ದೀಪಾವಳಿ ಹಬ್ಬಕ್ಕೆ ಹೊಸ ಸಿನಿಮಾ ಘೋಷಿಸಿದ ಸಂಚಾರಿ ವಿಜಯ್
ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಹೊಸ ಚಿತ್ರ ಕೈಗೆತ್ತಿಕೊಂಡಿದ್ದಾರೆ. ಈ ಚಿತ್ರಕ್ಕೆ ಅವಸ್ಥಾಂತರ ಎಂದು ಹೆಸರಿಡಲಾಗಿದ್ದು, ದೀಪಾವಳಿ ಹಬ್ಬದ ಪ್ರಯುಕ್ತ ಟೈಟಲ್ ಪೋಸ್ಟರ್ ಬಿಡುಗಡೆಯಾಗಿದೆ.
ಲಾಕ್ಡೌನ್ ನಂತರ ಸಂಚಾರಿ ವಿಜಯ್ ಸಹಿ ಮಾಡಿರುವ ಮೊದಲ ಸಿನಿಮಾ ಇದಾಗಿದೆ. ಜಿ.ದೀಪಕ್ ಕುಮಾರ್ ಎಂಬ ನವ ನಿರ್ದೇಶಕ ಈ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.
ಈ ಹಿಂದೆ 'ಮಠ' ಖ್ಯಾತಿಯ ಗುರುಪ್ರಸಾದ್ ಅವರ ಗರಡಿಯಲ್ಲಿ ಪಳಗಿದ ಪ್ರತಿಭಾವಂತ. ಜೊತೆಗೆ ಮಲಯಾಳಂನ ಪ್ರಸಿದ್ಧ ನಟರಾದ ಮೋಹನ್ ಲಾಲ್ ಮತ್ತು ಮಮ್ಮುಟಿಯವರ ಚಿತ್ರಗಳಿಗೆ ಕೆಲಸ ಮಾಡಿ ಅನುಭವ ಇರುವ ಇವರು ಸಾಕಷ್ಟು ಡಾಕ್ಯುಮೆಂಟರಿ ಮತ್ತು ಆಡ್ ಫಿಲ್ಮ್ಸ್ ಮಾಡಿದ್ದಾರೆ. ಇದು ಇವರ ಚೊಚ್ಚಲ ಚಿತ್ರ.

ಹದಿಹರೆಯದ ಯುವಕನೊಬ್ಬ ತನಗರಿವಿಲ್ಲದೆ ಹುಟ್ಟುವ ಬಯಕೆಗಳು ಕಾಮನೆಗಳು ಹೇಗೆ ಅವನನ್ನು ಅತಂತ್ರ ಸ್ಥಿತಿಗೆ ತಳ್ಳುತ್ತದೆ ಮತ್ತು ಅದರಿಂದ ಏನೆಲ್ಲಾ ಪಜೀತಿ, ಅವಸ್ಥೆ, ಅನಾಹುತಗಳು ಜರುಗುತ್ತವೆ ಎನ್ನುವುದನ್ನು ತಿಳಿ ಹಾಸ್ಯದ ಮೂಲಕ ಒಂದು ಸಂದೇಶ ಕಟ್ಟಿ ಕೊಡುವ ಪ್ರಯತ್ನ ಮಾಡಿದ್ದಾರೆ.
ಸಂಚಾರಿ ವಿಜಯ್ಗೆ ನಾಯಕಿಯಾಗಿ ರಂಜನಿ ರಾಘವನ್ ಮತ್ತು ದಿಶಾ ಕೃಷ್ಣಯ್ಯ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಡಿಸೆಂಬರ್ ಕೊನೆಯ ವಾರದಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಅಂದ್ಹಾಗೆ, ಪ್ರಜ್ವಲ್ ದೇವರಾಜ್ ನಟನೆಯ 'ಜಂಟಲ್ಮ್ಯಾನ್' ಚಿತ್ರದಲ್ಲಿ ಸಂಚಾರಿ ವಿಜಯ್ ಕೊನೆಯದಾಗಿ ತೆರೆ ಮೇಲೆ ಕಾಣಿಸಿಕೊಂಡಿದ್ದರು. ಆಟಕ್ಕುಂಟು ಲೆಕ್ಕಕ್ಕಿಲ್ಲ, ಮೇಲೊಬ್ಬ ಮಾಯಾವಿ ಚಿತ್ರಗಳಲ್ಲಿ ಸಹ ಸಂಚಾರಿ ವಿಜಯ್ ನಟಿಸುತ್ತಿದ್ದಾರೆ.


Click it and Unblock the Notifications











