ಈ ವರ್ಷ ಚಿತ್ರರಂಗ ಕಳೆದುಕೊಂಡ 'ಅನರ್ಘ್ಯ ರತ್ನ'ಗಳು
Recommended Video

ಕನ್ನಡ ಸಿನಿಮಾಗಳ ಯಶಸ್ಸಿನ ಪಯಣದ ನಡುವೆ ಚಿತ್ರರಂಗದ ಕೆಲವು ಸಾಧಕರನ್ನ ಕಳೆದುಕೊಳ್ಳಬೇಕಾಯಿತು. ಕನ್ನಡ ಸಿನಿಲೋಕದ ಹಿರಿಯ ನಿರ್ಮಾಪಕರು, ಖ್ಯಾತ ಗಾಯಕರು, ಪ್ರತಿಭಾನ್ವಿತ ಯುವ ನಟರು, ಯುವ ನಿರ್ದೇಶಕರು ವಿಧಿಯ ಆಟಕ್ಕೆ ಬಲಿಯಾದರು.
ಪಾರ್ವತಮ್ಮ ರಾಜ್ ಕುಮಾರ್, ಸುದರ್ಶನ್, ಎಲ್.ಎನ್ ಶಾಸ್ತ್ರಿ, ಬಿವಿ ರಾಧಾ, ಪದ್ಮಾ ಕುಮುಟಾ ಸೇರಿದಂತೆ ಇನ್ನು ಹಲವು ಚಿತ್ರೋಧ್ಯಮಿಗಳು ಇಹಲೋಕ ತ್ಯಜಿಸಿದರು.
ಕೇವಲ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಮಾತ್ರವಲ್ಲ, ಪರಭಾಷೆಯಲ್ಲೂ ಕೆಲವು ಖ್ಯಾತನಾಮರು ಈ ವರ್ಷ ಕಣ್ಮೆರೆಯಾದರು. ವರ್ಷಾಂತ್ಯದಲ್ಲಿ ನಿಂತು ಹಿಂತಿರುಗಿ ನೋಡಿದಾಗ ಈ ಕಲಾವಿದರ ನೆನಪು ಕಾಡುತ್ತಿದೆ. ಈ ವರ್ಷದಲ್ಲಿ ಚಿತ್ರರಂಗ ಕಂಡ ಸಾವು ನೋವುಗಳ ಕಹಿ ನೆನಪು ನಿಮ್ಮ ಮುಂದಿದೆ.

ಚಿತ್ರರಂಗವನ್ನ ಕಾಡಿದ 'ಪಾರ್ವತಮ್ಮ'ನ ಸಾವು
ಡಾ ರಾಜ್ ಕುಮಾರ್ ಅವರ ಪತ್ನಿ, ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ಅವರು ಮಾರ್ಚ್ 31 ರಂದು ಇಹಲೋಕ ತ್ಯಜಿಸಿದರು. ಸುಮಾರು 80ಕ್ಕೂ ಅಧಿಕ ಚಿತ್ರಗಳನ್ನ ನಿರ್ಮಾಣ ಮಾಡಿದ್ದಾರೆ. ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಸೇರಿದಂತೆ ಅನೇಕ ಪ್ರತಿಭೆಗಳನ್ನ ಕನ್ನಡ ಚಿತ್ರರಂಗಕ್ಕೆ ಪರಚಯಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.

