ನಿರ್ದೇಶನಕ್ಕಿಳಿದ ಎಸ್.ನಾರಾಯಣ್ ಮಗ: ಚಿತ್ರೀಕರಣ ಪೂರ್ಣ
ಎಸ್.ನಾರಾಯಣ್ ಮೊದಲ ಮಗ ಪವನ್ ನಾರಾಯಣ್ ಸಿನಿಮಾಕ್ಕೆ ಇಳಿದಿದ್ದು, ಸದ್ದಿಲ್ಲದೆ ಸಿನಿಮಾ ಚಿತ್ರೀಕರಣವನ್ನೂ ಪೂರ್ಣಗೊಳಿಸಿದ್ದಾರೆ.
ಪವನ್ ನಾರಾಯಣ್, 'ನವಮಿ 9/9/1999' ಹೆಸರಿನ ಸಿನಿಮಾ ನಿರ್ದೇಶಿಸಿದ್ದು ಇತ್ತೀಚೆಗಷ್ಟೆ ಸಿನಿಮಾ ಚಿತ್ರೀಕರಣ ಪೂರ್ಣಗೊಳಿಸಿ ಪೋಸ್ಟ್ ಪ್ರೊಡಕ್ಷನ್ ಕಾರ್ಯದತ್ತ ಗಮನವಹಿಸಿದ್ದಾರೆ.
ಸಕಲೇಶಪುರ, ಮೈಮಾಪುರ, ತುಮಕೂರು, ದೇವರಾಯನದುರ್ಗ, ಬೆಂಗಳೂರು ಹಾಗೂ ಇನ್ನೂ ಕೆಲವೆಡೆಗಳಲ್ಲಿ 40 ದಿನಗಳ ಕಾಲ ಚಿತ್ರೀಕರಣ ನಡೆಸಿದ ಚಿತ್ರತಂಡ, ಚಿತ್ರೀಕರಣವನ್ನು ಸಾಂಗವಾಗಿ ಮುಗಿಸಿದೆ.

'ಪ್ರಸೆಂಟ್ ಪ್ರಪಂಚ ಜೀರೋ ಪರ್ಸೆಂಟ್ ಲವ್', 'ಕ್ರಿಟಿಕಲ್ ಕೀರ್ತನೆಗಳು' ಸಿನಿಮಾಗಳಲ್ಲಿ ನಟಿಸಿರುವ ಯಶಸ್ ಅಭಿ ಈ ಸಿನಿಮಾದ ನಾಯಕನಾಗಿದ್ದಾರೆ. ಯಶಸ್ ಅಭಿ ನಾಯಕ ಮಾತ್ರವೇ ಆಗಿರದೆ ಸಿನಿಮಾಕ್ಕೆ ಕತೆ, ಚಿತ್ರಕತೆಯನ್ನೂ ಬರೆದಿದ್ದಾರೆ. ಕೃಷ್ಣ ಗುಡೇಮಾರನಹಳ್ಳಿ ಸಿನಿಮಾಕ್ಕೆ ಸಂಭಾಷಣೆ ಬರೆದಿದ್ದಾರೆ. ಸಿನಿಮಾಕ್ಕೆ ನಂದಿನಿ ಗೌಡ ನಾಯಕಿ. ಸಿನಿಮಾದ ಪ್ರಮುಖ ಪಾತ್ರದಲ್ಲಿ ಸ್ವತಃ ಎಸ್.ನಾರಾಯಣ್ ನಟಿಸಿದ್ದಾರೆ.
ಈ ಸಿನಿಮಾವನ್ನು ಪದ್ಮಸುಂದರಿ ಕ್ರಿಯೇಷನ್ಸ್ ನಿರ್ಮಾಣ ಮಾಡುತ್ತಿದೆ. ಎರಡು ಹಾಡುಗಳಿರುವ ಈ ಚಿತ್ರಕ್ಕೆ ಗಿರಿಧರ್ ದಿವಾನ್ ಸಂಗೀತ ನೀಡಿದ್ದಾರೆ. ಪ್ರದೀಪ್ ಕುಮಾರ್ ಎಚ್.ಎಸ್. ಛಾಯಾಗ್ರಹಣ, ಜಾಗ್ವಾರ್ ಸಣ್ಣಪ್ಪ ಸಾಹಸ ನಿರ್ದೇಶನ ಹಾಗೂ ನಾಗಿ, ಅರುಣ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.
ಸಿನಿಮಾದಲ್ಲಿ ಓಂಪ್ರಕಾಶ್ ರಾವ್, ಹುಚ್ಚ ವೆಂಕಟ್, ಶಂಕರ್ ಅಶ್ವತ್ಥ್, ಕುರಿ ಸುನೀಲ್, ನೇಹಾ ಪಾಟೀಲ್, ಕಾರ್ತಿಕ್, ಪವಿತ್ರಾ, ಅನುಶ್ರೀ, ಸಂದೀಪ್ ಇನ್ನೂ ಹಲವು ಕಲಾವಿದರು ನಟಿಸಿದ್ದಾರೆ.

