'ಕೌರವ' ನಿರ್ದೇಶಕನ ಬಗ್ಗೆ ಹೀಗೊಂದು ಬ್ರೇಕಿಂಗ್ ನ್ಯೂಸ್
ಕನ್ನಡ ಚಿತ್ರರಂಗದಲ್ಲಿ ನಟರು ನಿರ್ದೇಶಕರಾಗಿ, ನಿರ್ದೇಶಕರು ನಟರಾಗಿ ಅದೃಷ್ಟ ಪರೀಕ್ಷೆಗೆ ಇಳಿಯುವುದು ಆಗಿನಿಂದ ನಡೆದುಕೊಂಡು ಬಂದಿದೆ. ಉಪೇಂದ್ರ, ಪ್ರೇಮ್, ಓಂ ಪ್ರಕಾಶ್ ರಾವ್, ಪವನ್ ಒಡೆಯರ್ ಹೀಗೆ ಅನೇಕರು ನಿರ್ದೇಶಕರಾದ ಮೇಲೆ ನಟರಾದರು.
ಇದೀಗ ಕನ್ನಡದ ಮತ್ತೊಬ್ಬ ಪ್ರತಿಭಾವಂತ ನಿರ್ದೇಶಕ ನಟನೆ ಕಡೆ ಮುಖ ಮಾಡಿದ್ದಾರೆ. ಎಸ್ ಮಹೇಂದರ್ ಈಗ ಮತ್ತೆ ಹೀರೋ ಆಗುತ್ತಿದ್ದಾರೆ. ಈಗಾಗಲೇ ಈ ಸಿನಿಮಾ ಶುರು ಆಗಿದೆ. 'ಫಿಲ್ಮಿಬೀಟ್ ಕನ್ನಡ'ಕ್ಕೆ ಈ ಸಿನಿಮಾ ಸಂಗತಿ ಎಕ್ಸ್ ಕ್ಲೂಸಿವ್ ಆಗಿ ತಿಳಿದಿದೆ.
ಇತ್ತೀಚಿಗೆ ಎಸ್ ಮಹೇಂದರ್ ನಿರ್ದೇಶನದ ಸಿನಿಮಾಗಳು ಕಡಿಮೆ ಆಗಿತ್ತು. 2017 ರಲ್ಲಿ 'ಒನ್ಸ್ ಮೋರ್ ಕೌರವ' ಚಿತ್ರದ ನಂತರ ಅವರು ಯಾವ ಸಿನಿಮಾ ಮಾಡಿಲ್ಲ. ಆದರೆ, ಇದೀಗ ನಿರ್ದೇಶನದ ಬದಲು ಮಹೇಂದರ್ ನಟನೆ ಕಡೆ ಆಸಕ್ತಿ ತೋರಿದ್ದಾರೆ.

ಮತ್ತೆ ಬಣ್ಣ ಹಾಕಿದ ಎಸ್ ಮಹೇಂದರ್
ನಟನೆ ಎಸ್ ಮಹೇಂದರ್ ರಿಗೆ ಹೊಸದೇನಲ್ಲ. ದೊಡ್ಡ ದೊಡ್ಡ ಸ್ಟಾರ್ ಗಳಿಗೆ ನಿರ್ದೇಶನ ಮಾಡಿದ್ದ ಮಹೇಂದರ್ ತಾವೇ ಕ್ಯಾಮರಾ ಮುಂದೆ ಬಂದಿದ್ದು 'ಗಟ್ಟಿಮೇಳ' ಸಿನಿಮಾದ ಮೂಲಕ. ನಟಿ ಶ್ರುತಿ ಈ ಸಿನಿಮಾದ ನಾಯಕಿ ಆಗಿದ್ದರು. ಸಿನಿಮಾದ ಕಥೆಗೆ ಸೂಟ್ ಆಗುವ ಕಾರಣ ತಾವೇ ನಟನೆಯನ್ನೂ ನಿರ್ವಹಿಸಿದ್ದರು. ಇದೀಗ 19 ವರ್ಷಗಳ ನಂತರ ಮತ್ತೆ ಮಹೇಂದರ್ ಹೀರೋ ಆಗುತ್ತಿದ್ದಾರೆ.