ಪದ್ಮಾ ಕುಮುಟ
ರಾಜ್ಯ ಪ್ರಶಸ್ತಿ ವಿಜೇತೆ ನಟಿ ಪದ್ಮಾ ಕುಮುಟಾ (58) ಮಾರ್ಚ್ 7 ರಂದು ಹೃದಯಾಘಾತದಿಂದ ನಿಧನರಾದರು. ರಂಗಭೂಮಿ ಹಾಗೂ ಚಲನಚಿತ್ರ ನಟಿಯಾಗಿದ್ದ ಪದ್ಮಾ ಕುಮುಟ ಅವರು, 1975 ರಲ್ಲಿ ತೆರೆಕಂಡಿದ್ದ 'ಚೋಮನದುಡಿ' ಚಿತ್ರ ಅಭಿನಯಕ್ಕಾಗಿ ಅತ್ಯುತ್ತಮ ಪೋಷಕ ನಟಿ ರಾಜ್ಯ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು. ಉಳಿದಂತೆ 'ಬಯಲುದಾರಿ', 'ಅರಿವು', 'ಫಲಿತಾಂಶ', 'ಅವಸ್ಥೆ', 'ಮೌನಗೀತೆ', 'ದೇವತಾ ಮನುಷ್ಯ', 'ಶಿವ ಮೆಚ್ಚಿದ ಕಣ್ಣಪ್ಪ', 'ಕಳ್ಳ ಮಳ್ಳ', 'ಸೋಲಿಲ್ಲದ ಸರದಾರ', 'ಬೇವು ಬೆಲ್ಲ', 'ಶ್ರೀ ಮಂಜುನಾಥ', 'ಲಕ್ಕಿ' ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದರು.

ಗಾಯಕ ಎಲ್.ಎನ್ ಶಾಸ್ತ್ರಿ
ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಕನ್ನಡ ಚಿತ್ರರಂಗದ ಹಿರಿಯ ಗಾಯಕ ಎನ್.ಎಲ್. ಶಾಸ್ತ್ರಿಯವರು ಆಗಸ್ಟ್ 30 ರಂದು ಸಾವನ್ನಪ್ಪಿದರು. 1996ರಲ್ಲಿ ತೆರೆಕಂಡ ಕಾಶೀನಾಥ್ ಅಭಿನಯದ 'ಅಜಗಜಾಂತರ' ಚಿತ್ರದಿಂದ ತಮ್ಮ ಸಂಗೀತ ಪಯಣವನ್ನು ಆರಂಭಿಸಿದ ಶಾಸ್ತ್ರಿಯವರು ಇದುವರೆಗೂ 300ಕ್ಕೂ ಹೆಚ್ಚು ಗೀತೆಗಳನ್ನು ಹಾಡಿರುವುದಲ್ಲದೆ 25 ಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತವನ್ನು ನೀಡಿದ್ದಾರೆ.

ಲಂಬು ನಾಗೇಶ್ ಸಾವು
ಕನ್ನಡ ಚಿತ್ರರಂಗದ ಹೆಸರಾಂತ ಪೋಷಕ ನಟ ಲಂಬು ನಾಗೇಶ್ ಅವರು ಸೆಪ್ಟಂಬರ್ 1 ರಂದು ಲಿವರ್ ಸಮಸ್ಯೆಯಿಂದ ಸಾವನ್ನಪ್ಪಿದರು. ಕನ್ನಡದಲ್ಲಿ ಸುಮಾರು 100ಕ್ಕೂ ಹೆಚ್ಚು ಸಿನಿಮಾಗಳನ್ನು ಮಾಡಿದ್ದ ನಾಗೇಶ್ ಅವರು ಚಿತ್ರರಂಗದಲ್ಲಿ ಲಂಬು ನಾಗೇಶ್ ಅಂತಲೇ ಖ್ಯಾತಿಗಳಿಸಿಕೊಂಡಿದ್ದರು. 1992 ರಲ್ಲಿ ರಿಲೀಸ್ ಆದ 'ಪೃಥ್ವಿರಾಜ್' ಸಿನಿಮಾದ ಮೂಲಕ ಲಂಬು ನಾಗೇಶ್ ಮೊದಲ ಬಾರಿಗೆ ಸಿನಿಮಾದಲ್ಲಿ ನಟನೆ ಮಾಡಿದ್ದರು. ದೇವರಾಜ್ ಅಭಿನಯದ 'ಹುಲಿಯಾ', ಸಾಯಿಕುಮಾರ್ ನಟನೆಯ 'ಪೋಲೀಸ್ ಸ್ಟೋರಿ-2' ಸೇರಿದಂತೆ ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳ ಪ್ರಮುಖ ಪಾತ್ರದಲ್ಲಿ ಲಂಬು ನಾಗೇಶ್ ಕಾಣಿಸಿಕೊಂಡಿದ್ದರು.