ಪವನ್ ನಾರಾಯಣ್ನ ಮೊದಲ ಸಿನಿಮಾಕ್ಕೆ ಹಲವು ನಿರ್ದೇಶಕರ ಬೆಂಬಲ ದೊರೆತಿದೆ. 'ನವಮಿ' ಹೆಸರಿಗೆ ತಕ್ಕಂತೆ ಒಂಬತ್ತು ಮಂದಿ ಸಿನಿಮಾದ ಪೋಸ್ಟರ್ ಅನ್ನು ಬಿಡುಗಡೆ ಮಾಡಿದ್ದರು. ಎಸ್.ನಾರಾಯಣ್, ಪವನ್ ಒಡೆಯರ್, ರವಿ ಶ್ರೀವತ್ಸ, 'ಸಿಂಪಲ್' ಸುನಿ, ಎ.ಪಿ. ಅರ್ಜುನ್,ಶಶಾಂಕ್, ಚಂದ್ರಶೇಖರ್ ಬಂಡಿಯಪ್ಪ, 'ಖದರ್' ಕುಮಾರ್, ಅಭಿರಾಮ್ ಅವರುಗಳು ಪವನ್ ನಾರಾಯಣ್ ಮೊದಲ ಸಿನಿಮಾಕ್ಕೆ ಶುಭ ಹಾರೈಸಿದ್ದರು.
ಎಸ್.ನಾರಾಯಣ್ ರ ಇನ್ನೊಬ್ಬ ಪುತ್ರ ಪಂಕಜ್ ನಾರಾಯಣ್ ಈಗಾಗಲೇ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. 'ಚೈತ್ರದ ಚಂದ್ರಮ', 'ಚೆಲುವಿನ ಚಿಲಿಪಿಲಿ', 'ವೀರು', 'ದುಷ್ಟ', 'ದಾಂಡಿಗ', 'ರಣ' ಇನ್ನೂ ಹಲವು ಸಿನಿಮಾಗಳಲ್ಲಿ ಪಂಕಜ್ ನಟಿಸಿದ್ದಾರೆ.
ಇತ್ತೀಚೆಗೆ ನಟನೆಯತ್ತ ಮುಖಮಾಡಿ ಸಿನಿಮಾ ನಿರ್ದೇಶನದಿಂದ ತುಸು ಅಂತರ ಕಾಯ್ದುಕೊಂಡಿದ್ದ ಎಸ್.ನಾರಾಯಣ್ ಇದೀಗ ಮತ್ತೆ ನಿರ್ದೇಶನಕ್ಕೆ ಮರಳಿದ್ದು, ಕನ್ನಡದಲ್ಲಿ 5ಡಿ ಸಿನಿಮಾ ತೆಗೆಯುವುದಾಗಿ ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ. ನಟನೊಬ್ಬ 'ಎಸ್.ನಾರಾಯಣ್ ನಿರ್ದೇಶನ ಮರೆತುಬಿಟ್ಟಿದ್ದಾರೆ' ಎಂದು ಹೇಳಿರುವ ವಿಷಯವನ್ನೂ ಅಂದಿನ ಕಾರ್ಯಕ್ರಮದಲ್ಲಿ ಎಸ್.ನಾರಾಯಣ್ ಹೇಳಿದ್ದರು.
ಅದರ ಜೊತೆಗೆ ಮಾಜಿ ಸಿಎಂ ಕುಮಾರಸ್ವಾಮಿ ನಿರ್ಮಾಣ ಮಾಡಲಿರುವ ಸಿನಿಮಾವನ್ನು ಸಹ ಎಸ್.ನಾರಾಯಣ್ ನಿರ್ದೇಶನ ಮಾಡಲಿದ್ದಾರೆ. ಸಿನಿಮಾಕ್ಕೆ 'ಹೆಜ್ಜೆ' ಎಂದು ಹೆಸರಿಡಲಾಗಿದೆ. ಈ ಸಿನಿಮಾ ಕಾದಂಬರಿ ಆಧರಿತ ಸಿನಿಮಾ ಆಗಿದ್ದು, ಕನ್ನಡದ ಮಣ್ಣಿನ ಸೊಗಡನ್ನು ಸಿನಿಮಾದ ಮೂಲಕ ಕಟ್ಟಿಕೊಡುವ ಯತ್ನವನ್ನು ಕಲಾಸಾಮ್ರಾಟ್ ಎಸ್.ನಾರಾಯಣ್ ಮಾಡುತ್ತಿದ್ದಾರೆ.
ವ್ಯಾಸರಾಯ ಬಲ್ಲಾಳ್ರ 'ಹೆಜ್ಜೆ' ಕಾದಂಬರಿಯನ್ನು ಸಿನಿಮಾ ಮಾಡಬೇಕೆಂದು 2005ರಲ್ಲಿಯೇ ಎಚ್ಡಿ ಕುಮಾರಸ್ವಾಮಿ, ಎಸ್ ನಾರಾಯಣ್ ನಿಶ್ಚಯಿಸಿದ್ದರು. ಕಾದಂಬರಿಯ ಹಕ್ಕುಗಳನ್ನು ಕುಮಾರಸ್ವಾಮಿ ಆಗಲೇ ಖರೀದಿಸಿದ್ದರು. ಆ ಸಿನಿಮಾಕ್ಕೆ ಕಮಲ್ ಹಾಸನ್ ಅನ್ನು ಕರೆತರಬೇಕು ಎಂದೂ ಅಂದುಕೊಂಡಿದ್ದರು. ಆದರೆ ಆ ನಂತರ ಎಚ್ಡಿ ಕುಮಾರಸ್ವಾಮಿ ರಾಜಕೀಯದಲ್ಲಿ ಹೆಚ್ಚು ಬ್ಯುಸಿಯಾದ ಕಾರಣ ಆಗ 'ಹೆಜ್ಜೆ' ಸಿನಿಮಾ ಮಾಡಲಾಗಲಿಲ್ಲ. ಈಗ ಸಿನಿಮಾ ಮಾಡಲು ಇಬ್ಬರೂ ಒಂದಾಗಿದ್ದಾರೆ.


Click it and Unblock the Notifications











