'ರಾಜರಥ ವಿವಾದ' : ಭಂಡಾರಿ ಹುಡುಗರಿಗೆ ಸಾ.ರಾ.ಗೋವಿಂದು ಎಚ್ಚರಿಕೆ
''ರಾಜರಥ' ಸಿನಿಮಾ ನೋಡಿರದ ಪ್ರೇಕ್ಷಕರಿಗೆ 'ಕಚಡ ನನ್ ಮಳ್ಕು'' ಎಂದು ಅನೂಪ್ ಭಂಡಾರಿ ಮತ್ತು ನಿರೂಪ್ ಭಂಡಾರಿ ಹೇಳಿದ್ದರು. ಇತ್ತೀಚಿನ ಸಂದರ್ಶನವೊಂದರಲ್ಲಿ ನಿರೂಪಕಿ ರಾಪಿಡ್ Rrapid ರಶ್ಮಿ ''ರಾಜರಥ' ಸಿನಿಮಾ ನೋಡಿರದ ಪ್ರೇಕ್ಷಕರು______'' ಎಂದು ಬಿಟ್ಟ ಸ್ಥಳವನ್ನು ತುಂಬಿಸುವಂತೆ ಕೇಳುತ್ತಾರೆ. ಆಗ ಅನೂಪ್ ಭಂಡಾರಿ, ನಿರೂಪ್ ಭಂಡಾರಿ ಮತ್ತು ನಟಿ ಅವಂತಿಕಾ ಶೆಟ್ಟಿ ''ರಾಜರಥ' ಸಿನಿಮಾ ನೋಡಿರದ ಪ್ರೇಕ್ಷಕರು 'ಕಚಡ ನನ್ ಮಳ್ಕು'' ಎಂದು ಉತ್ತರ ನೀಡಿದ್ದರು.
ಆದರೆ ಇದೀಗ ಇವರು ಆಡಿದ ಮಾತು ವಿವಾದ ಹುಟ್ಟು ಹಾಕಿದೆ. ಸಾಮಾಜಿಕ ಜಾಲತಾಣದಲ್ಲಿ ಭಂಡಾರಿ ಸಹೋದರರು ಪ್ರೇಕ್ಷಕರಿಗೆ ಬೈದಿರುವ ವಿಡಿಯೋ ವೈರಲ್ ಆಗಿದೆ. ಅಣ್ಣ - ತಮ್ಮನ ಮಾತು ಕೇಳಿ ಅನೇಕರು ಕೋಪಗೊಂಡಿದ್ದರು. ಸದ್ಯ ಈ ವಿವಾದದ ಬಗ್ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸಾ.ರಾ.ಗೋವಿಂದು ಮಾತನಾಡಿದ್ದಾರೆ. ಸಿನಿಮಾ ನೋಡಿ ಕಲಾವಿದರನ್ನು ಬೆಳೆಸುವ ಪ್ರೇಕ್ಷಕ ಬಗ್ಗೆ 'ರಾಜರಥ' ಸಿನಿಮಾ ತಂಡ ಕೊಟ್ಟಿರುವ ಹೇಳಿಕೆಗೆ ಅವರು ಗರಂ ಆಗಿದ್ದಾರೆ. ''ಇನ್ನೊಂದು ಬಾರಿ ಈ ರೀತಿಯ ಪದ ಬಳಕೆ ಮಾಡಬಾರದು, ಮತ್ತೆ ಇಂತಹ ಘಟನೆಗಳು ನಡೆಯಬಾರದು'' ಎಂದು ಕೇಳಿರುವ ಸಾ.ರಾ.ಗೋವಿಂದು ವಿವಾದ ಮಾಡಿಕೊಂಡ ಭಂಡಾರಿ ಬ್ರದರ್ಸ್ ಗೆ ಎಚ್ಚರಿಕೆ ನೀಡಿದ್ದಾರೆ. ಮುಂದೆ ಓದಿ..

ಸಾ.ರಾ.ಗೋವಿಂದು ಹೇಳಿಕೆ
'ರಾಜರಥ' ವಿವಾದದ ಕುರಿತಾಗಿ ಮಾತನಾಡಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸಾ.ರಾ.ಗೋವಿಂದು ''ಡಾ.ರಾಜ್ ಕುಮಾರ್, ವಿಷ್ಣುವರ್ಧನ್ ರೀತಿಯ ಮೇರು ನಟರು ಪ್ರೇಕ್ಷಕರನ್ನು ದೇವರು ಎಂದು ಕರೆದಿದ್ದಾರೆ. ಪ್ರೇಕ್ಷಕರು ಇಲ್ಲದೆ ಇಂದು ನಾವು ಇಲ್ಲ. ಈ ರೀತಿಯ ಪದ ಬಳಕೆ ಮಾಡಬಾರದು. ನಿಮಗೆ ಮಾತಿನ ಮೇಲೆ ಹಿಡಿತ ಇರಬೇಕು.'' ಎಂದು ಎಚ್ಚರಿಕೆ ನೀಡಿದ್ದಾರೆ.