'ವಿಜಯನಗರದ ವೀರಪುತ್ರ' ಸುದರ್ಶನ್
ಕನ್ನಡದ ಹಿರಿಯ ನಟ ಆರ್.ಎನ್.ಸುದರ್ಶನ್ (78) ಅವರು ಅನಾರೋಗ್ಯದ ಹಿನ್ನೆಲೆ ಸೆಪ್ಟಂಬರ್ 8 ರಂದು ವಿಧಿವಶರಾದರು. ಸುದರ್ಶನ್ ಅವರು ಕನ್ನಡ, ತೆಲುಗು, ಹಿಂದಿ ಹಾಗೂ ಮಲಯಾಳಂ ಸೇರಿದಂತೆ ಸುಮಾರು 250ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದರು. 'ವಿಜಯನಗರ ವೀರಪುತ್ರ', 'ನಗುವ ಹೂವು', 'ಮರೆಯಾದ ದೀಪಾವಳಿ', 'ಮಠ', 'ಸೂಪರ್' ಅಂತಹ ಚಿತ್ರಗಳಲ್ಲಿ ಸುದರ್ಶನ್ ನಟಿಸಿದ್ದರು.

ಕಿರುತೆರೆ ಕಲಾವಿದರ ದುರ್ಮರಣ
ಆಗಸ್ಟ್ 24 ರಂದು ನಡೆದ ರಸ್ತೆ ಅಪಘಾತದಲ್ಲಿ ಕಿರುತೆರೆ ಕಲಾವಿದರಾದ ಜೀವನ್ ಮತ್ತು ರಚನಾ ದುರ್ಮರಣ ಹೊಂದಿದ್ದರು. ಕುಕ್ಕೆ ಸುಬ್ರಮಣ್ಯ ದೇವಸ್ಥಾನಕ್ಕೆ ಹೊರಟಿದ್ದ ವೇಳೆ ಮಾರ್ಗ ಮಧ್ಯೆ ಅಪಘಾತ ಸಂಭವಿಸಿತ್ತು.

ಯುವ ನಟ ಧ್ರುವ ಶರ್ಮಾ
ಕನ್ನಡದ ಪ್ರತಿಭಾನ್ವಿತ ನಟ ಧ್ರುವ ಶರ್ಮಾ ಅನುಮಾನಸ್ಪದವಾಗಿ ಆಗಸ್ಟ್ 1 ರಂದು ಸಾವುಗೀಡಾದರು. ಕಿವುಡು ಹಾಗೂ ಮೂಗ ಸಮಸ್ಯೆ ಇದ್ದರೂ, ಲಿಪ್ ಸಿಂಕ್ ಮೂಲಕ ಅಭಿನಯಿಸುತ್ತಿದ್ದರು ಧ್ರುವ ಶರ್ಮಾ. ನಟ ಸುರೇಶ್ ಶರ್ಮ ರವರ ಪುತ್ರ. 'ಸ್ನೇಹಾಂಜಲಿ', 'ತಿಪ್ಪಜ್ಜಿ ಸರ್ಕಲ್' ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದರು. ನಟನೆ ಜೊತೆಗೆ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ನಲ್ಲೂ ತನ್ನದೇ ಛಾಪು ಮೂಡಿಸಿದ್ದರು.

