ಯೋಗರಾಜ್ ಭಟ್ಟರ 'ಡ್ರಾಮಾ'ಕ್ಕೆ ಸಂಪತ್ ರಾಜ್

ಆದರೆ ಈಗ ಭಟ್ಟರ ಕಡೆಯಿಂದ ಪಕ್ಕಾ ಸುದ್ದಿ ನಮ್ಮ 'ಒನ್ ಇಂಡಿಯಾ ಕನ್ನಡ'ಕ್ಕೆ ಲಭ್ಯವಾಗಿದೆ. ಪ್ರಕಾಶ್ ರೈ ಜಾಗಕ್ಕೆ ಬರುತ್ತಿರುವವರು ಮತ್ತೊಬ್ಬ ಕನ್ನಡಿಗರೇ ಆಗಿರುವ ಸಂಪತ್ ರಾಜ್ (ಸಂಪತ್ ಕುಮಾರ್). ಕನ್ನಡ ಮೂಲದ ಈ ನಟ ಮಿಂಚುತ್ತಿರುವುದು ತಮಿಳು ಚಿತ್ರರಂಗದಲ್ಲಿ. ಈ ಮೊದಲು ಕನ್ನಡದಲ್ಲಿ ಜಾಕಿ ಹಾಗೂ ಜರಾಸಂಧ ಚಿತ್ರಗಳಲ್ಲಿ ನಟಿಸಿದ್ದಾಗಿದೆ. ಇದೀಗ ಭಟ್ಟರ ಡ್ರಾಮಾಕ್ಕೆ ಬರಲಿದ್ದಾರೆ.
ತಮಿಳಿನ 'ಅರಣ್ಯ ಕಾಂಡಂ (Aaranya Kaandam)' ಚಿತ್ರ ನೋಡಿ ಯೋಗರಾಜ್ ಭಟ್ಟರು ಥ್ರಿಲ್ ಆಗಿದ್ದಾರೆ. ಅದರಲ್ಲೂ, ಆ ಚಿತ್ರದಲ್ಲಿ ನಟಿಸಿರುವ ಸಂಪತ್ ರಾಜ್ ನಟನೆ ಭಟ್ಟರಿಗೆ ಸಖತ್ ಇಷ್ಟವಾಗಿದೆ. ಹೀಗಾಗಿ ನಟ ಸಂಪತ್ ಕುಮಾರ್ ಅವರನ್ನು ತಮ್ಮ ಡ್ರಾಮಾಕ್ಕೆ ಸೇರಿಸಿಕೊಳ್ಳಲು ಭಟ್ಟರು ನಿರ್ಧರಿಸಿದ್ದಾರೆ. ಈಗ ಬಾಕಿಯಿರುವುದು ಆ ಭಾಗದ ಚಿತ್ರೀಕರಣ ಮಾತ್ರ.
ಹೀಗಾಗಿ ಸದ್ಯದಲ್ಲೇ ಸಂಪತ್ ರಾಜ್ ಭಟ್ಟರ ಡ್ರಾಮಾ ಟೀಮನ್ನು ಸೇರಿಕೊಳ್ಳಲಿದ್ದಾರೆ. ಈಗಾಗಲೇ ಮಿಕ್ಕ ಭಾಗದ ಶೂಟಿಂಗ್ ಮುಗಿಸಿರುವ ಯೋಗರಾಜ್ ಭಟ್ಟರು, ಸಂಪತ್ ಬರುವುದನ್ನೇ ಕಾಯುತ್ತಿದ್ದಾರೆ. ಸಂಪತ್ ಭಾಗದ ಚಿತ್ರೀಕರಣ ಮುಗಿಸಿ ಶೂಟಿಂಗಿಗೆ ಫುಲ್ ಸ್ಟಾಪ್ ಇಟ್ಟು ತಕ್ಷಣ ಭಟ್ಟರು ಕುಂಬಳಕಾಯಿ ಒಡೆಯಲಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಜೋಡಿಯ ಈ ಚಿತ್ರದಲ್ಲಿ ನೀನಾಸಂ ಸತೀಶ್ ಮತ್ತು ಸಿಂಧು ಲೋಕನಾಥ್ ಕೂಡ ಪ್ರಮುಖ ಪಾತ್ರಗಳಲ್ಲಿದ್ದಾರೆ. ಇದರಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ತಂದೆಯ ಪಾತ್ರದಲ್ಲಿ ಪ್ರಕಾಶ್ ರೈ ನಟಿಸಬೇಕಾದ ಪತ್ರಕ್ಕೀಗ ಸಂಪತ್ ಆಯ್ಕೆಯಾಗಿದ್ದಾರೆ.
ಜಾಕಿ ಮತ್ತು ಜರಾಸಂಧ ಚಿತ್ರಗಳ ಮೂಲಕ ಕನ್ನಡಿಗರಿಗೆ ಪರಿಚಯವಾಗಿದ್ದ ಸಂಪತ್, ಈಗ ಯೋಗರಾಜ್ ಭಟ್ಟರ ಡ್ರಾಮಾ ಚಿತ್ರದಲ್ಲಿ ನಟಿಸಲು ಅವಕಾಶ ಸಿಕ್ಕಿದ್ದಕೆ ಸಖತ್ ಖುಷಿಯಾಗಿದ್ದಾರಂತೆ. ವಿ. ಹರಿಕೃಷ್ಣ ಸಂಗೀತ, ಕೃಷ್ಣ ಕ್ಯಾಮರಾ ಹೊಂದಿರುವ ಈ ಚಿತ್ರ ಜುಲೈ ಕೊನೆ ಅಥವಾ ಆಗಸ್ಟ್ ಮೊದಲ ವಾರದಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications











