ಕನ್ನಡ ಚಿತ್ರರಂಗಕ್ಕೆ ಕಂಟಕವಾಯ್ತಾ 17ನೇ ತಾರೀಖು? ಕಾಕತಾಳಿಯವೋ- ವಿಧಿಯಾಟವೋ!
ಕನ್ನಡದ ಮೇರು ನಟ ಪವರ್ ಸ್ಟಾರ್ ಪುನೀತ್ ಇಲ್ಲವಾಗಿರುವುದು ಕನ್ನಡ ಸಿನಿಮಾ ರಂಗಕ್ಕೆ ಆಪ್ತ ಬಳಗಕ್ಕೆ ಕರುನಾಡಿಗೆ ತುಂಬಲಾರದ ದೊಡ್ಡ ನಷ್ಟ. ಅದರಲ್ಲೂ ಇತ್ತೀಚೆಗೆ ಈ ರೀತಿಯಾದಂತಹ ಸಾವಿನ ಸುದ್ದಿಗಳು ಕನ್ನಡ ಸಿನಿಮಾ ರಂಗವನ್ನು ಬಾಧಿಸುತ್ತಿದೆ. ಒಬ್ಬರಾದ ಮೇಲೆ ಒಬ್ಬರು ಸಿನಿಮಾ ಸ್ಟಾರ್ ಗಳು ಕಿರಿಯ ವಯಸ್ಸಿನಲ್ಲಿ ಎಲ್ಲರನ್ನು ಬಿಟ್ಟು ಆಗಲಿ ಹೋಗುತ್ತಿರುವುದು ಮನಸ್ಸಿಗೆ ದೊಡ್ಡ ಆಘಾತವನ್ನು ತಂದಿದೆ. ಪುನೀತ್ ರಾಜಕುಮಾರ್ ಅವರಿಗಿಂತ ಮೊದಲು ಕನ್ನಡದ ಯುವ ನಟರಾದ ಚಿರಂಜೀವಿ ಸರ್ಜಾ ಮತ್ತು ಸಂಚಾರಿ ವಿಜಯ್ ಸಾವು ಕೂಡ ಅತೀವ ನೋವನ್ನು ತಂದಿತ್ತು.
ಚಿರಂಜೀವಿ ಸರ್ಜಾ ಆಗಲಿಕೆಗೆ ಕರುನಾಡು ಕಣ್ಣೀರು ಹಾಕಿತ್ತು. ಚಿರಂಜೀವಿ ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿ ನಂತರ ಚಿಕಿತ್ಸೆ ಫಲ ಕಾರಿಯಾಗದೆ ಕೊನೆಯುಸಿರು ಎಳೆದರು. ಅವರು ಕೂಡ ಕಿರಿಯ ವಯಸ್ಸಿನಲ್ಲೇ ಸಾವನ್ನಪ್ಪಿದ್ದರು. ಸಿನಿಮಾ ಜರ್ನಿಯ ಬಗ್ಗೆ ವೈಯಕ್ತಿಕ ಬದುಕಿನ ಬಗ್ಗೆ ಹತ್ತು ಹಲವು ಬಣ್ಣದ ಕನಸುಗಳನ್ನ ಕಟ್ಟಿಕೊಂಡಿದ್ದಂತಹ ನಟ ಚಿರಂಜೀವಿ. ಆದ್ರೆ ವಿಧಿ ಅವರ ಆಸೆಗಳನ್ನ ಪೂರ್ಣ ಮಾಡಿಕೊಳ್ಳಲು ಬಿಡಲೇ ಇಲ್ಲ.
ನಂತರ ರಸ್ತೆ ಅಪಘಾತದಿಂದ ಆಸ್ಪತ್ರೆಗೆ ಸೇರಿದ ಸಂಚಾರಿ ವಿಜಯ್ ಕೂಡ ಹಿಂದಿರುಗಿ ಬರಲಿಲ್ಲ. ಸಾವು ಬದುಕಿನ ನಡುವೆ ಹೋರಾಡಿ ಚಿಕಿತ್ಸೆ ಪಡೆದುಕೊಂಡರು ಕೂಡ ಸಂಚಾರಿ ವಿಜಯ್ ಉಳಿಯಲಿಲ್ಲ. ಹೀಗೆ ಇಬ್ಬರು ಯುವ ನಟರನ್ನ ಕಳೆದುಕೊಂಡು ಸಿನಿಮಾರಂಗ ನೋವಿನಲ್ಲಿ ಮುಳುಗಿಹೋಗಿತ್ತು. ಈಗ ಇವರ ಸಾಲಿಗೆ ಅಪ್ಪು ಕೂಡ ಸೇರಿಕೊಂಡಿರುವುದು ದೊಡ್ಡ ಆಘಾತಕಾರಿ ಸಂಗತಿ.