ಹಿರಿಯ ನಟಿ ಬಿವಿ ರಾಧ
ಕನ್ನಡ ಚಿತ್ರರಂಗದ ಹಿರಿಯ ನಟಿ ಬೆಂಗಳೂರು ವಿಜಯ ರಾಧಾ (70) ಸೆಪ್ಟಂಬರ್ 9 ರಂದು ಹೃದಯಾಘಾತಕ್ಕೊಳಗಾಗಿ ಇಹಲೋಕ ತ್ಯಜಿಸಿದರು. ಹಿರಿಯ ನಟ ಕೆಎಸ್ಎಲ್ ಸ್ವಾಮಿ ಅವರ ಪತ್ನಿ ಬಿ.ವಿ. ರಾಧಾ. ಡಾ ರಾಜ್ ಕುಮಾರ್ ಅವರ ನವಕೋಟಿ ನಾರಾಯಣ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಬಿ. ವಿ ರಾಧಾ ಅವರು ಕನ್ನಡ, ತೆಲುಗು, ತಮಿಳು, ಮಲಯಾಳಂ, ತುಳು ಹಾಗೂ ಹಿಂದಿ ಭಾಷೆ ಚಿತ್ರಗಳಲ್ಲಿ ನಟಿಸಿದ್ದರು. 250 ಕನ್ನಡ ಚಿತ್ರಗಳು ಸೇರಿದಂತೆ 300ಕ್ಕೂ ಅಧಿಕ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು.

ಚೆಲುವಿನ ಚಿತ್ತಾರದ ನಟ ರಾಕೇಶ್
'ಚೆಲುವಿನ ಚಿತ್ತಾರ' ಚಿತ್ರದ 'ಬುಲ್ಲಿ' ಪಾತ್ರದ ಮೂಲಕ ಖ್ಯಾತಿ ಗಳಿಸಿದ ನಟ ರಾಕೇಶ್ ಗ್ಯಾಂಗ್ರಿನ್ ರೋಗಕ್ಕೆ ತುತ್ತಾಗಿ ಅಕ್ಟೋಬರ್ 2 ರಂದು ವಿಧಿವಶರಾದರು. ನಟ ರಾಕೇಶ್, ಹಿರಿಯ ನಟಿ ಆಶಾರಾಣಿ ಪುತ್ರ. 'ಚೆಲುವಿನ ಚಿತ್ತಾರ', ಶಿವರಾಜ್ ಕುಮಾರ್ ಅಭಿನಯದ 'ಬಂಧುಬಳಗ', 'ಭಜರಂಗಿ', 'ದುನಿಯಾ ವಿಜಯ್ ಅಭಿನಯದ 'ಚಂಡ', ಯಶ್ ಅವರ 'ಮೊದಲ ಸಲ' ಸೇರಿದಂತೆ ಸುಮಾರು 40ಕ್ಕೂ ಹೆಚ್ಚು ಚಿತ್ರದಲ್ಲಿ ನಟಿಸಿದ್ದರು. ಸದ್ಯ, 'ಧೂಮಪಾನ' ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದರು.

ಜ್ಯೂಲಿ ನಿರ್ದೇಶಕಿ ಪೂರ್ಣಿಮಾ ಸಾವು
ಕನ್ನಡದ ಹೆಸರಾಂತ ನಿರ್ದೇಶಕಿ ಪೂರ್ಣಿಮಾ ಮೋಹನ್ (48) ಅವರು ಅಕ್ಟೋಬರ್ 13 ರಂದು ಹೃದಯ ಸ್ತಂಭನದಿಂದ ನಿಧನರಾದರು. ಮಾಜಿ ಸಂಸದೆ, ನಟಿ ರಮ್ಯಾ ಅಭಿನಯಿಸಿದ್ದ 'ಜೂಲಿ' ಚಿತ್ರವನ್ನ ಪೂರ್ಣಿಮಾ ಮೋಹನ್ ಅವರು ನಿರ್ದೇಶನ ಮಾಡಿದ್ದರು. ಪೂರ್ಣಿಮಾ ಮೋಹನ್ ಅವರ ನಿರ್ಮಾಪಕ ಕೆ.ಸಿ.ಎನ್ ಮೋಹನ್ ಅವರ ಪತ್ನಿ. ಕನ್ನಡ ಚಲನಚಿತ್ರ ನಿರ್ಮಾಣ, ಹಂಚಿಕೆ ಮತ್ತು ಪ್ರದರ್ಶನ ವಲಯದಲ್ಲಿ ದೊಡ್ಡ ಹೆಸರು ಮಾಡಿರುವ ಕೆ.ಸಿ.ಎನ್. ಗೌಡರ ಸೊಸೆ.

