ಮತ್ತೆ ಟೋಪಿ ಹಾಕಿಕೊಂಡ ಎಸ್ ನಾರಾಯಣ್!

ಅಂದಹಾಗೆ ಈ ಟೋಪಿ ಅಂತಿಂಥಹ ಟೋಪಿ ಅಲ್ಲ. ಇದು ನಿರ್ದೇಶಕನ ಟೋಪಿ. ಈ ಬಾರಿ ಕೇವಲ ಅವರು ಟೋಪಿ ಮಾತ್ರ ಹಾಕಿಕೊಳ್ಳುತ್ತಿಲ್ಲ. ಅದರ ಜೊತೆಗೆ ಬಣ್ಣವನ್ನೂ ಹಚ್ಚಿಕೊಳ್ಳ್ಳುತ್ತಿದ್ದು ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ.
ಈ ಬಾರಿ ಅವರು ಟೋಪಿ ಹಾಕಿಕೊಂಡು ಆಕ್ಷನ್ ಕಟ್ ಹೇಳುತ್ತಿರುವ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ಕೋತಿಗಳು, ಕುರಿಗಳು, ಕತ್ತೆಗಳು ಎಲ್ಲವೂ ಮುಗಿದಿವೆ. ಇನ್ಯಾವ ಪ್ರಾಣಿ ಅವರ ಕಣ್ಣಿಗೆ ಬೀಳುತ್ತದೋ ಏನೋ ಕಾದುನೋಡೋಣ.
ಪದ್ಮಸುಂದರಿ ಕ್ರಿಯೇಷನ್ಸ್ ಲಾಂಛನದಲ್ಲಿ ಸೆಟ್ಟೇರಲಿರುವ ಈ ಚಿತ್ರದ ಮುಹೂರ್ತ ದೊಡ್ಡ ಗಣಪತಿ ದೇವಸ್ಥಾನದಲ್ಲಿ ನಡೆದಿದೆ. ಚಿತ್ರದಲ್ಲಿ ರಮೇಶ್ ಅರವಿಂದ್ ಹಾಗೂ ಮೋಹನ್ ಅವರು ನಾಣಿಗೆ ಸಾಥ್ ನೀಡುತ್ತಿದ್ದಾರೆ. ಜಗದೀಶ್ ವಾಲಿ ಅವರ ಛಾಯಾಗ್ರಹಣ ಚಿತ್ರಕ್ಕಿದೆ.
ಒಟ್ಟು 25 ಶೀರ್ಷಿಕೆಗಳು ಶಾರ್ಟ್ ಲಿಸ್ಟ್ ನಲ್ಲಿವೆಯಂತೆ. ಅವುಗಳಲ್ಲಿ ಸೂಕ್ತವಾದ ಶೀರ್ಷಿಕೆಯನ್ನು ಆಯ್ಕೆ ಮಾಡುವುದಾಗಿ ನಾಣಿ ತಿಳಿಸಿದ್ದಾರೆ. ಬಹುಶಃ ಡಿಸೆಂಬರ್ 10ಕ್ಕೆ ಶೀರ್ಷಿಕೆ ಬಹಿರಂಗವಾಗಲಿದೆಯಂತೆ. ಕಥೆ, ಚಿತ್ರಕಥೆ ರಮೇಶ್ ಅರವಿಂದ್ ಅವರದು.
ಚಿತ್ರದಲ್ಲಿ ಮೂವರು ನಾಯಕರು ಎಂದ ಮೇಲೆ ಮೂವರು ನಾಯಕಿಯರು ಇರುತ್ತಾರಾ? ಅಥವಾ ಒಬ್ಬರೇ ನಾಯಕಿನಾ? ಅಥವಾ ನಾಯಕಿಯೇ ಇರುವುದಿಲ್ಲವೇ? ಪಾತ್ರವರ್ಗದಲ್ಲಿ ಇನ್ನೂ ಯಾರ್ಯಾರು ಇರುತ್ತಾರೆ? ಎಂಬ ವಿವರಗಳು ಇನ್ನಷ್ಟೇ ಗೊತ್ತಾಗಬೇಕು. (ಒನ್ಇಂಡಿಯಾ ಕನ್ನಡ)


Click it and Unblock the Notifications











