ಚಿತ್ರತಂಡದಿಂದ ಅವಮಾನ: ವಿಡಿಯೋ ಮಾಡಿ ನೋವು ಹಂಚಿಕೊಂಡ ಎಸ್.ನಾರಾಯಣ್
ಎಸ್.ನಾರಾಯಣ್ ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ದೇಶಕ, ನಿರ್ಮಾಪಕ. ನಿರ್ದೇಶನದಿಂದ ತುಸು ಬಿಡುವು ಪಡೆದುಕೊಂಡು ನಟನೆಗೆ ಹೆಚ್ಚು ಒತ್ತು ನೀಡಿರುವ ಎಸ್.ನಾರಾಯಣ್ ಹಲವು ಸಿನಿಮಾ, ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ.
ಇದೀಗ 'ಒಲ್ಡ್ ಮಾಂಕ್' ಹೆಸರಿನ ಕನ್ನಡ ಸಿನಿಮಾದಲ್ಲಿ ಎಸ್ ನಾರಾಯಣ್ ನಟಿಸಿದ್ದು ಈ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಆದರೆ ಸಿನಿಮಾ ತಂಡದ ಬಗ್ಗೆ ಎಸ್.ನಾರಾಯಣ್ 'ಬೇಸರ' ವ್ಯಕ್ತಪಡಿಸಿದ್ದಾರೆ.
ಎಸ್.ನಾರಾಯಣ್ ವಿಡಿಯೋ ಒಂದನ್ನು ಹರಿಬಿಟ್ಟಿದ್ದು, ವಿಡಿಯೋದಲ್ಲಿ ಬಹಳ ಗಂಭೀರವಾಗಿ ಮಾತನಾಡುತ್ತಾ, ''ನಾನು ಸತತ 30 ವರ್ಷಗಳಿಂದ ಸಿನಿಮಾ ರಂಗದಲ್ಲಿದ್ದೇನೆ. ದೊಡ್ಡ ದೊಡ್ಡ ಕಲಾವಿದರು, ತಂತ್ರಜ್ಞರೊಟ್ಟಿಗೆ ಕೆಲಸ ಮಾಡಿದ್ದೇನೆ. ನಟ, ನಿರ್ಮಾಪಕ, ವಿತರಕ, ತಂತ್ರಜ್ಞ, ಸಂಯೋಜಕ ಇನ್ನೂ ಹಲವು ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಚಿತ್ರರಂಗ ಈ ವರೆಗೆ ನನ್ನ ಚೆನ್ನಾಗಿ ನೋಡಿಕೊಂಡಿದೆ. ಗೌರವಿಸಿದೆ'' ಎಂದಿದ್ದಾರೆ.

''ಇದೀಗ ನಾನು 'ಓಲ್ಡ್ ಮಾಂಕ್' ಹೆಸರಿನ ಸಿನಿಮಾದಲ್ಲಿ ನಟಿಸಿದ್ದೇನೆ. ಆ ಸಿನಿಮಾಕ್ಕೆ ಶ್ರೀನಿ ನಾಯಕ ಹಾಗೂ ನಿರ್ದೇಶಕ. ಇವರೇ ಈ ಹಿಂದೆ 'ಬೀರ್ ಬಲ್' ಸಿನಿಮಾ ಮಾಡಿದ್ದರು. ಈ 'ಓಲ್ಡ್ ಮಾಂಕ್' ತಂಡದಿಂದ ನನಗೆ ಅವಮಾನ ಆಗಿದೆ'' ಎಂದು ಸಿಟ್ಟಿನಿಂದಲೇ ಹೇಳಿದ್ದಾರೆ.
ಬಳಿಕ ಕ್ಯಾಮೆರಾವನ್ನು 'ಓಲ್ಡ್ ಮಾಂಕ್' ಚಿತ್ರತಂಡದ ಕಡೆಗೆ ತಿರುಗಿಸಿ ಅವರೆಲ್ಲ ಕೇಕ್ ತಿನ್ನುತ್ತಿರುವ ದೃಶ್ಯಗಳನ್ನು ಎಸ್ ನಾರಾಯಣ್ ತೋರಿಸಿದ್ದಾರೆ. ''ನೋಡಿ ಇಷ್ಟು ದೊಡ್ಡ ಹಿರಿಯ ನಟ, ನಿರ್ದೇಶಕ ನಾನು ನನಗೆ ಒಂದು ಪೀಸ್ ಕೇಕ್ ಕೊಟ್ಟಿಲ್ಲ ಇವರು. ಆದರೆ ಇವರುಗಳು ಮಾತ್ರ ಕೇಜಿಗಟ್ಟಲೆ ಪೈನಾಪಲ್ ಕೇಕ್ ತರಿಸಿಕೊಂಡು ಮೆಕ್ಕುತ್ತಿದ್ದಾರೆ'' ಎಂದಿದ್ದಾರೆ. ಎಸ್.ನಾರಾಯಣ್ ಅವರ ಈ ಸಿಟ್ಟಿಗೆ ಚಿತ್ರತಂಡವೆಲ್ಲ ನಕ್ಕಿದೆ. ಅಲ್ಲೊಬ್ಬರು, 'ಸರ್, ಕೇಕ್ ಖಾಲಿ ಆಗಿದೆ, ಕ್ರೀಮ್ ಮಾತ್ರ ಇದೆ ಬೇಕೆಂದರೆ ಅದನ್ನೇ ಕೊಡ್ತೀವಿ'' ಎಂದು ಹಾಸ್ಯ ಮಾಡಿದ್ದಾರೆ.
'ಓಲ್ಡ್ ಮಾಂಕ್' ಸಿನಿಮಾ ಇದೇ ಫೆಬ್ರವರಿ 25 ಕ್ಕೆ ಬಿಡುಗಡೆ ಆಗಲಿದೆ. ಸಿನಿಮಾದಲ್ಲಿ ಶ್ರೀನಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ನಿರ್ದೇಶಕರೂ ಅವರೇ ಹಾಸ್ಯಪ್ರಧಾನವಾದ ಈ ಸಿನಿಮಾದಲ್ಲಿ ಅದಿತಿ ಪ್ರಭುದೇವ ನಾಯಕಿಯಾಗಿ ನಟಿಸಿದ್ದಾರೆ. ಎಸ್ ನಾರಾಯಣ್, ಸಿಹಿ ಕಹಿ ಚಂದ್ರು ಸೇರಿದಂತೆ ಹಲವು ಹಿರಿಯ, ಕಿರಿಯ ನಟರು ಸಿನಿಮಾದಲ್ಲಿದ್ದಾರೆ.


Click it and Unblock the Notifications