ಹಿರಿಯ ನಟ ವೇಣುಗೋಪಾಲ್ ವಿಧಿವಶ
ಕನ್ನಡದ ಸಾಕಷ್ಟು ಸಿನಿಮಾಗಳಲ್ಲಿ ಪೋಷಕ ನಟನಾಗಿ, ಖಳನಟನಾಗಿ ಅಭಿನಯಿಸಿದ್ದ ಹಿರಿಯ ಕಲಾವಿದ ವೇಣುಗೋಪಾಲ್ ಅವರು ಅಕ್ಟೋಬರ್ 24 ರಂದು ಹೃದಯಾಘಾತದಿಂದ ವಿಧಿವಶರಾದರು. ಐವತ್ತಕ್ಕೂ ಹೆಚ್ಚು ಸಿನಿಮಾ ಮಾಡಿದ್ದ ವೇಣುಗೋಪಾಲ್ ಅವರು ಕೊನೆಯದಾಗಿ 'ಶುದ್ದಿ' ಚಿತ್ರದಲ್ಲಿ ನಟಿಸಿದ್ದರು. ವೇಣುಗೋಪಾಲ್ ಅವರು 'ಸೂರಪ್ಪ', 'ರಾಜನರಸಿಂಹ', 'ಕೋಟಿಗೊಬ್ಬ' ಸೇರಿದಂತೆ ವಿಷ್ಣುವರ್ಧನ್ ಅವರ ಅನೇಕ ಚಿತ್ರಗಳಲ್ಲಿ ನಟಿಸಿದ ಖ್ಯಾತಿ ಹೊಂದಿದ್ದರು. ಸಿನಿಮಾದ ಜೊತೆಗೆ 'ಮನೆತನ', 'ಜನನಿ' ಸೇರಿದಂತೆ ಕೆಲ ಧಾರಾವಾಹಿಗಳಲ್ಲಿಯೂ ಕಾಣಿಸಿಕೊಂಡಿದ್ದರು.

ಬಾಲಿವುಡ್ ನ ನೆಚ್ಚಿನ 'ಅಮ್ಮ' ಇನ್ನಿಲ್ಲ
ಮರಾಠಿ ಹಾಗೂ ಹಿಂದಿ ಚಿತ್ರಗಳಲ್ಲಿ ಅಭಿನಯಿಸಿದ್ದ ಖ್ಯಾತ ನಟಿ ರೀಮಾ ಲಾಗೂ (59) ಅವರು ಹೃದಯಾಘಾತದಿಂದ ಮೇ 19 ರಂದು ನಿಧನರಾದರು. ಸಲ್ಮಾನ್ ಖಾನ್ ಅಭಿನಯದ 'ಮೈನೇ ಪ್ಯಾರ್ ಕೀಯಾ' ಚಿತ್ರದ ಮೂಲಕ ಹೆಚ್ಚು ಖ್ಯಾತಿ ಗಳಿಸಿಕೊಂಡ ರೀಮಾ, ನಂತರ ಬಾಲಿವುಡ್ ನಲ್ಲಿ 'ಖಯಾಮತ್ ಸೇ ಖಯಾಮತ್ ತಕ್', 'ಆಶಿಕಿ', 'ಹಮ್ ಆಪ್ ಕೇ ಹೈ ಕೌನ್', 'ಕಲ್ ಹೋ ನಾ ಹೋ', 'ಕುಚ್ ಕುಚ್ ಹೋತಾ ಹೈ, 'ಹಮ್ ಸಾಥ್ ಸಾಥ್ ಹೈನ' ಸೇರಿದಂತೆ ಇನ್ನು ಹಲವು ಚಿತ್ರಗಳಲ್ಲಿ ರೀಮಾ ಅಭಿನಯಿಸಿದ್ದು, ಇಲ್ಲಿಯವರೆಗೂ ಸುಮಾರು 90 ಕ್ಕೂ ಅಧಿಕ ಚಿತ್ರಗಳಲ್ಲಿ ರೀಮಾ ಲಾಗು ನಟಿಸಿದ್ದರು.

