ವಿಷ್ಣುವರ್ಧನ್ ಹುಟ್ಟುಹಬ್ಬಕ್ಕೆ ಸಂಚಾರಿ ವಿಜಯ್ 'ದಾದಾ ನೆನಪು'
ಇಂದು ನಟ ವಿಷ್ಣುವರ್ಧನ್ ಹುಟ್ಟುಹಬ್ಬ. ಸಾಹಸಸಿಂಹನ ಹುಟ್ಟುಹಬ್ಬವನ್ನು ಖುಷಿಯಿಂದ ಆಚರಿಸುತ್ತಿದ್ದಾರೆ ಅಭಿಮಾನಿಗಳು. ಕನ್ನಡ ಚಿತ್ರರಂಗದ ಹಲವು ನಟ-ನಟಿಯರು ಸಹ ವಿಷ್ಣುವರ್ಧನ್ ಅವರ ಪಕ್ಕಾ ಅಭಿಮಾನಿಗಳು. ಹಲವರು ಇಂದು ವಿಷ್ಣು ಹುಟ್ಟುಹಬ್ಬಕ್ಕೆ ಶುಭಾಶಯಗಳನ್ನು ತಿಳಿಸಿದ್ದಾರೆ.
ನಟ ಸಂಚಾರಿ ವಿಜಯ್, ತಮ್ಮ ಮೆಚ್ಚಿನ ನಟನ ಹುಟ್ಟುಹಬ್ಬದ ದಿನದಂದು ತುಸು ಭಿನ್ನವಾಗಿ ಶುಭಾಶಯ ಸಲ್ಲಿಸಿದ್ದಾರೆ. ಸಂಚಾರಿ ವಿಜಯ್ ಅವರು ವಿಷ್ಣುವರ್ಧನ್ ಅವರ ದಾದಾ ಪೋಸ್ಟರ್ ಅನ್ನು ಚಿತ್ರ ಬಿಡಿಸಿ ತಮ್ಮ ಅಭಿಮಾನ ಪ್ರಕಟಿಸಿದ್ದಾರೆ.
ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ವಿಷ್ಣು ಅವರ ಬಗ್ಗೆ ಅಭಿಮಾನ ಮೊಳೆತ ಬಗ್ಗೆ, ಹಾಗೂ ವಿಷ್ಣು ಅವರ ಸಿನಿಮಾಗಳೊಟ್ಟಿಗಿನ ನೆನಪನ್ನು ಹಂಚಿಕೊಂಡಿದ್ದಾರೆ ಸಂಚಾರಿ ವಿಜಯ್.

ಪೋಲಿಸರಿಂದ ಲಾಠಿ ಏಟು ತಿಂದು ಅಂತಿಮ ದರ್ಶನ
'ವಿಷ್ಣು ಸರ್ ಬದುಕಿದ್ದಾಗ ಒಮ್ಮೆಯೂ ಅವರನ್ನೂ ಹತ್ತಿರದಿಂದ ನೋಡಿ ಮಾತನಾಡಿಸುವ ಅವಕಾಶ ಒದಗಿಬರಲಿಲ್ಲ ಆದರೆ ಅವರು ಕಾಲವಾದ ಮಾರನೆಯ ದಿನ ಕೊನೆಯ ಅವಕಾಶ ಸಿಕ್ಕಿದ್ದು ನ್ಯಾಷನ್ ಕಾಲೇಜು ಮೈದಾನದಲ್ಲಿ, ಅಲ್ಲಿಯೂ ಆ ಜನ ಜಂಗುಳಿಯಲ್ಲಿ ಪೊಲೀಸರಿಂದ ಲಾಠಿ ಏಟು ತಿಂದು ಹರಿದ ಚಪ್ಪಲಿ ಎಳೆದಾಡಿಕೊಂಡು ಸಿಕ್ಕ ಅವಕಾಶದಲ್ಲೇ ಅಂತಿಮ ದರ್ಶನ ಮಾಡಿ ಸಮಾಧಾನ ಮಾಡಿಕೊಂಡಿದ್ದಾಯ್ತು' ಎಂದಿದ್ದಾರೆ ಸಂಚಾರಿ ವಿಜಯ್.