ಪ್ರೇಕ್ಷಕರು ಇದ್ದರೆ ನಾವು
''ಇನ್ನೂ ಅವರಿಗೆ ಚಿಕ್ಕ ವಯಸ್ಸು. ಈ ವಯಸ್ಸಿನಲ್ಲಿ ಈ ರೀತಿಯ ಮಾತು ಆಡಿದರೆ ಜನ ನಮ್ಮನ್ನು ತಿರಸ್ಕಾರ ಮಾಡುತ್ತಾರೆ. ಹಾಗಾಗಿ ನಾವು ಗೆದ್ದಾಗ ಬೀಗಬಾರದು ಸೋತಾಗ ಕುಗ್ಗಬಾರದು. 'ರಂಗಿತರಂಗ' ಸಿನಿಮಾವನ್ನು ಗೆಲ್ಲಿಸಿದ್ದು ಯಾರು.?... ಅದು ಪ್ರೇಕ್ಷಕರೆ ತಾನೆ. ನೀವು ಚಿತ್ರರಂಗದಲ್ಲಿ ಇನ್ನೂ ಸಣ್ಣವರು, ನೀವು ಮಾತನಾಡುವಾಗ ನಿಗಾ ಇರಬೇಕು. ಎಮೋಷನಲ್ ಆಗಿ ಕೆಲವು ಬಾರಿ ಈ ರೀತಿ ಆಗುತ್ತದೆ. ಆದರೆ ಮಾತನಾಡುವಾಗ ಎಚ್ಚರಿಕೆಯಿಂದ ಇರಬೇಕು. ಪ್ರೇಕ್ಷಕರನ್ನು ಎಂದಿಗೂ ಎದುರು ಹಾಕಿಕೊಳ್ಳಬಾರದು. ಪ್ರೇಕ್ಷಕರು ಇದ್ದರೆ ನಾವು.'' - ಸಾ.ರಾ.ಗೋವಿಂದು

ಹುಡುಗಾಟ ಮಾಡಬಾರದು
''ಅವರು ನಡೆದ ಘಟನೆಗೆ ಕ್ಷಮೆ ಕೇಳಿದ್ದಾರೆ. ಮುಂದಿನ ದಿನದಲ್ಲಿ ಈ ರೀತಿ ಘಟನೆ ಮತ್ತೆ ನಡೆಯಬಾರದು. ಯಾವತ್ತು ಕೂಡ ಜವಾಬ್ದಾರಿ ಇರಬೇಕು. ಹುಡುಗಾಟ ಮಾಡಬಾರದು. ಸಿನಿಮಾ ರಂಗವನ್ನು ಅಂದಿನಿಂದ ಕಟ್ಟಿದವರಲ್ಲಿ ಮಹಾನ್ ಕಲಾವಿದರು, ನಿರ್ಮಾಪಕರು ಇದ್ದಾರೆ. ಆದರೆ ಈಗ ಬಂದು ಈ ರೀತಿ ಪ್ರೇಕ್ಷಕರಿಗೆ ಮಾತನಾಡುವುದು ಎಲ್ಲೋ ಒಂದು ಕಡೆ ದುರಂತ ಅನಿಸುತ್ತದೆ. ಅವರು ಬಹಳ ಸೂಕ್ಷ್ಮವಾಗಿ ಮಾತನಾಡುವುದನ್ನು ಕಲಿತುಕೊಳ್ಳಬೇಕು.'' - ಸಾ.ರಾ.ಗೋವಿಂದು

ಪ್ರೇಕ್ಷಕರನ್ನು ಗುರಿ ಮಾಡಬಾರದು
''ರಾಜರಥ ಚಿತ್ರ ಸೋತಿದೆ ಎಂದ ಮೇಲೆ ಯಾಕೆ ಸೋತಿತು ಅಂತ ಯೋಚನೆ ಮಾಡಬೇಕು. 'ರಂಗಿತರಂಗ' ಸಿನಿಮಾ ಗೆದ್ದಾಗ ಎಲ್ಲರೂ ಆ ಖುಷಿಯನ್ನು ಆ ಗೆಲುವನ್ನು ಹಂಚಿಕೊಂಡರು. ಅದೇ ಚಿತ್ರ ಸೋತಾಗ ನಮ್ಮ ತಪ್ಪು ಏನಾಗಿದೆ, ಯಾಕೆ ಸೋತೆವು ಎನ್ನುವುದನ್ನು ಹುಡುಕಬೇಕೆ ವಿನಃ ಅದಕ್ಕೆ ಪ್ರೇಕ್ಷಕರನ್ನು ಗುರಿ ಮಾಡಬಾರದು. ಕಳೆದ ವರ್ಷ ಕನ್ನಡದ ಎಷ್ಟೊ ಸಿನಿಮಾಗಳು ಸೋತಿದೆ. ಆದರೆ ಅವರೆಲ್ಲ ಇದೆ ತರ ಮಾತನಾಡಿದ್ದಾರ ಇಲ್ಲ ತಾನೇ.'' - ಸಾ.ರಾ.ಗೋವಿಂದು

ಏನಿದು ವಿವಾದ ?
ಇತ್ತೀಚಿಗೆ 'ರಾಜರಥ' ಸಿನಿಮಾದ ಬಗ್ಗೆ ನಡೆದ ಸಂದರ್ಶನದಲ್ಲಿ ಚಿತ್ರದ ನಾಯಕ ಅನೂಪ್ ಭಂಡಾರಿ, ನಿರ್ದೇಶಕ ನಿರೂಪ್ ಭಂಡಾರಿ ಮತ್ತು ಚಿತ್ರದ ನಾಯಕಿ ಅವಾಂತಿಕಾ ಶೆಟ್ಟಿ ಭಾಗಿಯಾಗಿದ್ದರು. ಈ ವೇಳೆ ನಿರೂಪಕಿ Rapid ರಶ್ಮಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಮೂರು ಮಂದಿ 'ರಾಜರಥ' ಸಿನಿಮಾ ನೋಡದ ಪ್ರೇಕ್ಷಕರಿಗೆ 'ಕಚಡ ನನ್ ಮಕ್ಳು' ಎಂದು ಬೈದಿದ್ದಾರೆ


Click it and Unblock the Notifications