ಗಡ್ಡ ವಿಜಿ ನಿರ್ದೇಶನ
ಎಸ್ ಮಹೇಂದರ್ ರವರ ಹೊಸ ಸಿನಿಮಾವನ್ನು ಗಡ್ಡ ವಿಜಿ ನಿರ್ದೇಶನ ಮಾಡುತ್ತಿದ್ದಾರೆ. ಯೋಗರಾಜ್ ಭಟ್ಟರ ತಂಡದಲ್ಲಿ ಇದ್ದ ಗಡ್ಡ ವಿಜಿ, 'ಪ್ಲಸ್' ಸಿನಿಮಾದ ಮೂಲಕ ತಾವೇ ಡೈರೆಕ್ಟರ್ ಆದರು. ಆ ಸಿನಿಮಾದ ನಂತರ 'ವಾರಸ್ಧಾರ' ಧಾರಾವಾಹಿ ನಿರ್ದೇಶನ ಮಾಡಿದರು. ಸದ್ಯ, ಗಡ್ಡ ವಿಜಿ ಎಸ್ ಮಹೇಂದರ್ ಜೊತೆಗೆ ಹೊಸ ಪ್ರಾಜೆಕ್ಟ್ ಶುರು ಮಾಡಿದ್ದಾರೆ.

ಮಡಿಕೇರಿಯಲ್ಲಿ ಚಿತ್ರೀಕರಣ
ಈ ಹೊಸ ಸಿನಿಮಾದ ಚಿತ್ರೀಕರಣ ಮಡಿಕೇರಿಯಲ್ಲಿ ನಡೆಯುತ್ತಿದೆ. ಸದ್ದಿಲ್ಲದೆ, ಯಾವುದೇ ಸುದ್ದಿ ಮಾಡದೆ ಚಿತ್ರತಂಡ ತಮ್ಮ ಕೆಲಸ ಪ್ರಾರಂಭ ಮಾಡಿದೆ. ವಿಜಯ್ ಎನ್ನುವವರು ಈ ಸಿನಿಮಾಗೆ ಬಂಡವಾಳ ಹಾಕುತ್ತಿದ್ದಾರೆ. ಇದು ಅವರ ಮೊದಲ ಸಿನಿಮಾವಾಗಿದೆ. ಸಿನಿಮಾದ ಟೈಟಲ್ ಇನ್ನು ಬಹಿರಂಗವಾಗಿಲ್ಲ. ಮುಂದಿನ ದಿನದಲ್ಲಿ ಸಿನಿಮಾ ಅನೌನ್ಸ್ ಆಗಲಿದೆ.

28 ವರ್ಷದ ಚಿತ್ರರಂಗದ ಅನುಭವ
ಎಸ್ ಮಹೇಂದರ್ ಕನ್ನಡ ಚಿತ್ರರಂಗದ ಅನುಭವಿ ನಿರ್ದೇಶಕ. 1992 ರಲ್ಲಿ ಚಿತ್ರರಂಗಕ್ಕೆ ಬಂದ ಎಸ್ ಮಹೇಂದರ್ 'ಪ್ರಣಯದ ಪಕ್ಷಿಗಳು' ಸಿನಿಮಾದ ಮೂಲಕ ನಿರ್ದೇಶಕನಾದರು. ಆ ನಂತರ 'ಶೃಂಗಾರ ಕಾವ್ಯ', 'ತಾಯಿ ಇಲ್ಲದ ತವರು', 'ಕರ್ಪೂರ ಗೊಂಬೆ', 'ಕೌರವ', 'ಸ್ನೇಹಲೋಕ', 'ನಿನಗಾಗಿ', 'ವಾಲಿ', 'ತಾಯಿಗೆ ತಕ್ಕ ಮಗ' ಹೀಗೆ ಸಾಕಷ್ಟು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ.


Click it and Unblock the Notifications