ಬಾಲಿವುಡ್ ಶಕೀಲಾ ಬರಿ ನೆನಪು
1950ರ ದಶಕದ ಜನಪ್ರಿಯ ಬಾಲಿವುಡ್ ನಟಿ ಶಕೀಲ ಅವರು ಸೆಪ್ಟೆಂಬರ್ 20 ರಂದು ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದರು. 1956 ರಲ್ಲಿ ತೆರೆಕಂಡಿದ್ದ 'ಹತಿಮ್ ತೈ', 'ಆರ್ ಪಾರ್' (1954), 'ಚೈನಾ ಟೌನ್', 'ಪೋಸ್ಟ್ ಬಾಕ್ಸ್ 999', 'ದಾಸ್ತಾನ್', 'ಅಘೋಷ್', 'ರಾಜ್ ಮಹಾಲ್', 'ಅರ್ಮಾನ್', 'ಲಾಲ್ ಪುರಿ', 'ರೂಪ್ ಕುಮಾರಿ', 'ಶ್ರೀಮಾನ್ ಸತ್ಯವತಿ' (1960) ಸೇರಿದಂತೆ ಹಲವು ಚಿತ್ರಗಳಲ್ಲಿ ಶಕೀಲಾ ನಟಿಸಿದ್ದರು.

ಕಣ್ಮರೆಯಾದ ಶಶಿ ಕಪೂರ್
ಬಾಲಿವುಡ್ ಸೂಪರ್ ಸ್ಟಾರ್ ನಟ ಶಶಿ ಕಪೂರ್ (79) ಅನಾರೋಗ್ಯದ ಕಾರಣ ಡಿಸೆಂಬರ್ 04 ರಂದು ಮುಂಬೈನ ಕೋಕಿಲಾ ಬೆನ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಪೃಥ್ವಿರಾಜ್ ಕಪೂರ್ ಅವರ ಪುತ್ರ ಈ ಶಶಿ ಕಪೂರ್. ಹಿಂದಿ ಚಿತ್ರರಂಗದ ಶೋ ಮ್ಯಾನ್ ರಾಜ್ ಕಪೂರ್ ಹಾಗೂ ಶಮ್ಮಿ ಕಪೂರ್ ಅವರ ಕಿರಿಯ ಸಹೋದರು. ಸುಮಾರು 116 ಹಿಂದಿ ಚಿತ್ರಗಳಲ್ಲಿ ಶಶಿಕಪೂರ್ ನಟಿಸಿದ್ದರು. 2011ರಲ್ಲಿ ಪದ್ಮಭೂಷಣ ಪ್ರಶಸ್ತಿ ಪಡೆದಿದ್ದ ಶಶಿ ಕಪೂರ್ ಅವರು ಮೂರು ಬಾರಿ ರಾಷ್ಟ್ರಪ್ರಶಸ್ತಿ ಗೆದ್ದಿದ್ದಾರೆ. 62ನೇ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಶಶಿ ಕಪೂರ್ ಕೂಡ ಅವರಿಗೆ ಒಲಿದಿದೆ.

