ಸ್ಟಂಟ್ ಮಾಸ್ಟರ್ ರವಿವರ್ಮ ಈಗ 'ಸಾಹಸ ಸಾರ್ವಭೌಮ'
ಕೇವಲ ಸ್ಯಾಂಡಲ್ ವುಡ್ ನಲ್ಲಷ್ಟೇ ಅಲ್ಲ ಬಾಲಿವುಡ್ ನಲ್ಲೂ ತಮ್ಮ ತಾಖತ್ತು ಏನು ಎಂಬುದನ್ನು ತೋರಿಸಿದವರು ಮಂಡ್ಯ ಹೈದ ರವಿವರ್ಮ. ಭರ್ಜರಿ ಫೈಟ್ ಗಳಿಗೆ, ಸ್ಟಂಟ್ ಗಳಿಗೆ ಹೆಸರಾಗಿರುವ ರವಿವರ್ಮ ಅವರಿಗೆ ಹೊಸ ಬಿರುದನ್ನು ನೀಡಿ ಗೌರವಿಸಲಾಗಿದೆ. ಅದೇ 'ಸಾಹಸ ಸಾರ್ವಭೌಮ'.
ಸಾಹಸ ನಿರ್ದೇಶಕರೊಬ್ಬರಿಗೆ ಈ ರೀತಿಯ ಬಿರುದು ನೀಡಿ ಸನ್ಮಾನಿಸುತ್ತಿರುವುದು ಇದೇ ಮೊದಲು ಅನ್ನಿಸುತ್ತದೆ. ಈ ರೀತಿಯ ಬಿರುದು ನೀಡಿದವರು ಅವರ ಅಭಿಮಾನಿಗಳು ಅಥವಾ ಯಾವುದೇ ಸಂಘ ಸಂಸ್ಥೆಗಳು ಅಲ್ಲವೇ ಅಲ್ಲ ಎಂಬುದು ಇನ್ನೊಂದು ವಿಶೇಷ. [ಸಲ್ಲು, ಶಾರುಖ್ ಗೆ ಸ್ಟಂಟ್ ಮಾಡಿಸೋ ಮಂಡ್ಯ ಹೈದ]

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಆಕ್ಷನ್ ಧಮಾಕಾ 'ರಣವಿಕ್ರಮ' ಚಿತ್ರತಂಡ ಈ ಬಿರುದನ್ನು ರವಿವರ್ಮ ಅವರಿಗೆ ದಯಪಾಲಿಸಿದೆ. ರಣವಿಕ್ರಮ ಚಿತ್ರದ ಪ್ರಮುಖ ಆಕರ್ಷಣೆಯೇ ಫೈಟ್ಸ್. ರವಿವರ್ಮ ಸಂಯೋಜಿಸಿರುವ ಈ ಚಿತ್ರದಲ್ಲಿನ ಫೈಟ್ಸ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದ್ದು ಶಿಳ್ಳೆಗಳ ಸುರಿಮಳೆಯಾಗಿದೆ. [ರಣವಿಕ್ರಮ ಚಿತ್ರವಿಮರ್ಶೆ]
ತೆರೆಯ ಮೇಲಿನ ಸಾಹಸ ಸನ್ನಿವೇಶಗಳಿಗೆ ಪ್ರೇಕ್ಷಕರು ಶಿಳ್ಳೆ ಹೊಡೆಯುತ್ತಿರುತ್ತಾರೆ. ಆದರೆ ಆ ಸನ್ನಿವೇಶಗಳಿಗೆ ಜೀವ ತುಂಬಲು ಹೆಣಗಾಡಿ, ಪೆಟ್ಟುತಿಂದು, ಕೈಕಾಲು ಮುರಿದುಕೊಂಡ ಸಾಹಸ ನಿರ್ದೇಶಕ ಮಾತ್ರ ಬೆಳಕಿಗೆ ಬರುವುದೇ ಇಲ್ಲ. ರವಿವರ್ಮ ಅವರಿಗೆ ಬಿರುದು ಕೊಡುವ ಮೂಲಕ ಹೊಸತನಕ್ಕೆ ನಾಂದಿಹಾಡಿದೆ ರಣವಿಕ್ರಮ ಚಿತ್ರತಂಡ.
ಬಾಲಿವುಡ್, ಟಾಲಿವುಡ್ ಚಿತ್ರರಂಗದಲ್ಲಿ ಕೀರ್ತಿ ಪತಾಕೆ ಹಾರಿಸಿದ ಖ್ಯಾತಿ ರವಿವರ್ಮ ಅವರಿಗೆ ಸಲ್ಲುತ್ತದೆ. ಬಾಲಿವುಡ್ ನ ಬಿಗ್ ಬಿಗ್ ಸ್ಟಾರ್ ಗಳಾದ ಸಲ್ಮಾನ್ ಖಾನ್, ಶಾರುಖ್ ಖಾನ್ ಅಜಯ್ ದೇವಗನ್ ಗೆ ಸ್ಟಂಟ್ ಕಂಪೋಸ್ ಮಾಡಿ ಬಾಲಿವುಡ್ ಚಿತ್ರರಸಿಕರ ಗಮನಸೆಳೆದ ಫೈಟ್ ಮಾಸ್ಟರ್ ರವಿವರ್ಮ. (ಏಜೆನ್ಸೀಸ್)


Click it and Unblock the Notifications











