಿಯಿಸಿದ್ದು, ''ನೀವು ಕರ್ನಾಟಕಕ್ಕೆ ಬರಬೇಡಿ, ಬಂದ್ರೆ ಅಭಿಮಾನಿಗಳು ಸುಮ್ಮನೆ ಇರಲ್ಲ'' ಎಂದು ಎಚ್ಚರಿಕೆ ನೀಡಿದ್ದಾರೆ.


Click it and Unblock the Notifications