ಈ ಮೂವರು ನಟರ ವಿಚಾರದಲ್ಲಿ ಒಂದು ಸಹಜ ವಿಚಾರ ಇದೆ. ಈ ಮೂವರ ಹುಟ್ಟುಹಬ್ಬ ಕೂಡ 17 ನೇ ತಾರೀಖಿನಂದೆ. ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ 1975 ಮಾರ್ಚ್ 17ರಂದು ಹುಟ್ಟಿದ್ದಾರೆ. ನಟ ಚಿರಂಜೀವಿ ಸರ್ಜಾ 1984 ಅಕ್ಟೋಬರ್ 17 ರಂದು ಜನಿಸಿದರು. ಇನ್ನು ಸಂಚಾರಿ ವಿಜಯ್ 1983 ಜುಲೈ 17ರಂದು ಜನಿಸಿದ್ದಾರೆ. ಒಬ್ಬರಾದ ಮೇಲೆ ಒಬ್ಬರು ಇಹಲೋಕ ತ್ಯಜಿಸಿದ ಈ ಯುವನಟರು 17ನೇ ತಾರಿಖಿನಂದೇ ಹುಟ್ಟಿದ್ದಾರೆ ಎನ್ನೋದು ಕಾಕತಾಳಿಯೋ ಅಥವಾ ವಿಧಿಯೋ ಗೊತ್ತಿಲ್ಲ. ಆದರೆ ಎಲ್ಲರನ್ನು ದುಃಖದ ಮಡುವಲ್ಲಿ ಬಿಟ್ಟು ಹೋಗಿದ್ದಾರೆ.
ಇಟಲಿಯಲ್ಲಿ 17ನೇ ತಾರೀಖನ್ನು ಅಶುಭ ಎಂದು ಪರಿಗಣಿಸಲಾಗುತ್ತದೆ. ಪ್ರತಿ ತಿಂಗಳು 17ನೇ ತಾರೀಖಿನಂದು ಹಲವು ಅಂಗಡಿ, ಮಳಿಗೆಗಳಿಗೆ ಬೀಗ ಹಾಕುತ್ತಾರೆ. ದುಷ್ಟ ಶಕ್ತಿಗಳು ಬಾರಬಾರದು ಅನ್ನೊ ನಂಬಿಕೆ ಅವರಲ್ಲಿ ಇದೆ.
ಅದೇನೆ ಇರಲಿ ಮೂವರು ನಟರು ಕೂಡ ಚಿಕ್ಕವಯಸ್ಸಿನಲ್ಲಿಯೇ ಅಕಾಲಿಕ ಮರಣಕ್ಕೆ ತುತ್ತಾಗಿದ್ದಾರೆ. ಈ ಮೂವರ ಕಳೆದುಕೊಂಡು ಕನ್ನಡ ಸಿನಿಮಾರಂಗ ಎಂದು ಅಕ್ಷರಶಃ ಬಡವಾಗಿದೆ ಎಂದೇ ಹೇಳಬಹುದು. ಅದರಲ್ಲೂ ಅಪ್ಪು ಸಾವು ಎಂತಹವರಿಗೂ ಕೂಡ ಜೀರ್ಣಿಸಿಕೊಳ್ಳಲಾಗದ ಕಹಿ ಸತ್ಯ ಆಗಿ ಬಿಟ್ಟಿದೆ. ಚಿತ್ರರಂಗದ ಪ್ರತಿಯೊಬ್ಬರು ಕೂಡ ದೇವರ ವಿಧಿಯಾಟಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.


Click it and Unblock the Notifications