ಕಮಲ ಹಾಸನ್ ಸಹೋದರ
ಖ್ಯಾತ ನಟ ಕಮಲ್ ಹಾಸನ್ ಅವರ ಹಿರಿಯ ಸೋದರ, ನಿರ್ಮಾಪಕ ಚಂದ್ರಹಾಸನ್ (82) ಮಾರ್ಚ್ 20 ರಂದು ಹೃದಯಾಘಾತದಿಂದ ವಿಧಿವಶರಾದರು. ವೃತ್ತಿಯಲ್ಲಿ ವಕೀಲರಾಗಿದ್ದ ಚಂದ್ರಹಾಸನ್ ತಮಿಳು ಮತ್ತು ತೆಲುಗು ಚಿತ್ರಗಳು ಸೇರಿದಂತೆ ಸುಮಾರು 22 ಚಿತ್ರಗಳಲ್ಲಿ ನಟಿಸಿದ್ದಾರೆ. ಜೊತೆಗೆ ತಮ್ಮ ಸ್ವಂತ ನಿರ್ಮಾಣ ಸಂಸ್ಥೆಯಾದ ರಾಜ್ಕಮಲ್ ಫಿಲ್ಮ್ ಇಂಟರ್ ನ್ಯಾಷನಲ್ನ ನಿರ್ವಾಹಕರಾಗಿದ್ದರು. ಕಮಲ್ ಹಾಸನ್ ಅಭಿನಯದ 'ವಿಶ್ವರೂಪಂ', ತೂಂಗಾವನಂ' ಮತ್ತು 'ಶಬಾಷ್ ನಾಯ್ಡು' ಅಂತಹ ಸಿನಿಮಾಗಳ ನಿರ್ಮಾಣದಲ್ಲಿ ಚಂದ್ರಹಾಸನ್ ಕಾರ್ಯವಹಿಸಿದ್ದರು.

ತೆಲುಗು ಖ್ಯಾತ ನಿರ್ದೇಶಕ
ತೆಲುಗು ಚಿತ್ರರಂಗದ ಖ್ಯಾತ ನಿರ್ದೇಶಕ ಹಾಗೂ ನಿರ್ಮಾಪಕ ದಾಸರಿ ನಾರಾಯಣ ರಾವ್ ಅನಾರೋಗ್ಯ ಹಿನ್ನೆಲೆ ಮೇ 30 ರಂದು ನಿಧನರಾದರು. 75 ವರ್ಷದ ದಾಸರಿ ನಾರಾಯಣ ರಾವ್ 'ಪ್ರೇಮಾಭಿಷೇಕಂ', 'ಮೇಘ ಸಂದೇಶಂ', 'ಉಸೇ ರಾಮುಲಮ್ಮ', 'ಸಂಸಾರಂ ಸಾಗರಂ', 'ಸ್ವರ್ಗ ನರಕ', 'ಗೋರಿಂಟಾಕು', 'ಬೊಬ್ಬಿಲಿ ಪುಲಿ' ಸೇರಿದಂತೆ 151ಕ್ಕೂ ಅಧಿಕ ಚಿತ್ರಗಳನ್ನ ನಿರ್ದೇಶನ ಮಾಡಿದ್ದು, 53ಕ್ಕೂ ಅಧಿಕ ಚಿತ್ರಗಳನ್ನ ನಿರ್ಮಾಣ ಮಾಡಿದ್ದರು. ಸುಮಾರು 250ಕ್ಕೂ ಅಧಿಕ ಚಿತ್ರಗಳಲ್ಲಿ ಸಾಹಿತ್ಯಗಾರನಾಗಿ, ಸಂಭಾಷಣೆಕಾರರಾಗಿ ಕೆಲಸ ಮಾಡಿದ್ದಾರೆ.


Click it and Unblock the Notifications











