ರಿಯಾಲಿಟಿ ಶೋ ಮಾಜಿ ಸ್ಪರ್ಧಿ ಕಾಳಿ ಮಠದ ಋಷಿಕುಮಾರಸ್ವಾಮಿ ಬಂಧನ
ಕನ್ನಡದ ರಿಯಾಲಿಟಿ ಶೋ ಒಂದರ ಮಾಜಿ ಸ್ಪರ್ಧಿ, ಕಾಳಿ ಮಠದ ಋಷಿಕುಮಾರಸ್ವಾಮಿ ಇದೀಗ ಪೊಲೀಸರ ಅತಿಥಿಯಾಗಿದ್ದಾರೆ. ಸಮಾಜದ ಸಾಮರಸ್ಯ ಹಾಳು ಮಾಡುವ ಹೇಳಿಕೆ ನೀಡಿದ ಋಷಿಕುಮಾರಸ್ವಾಮಿಯನ್ನು ಪೊಲೀಸರು ಬಂಧಿಸಿದ್ದಾರೆ.
ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ಮುಂದೆ ನಿಂತು ವಿಡಿಯೋ ಮಾಡಿದ್ದ ಋಷಿಕುಮಾರ ಸ್ವಾಮಿ ಮಸೀದಿಯನ್ನು ಶೀಘ್ರವೇ ಕೆಡವಬೇಕಿದೆ ಎಂದು ಹೇಳಿದ್ದರು. ಇದು ಮಸೀದಿಯಲ್ಲ ಹನುಮ ದೇವಾಲಯ ಇದನ್ನು ಅಯೋಧ್ಯೆಯ ಬಾಬ್ರಿ ಮಸೀದಿ ಕೆಡವಿದಂತೆ ಈ ಮಸೀದಿಯನ್ನೂ ಕೆಡವಬೇಕು ಎಂದಿದ್ದರು.
ಮಸೀದಿಯಲ ಗೋಡೆಗಳು, ಕಂಬಗಳನ್ನು ತೋರಿಸಿ ಮಾತನಾಡಿದ್ದ ಋಷಿಕುಮಾರಸ್ವಾಮೀಜಿ ಈ ಕಲ್ಲುಗಳು, ಕಂಬಗಳು ಇವೆಯಲ್ಲ ಇವೆಲ್ಲವೂ ಅದ್ಭುತವಾದ ಕಂಬಗಳು, ಇದು ದೇವಾಲಯದ ಕೆತ್ತನೆಗಳು, ದೇವಾಲಯವನ್ನೇ ಮಸೀದಿಯನ್ನಾಗಿ ಮಾಡಿಕೊಳ್ಳಲಾಗಿದೆ. ಬಾಬ್ರಿ ಮಸೀದಿಯ ರೀತಿಯೇ ನೆಲಸಮ ಮಾಡಬೇಕಾದ ಮಸೀದಿಗಳಲ್ಲಿ ಇದು ಸಹ ಒಂದು, ಹಿಂದುಗಳು ಜಾಗೃತರಾಗಿ'' ಎಂದಿದ್ದರು.

ಋಷಿಕುಮಾರ ಸ್ವಾಮಿಯ ಈ ಹೇಳಿಕೆ ವಿವಾದ ಎಬ್ಬಿಸಿತ್ತು. ಋಷಿಕುಮಾರ ಸ್ವಾಮಿ ಸಮಾಜದ ಸಾಮರಸ್ಯ ಹಾಳು ಮಾಡುವ, ಕೋಮು ಗಲಭೆ ಉಂಟಾಗುವ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ದೂರು ನೀಡಲಾಗಿತ್ತು. ಅದರಂತೆ ಇಂದು ಬೆಳಗ್ಗೆ ಚಿಕ್ಕಮಗಳೂರಿನ ಕಡೂರು ತಾಲ್ಲೂಕಿನ ದೇವನೂರು ಗ್ರಾಮದಲ್ಲಿದ್ದ ಋಷಿಕುಮಾರಸ್ವಾಮಿಯನ್ನು ಪೊಲೀಸರು ಬಂಧಿಸಿ ಶ್ರೀರಂಗಪಟ್ಟಣಕ್ಕೆ ಕರೆದೊಯ್ದಿದ್ದಾರೆ.
ಪೊಲೀಸ್ ಠಾಣೆಗೆ ಕರೆತಂದಾಗ ಮಾಧ್ಯಮಗಳೊಟ್ಟಿಗೆ ಮಾತನಾಡಿದ ಋಷಿಕುಮಾರಸ್ವಾಮಿ, ''ನಾನು ನನ್ನ ಹೇಳಿಕೆಗೆ ಈಗಲೂ ಬದ್ಧನಿದ್ದೇನೆ. ಮೊನ್ನೆ ಬಾಲಕಿ ಸಮನ್ವಿಯ ಅಸ್ಥಿ ವಿಸರ್ಜನೆಗೆ ತೆರಳಿದ್ದಾಗ ದಾರಿಯಲ್ಲಿ ಆ ಕಟ್ಟಡ (ಜಾಮಿಯಾ ಮಸೀದಿ) ಕಾಣಿಸಿತು. ಅದು ಮಸೀದಿಯಲ್ಲ ದೇವಾಲಯ, ನನಗೆ ಈಗಲೂ ಅದು ದೇವಾಲಯದಂತೆಯೇ ಕಾಣುತ್ತದೆ. ಹಾಗಾಗಿಯೇ ನಾನು ಮಸೀದಿ ಕೆಡವಿ ಅಲ್ಲಿ ದೇವಾಲಯ ನಿರ್ಮಾಣ ಮಾಡಬೇಕು ಎಂದು ಹೇಳಿದೆ. ನನ್ನ ಹೇಳಿಕೆಗೆ ಈಗಲೂ ನಾನು ಬದ್ಧವಾಗಿದ್ದೇನೆ'' ಎಂದಿದ್ದಾರೆ.
ಋಷಿಕುಮಾರಸ್ವಾಮಿ ಕನ್ನಡ ರಿಯಾಲಿಟಿ ಶೋ ಒಂದರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಅದೇ ಶೋನಲ್ಲಿ ಬ್ರಹ್ಮಾಂಡ ಗುರೂಜಿಗಳೂ ಸಹ ಇದ್ದರು. ರಿಯಾಲಿಟಿ ಶೋನಲ್ಲಿ ಇತರೆ ಸ್ಪರ್ಧಿಗಳೊಟ್ಟಿಗೆ ಡ್ಯಾನ್ಸ್ ಮಾಡಿ ರಂಜಿಸಿದ್ದರು ಋಷಿಕುಮಾರಸ್ವಾಮೀಜಿ. ಇದರ ಬಗ್ಗೆ ಕೆಲವರು ತಕರಾರು ಸಹ ಎತ್ತಿದ್ದರು. ಋಷಿಕುಮಾರರು ಸನ್ಯಾಸಿ ಆಗುವ ಮುನ್ನ ಡ್ಯಾನ್ಸ್ ಟೀಚರ್ ಸಹ ಆಗಿದ್ದರು. ಕೆಲವು ಸಿನಿಮಾಗಳಲ್ಲಿಯೂ ಅವರು ನಟಿಸಿದ್ದಾರೆ.


Click it and Unblock the Notifications