ವಿಷ್ಣುವರ್ಧನ್ ಅವರನ್ನು ಅನುಕರಣೆ ಮಾಡುತ್ತಿದ್ದರಂತೆ ಸಂಚಾರಿ ವಿಜಯ್
'ಚಿಕ್ಕಂದಿನಲ್ಲಿ "ದಾದಾ" ಚಿತ್ರ ತೆರೆಕಂಡಾಗ ನೋಡಿ ಹೊರಬಂದು ಅದೇ ಭಂಗಿಯಲ್ಲಿ ನಡೆಯೋದು, ಮಾತಾಡುವುದು, ಕೈ ತಿರುಗಿಸಿ ಅನುಕರಣೆ ಮಾಡೋ ಹುಚ್ಚು ಹತ್ತಿಸ್ಕೊಂಡಿದ್ವಿ . ಕನ್ನಡ ಸಿನೆಮಾಗಳ ಶೀರ್ಷಿಕೆಯನ್ನು ಮುದ್ದಾಗಿ ಬರೆಯೋ ಅಭ್ಯಾಸ ಬೆಳೆಸಿಕೊಂಡು ಬಂದಿದ್ದ ನಾನು ಈ ಚಿತ್ರದ ಶೀರ್ಷಿಕೆಯನ್ನು ಪೋಸ್ಟರ್ ನಲ್ಲಿ ಹೇಗಿತ್ತೋ ಹಾಗೆ ಬರೆಯುವುದನ್ನು ರೂಢಿಸಿಕೊಂಡಿದ್ದೆ, ಯಾರೇ ಬಂದು ಕೇಳಿದರೂ ಸಹ ಇಲ್ಲಾ ಅನ್ನದೆ ಬರೆದು ಕೊಡುತ್ತಿದ್ದೆ' ಎಂದಿರುವ ಸಂಚಾರಿ ವಿಜಯ್ ಫೇಸ್ಬುಕ್ನಲ್ಲಿ ದಾದಾ ಪೋಸ್ಟರ್ ಅನ್ನು ತಿದ್ದಿದ ಚಿತ್ರ ಹಂಚಿಕೊಂಡಿದ್ದಾರೆ.

ವಿಷ್ಣು ಗುಣಗಳಿಂದ ಪ್ರಭಾವಿತರಾಗಿದ್ದ ಸಂಚಾರಿ ವಿಜಯ್
'ಹೀಗೆ ತಿಳುವಳಿಕೆಯಿಲ್ಲದ ವಯಸ್ಸಲ್ಲೇ ಗೊತ್ತಿಲ್ಲದೇ ಅವರ ಚಿತ್ರದ ಶೀರ್ಷಿಕೆಗಳನ್ನು ಬರೆಯುತ್ತ ಸಿನಿಮಾಗಳನ್ನು ನೋಡುತ್ತಾ ಸಾವಿರಾರು ಜನರಲ್ಲಿ ನಾನೂ ಒಬ್ಬ ವಿಷ್ಣು ಸರ್ ಅಭಿಮಾನಿಯಾದೆ. ಮುಂದೆ ಅವರ ನಡೆ-ನುಡಿ ಕಷ್ಟದಲ್ಲಿರುವವರನ್ನು ಕಂಡು ಮರುಗುವ ಮನಸ್ಸು, ಹೊಸಬರನ್ನು ಪ್ರೋತ್ಸಾಹಿಸಿ ಬೆನ್ನು ತಟ್ಟುವ ಮಾನವೀಯ ಗುಣಗಳನ್ನು ಕೇಳಿ ತುಂಬಾ ಪ್ರಭಾವಿತನಾಗಿದ್ದೆ' ಎಂದು ನೆನಪಿಸಿಕೊಂಡಿದ್ದಾರೆ ವಿಜಯ್.
Recommended Video

ವಿಷ್ಣುವರ್ಧನ ಹೇಳಿದ್ದ ಮಾತು ವಿಜಯ್ಗೆ ಸ್ಪೂರ್ತಿ
'ವಿಷ್ಣುವರ್ಧನ್ ಅವರು ಹೇಳಿದ ಮಾತೊಂದು, 'ಯಾರಿಗಾದರೂ ಸಹಾಯ ಮಾಡಿದರೆ ಅದನ್ನು ಅಲ್ಲಿಗೇ ಮರೆತುಬಿಡು, ಸಹಾಯ ಮಾಡಿದೆನೆಂಬ ಸಣ್ಣ ಅಹಂ ಕೂಡ ನಿನ್ನೊಳಗೆ ಇರದಂತೆ'. ಈ ಮಾತು ನನ್ನಂತಹ ಹಲವಾರು ಜನರ ಮೇಲೆ ಪ್ರಭಾವ ಬೀರಿದೆ. ಇಂದು ನಮ್ಮೊಂದಿಗೆ ನೀವಿದ್ದಿದ್ದರೆ ಇಂದಿನ ಯುವ ಪೀಳಿಗೆಗೆ ಮತ್ತಷ್ಟು ಸ್ಪೂರ್ತಿಯಾಗುತ್ತಿದ್ದೀರಿ. ಸ್ನೇಹಜೀವಿ ಕರುನಾಡ ಯಜಮಾನರೇ ನಿಮಗೆ ಮತ್ತೊಮ್ಮೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು' ಎಂದು ಶುಭಾಶಯ ಕೋರಿದ್ದಾರೆ ವಿಜಯ್.


Click it and Unblock the Notifications











